ADVERTISEMENT

ಬಾಲಿವುಡ್ ಮಂದಿಗೇಕೆ ವೈ+ ಭದ್ರತೆ; ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಾಗ್ದಾಳಿ

ಏಜೆನ್ಸೀಸ್
Published 8 ಸೆಪ್ಟೆಂಬರ್ 2020, 10:12 IST
Last Updated 8 ಸೆಪ್ಟೆಂಬರ್ 2020, 10:12 IST
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ   

ಕೋಲ್ಕತ್ತ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಟ್ವೀಟ್ ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ವೈ+ ಶ್ರೇಣಿ ಭದ್ರತೆ ನೀಡುವ ಕೇಂದ್ರದ ನಿರ್ಧಾರವನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಖಂಡಿಸಿದ್ದಾರೆ.

ಕಂಗನಾಳನ್ನು 'ಬಾಲಿವುಡ್ ಟ್ವಿಟರಾತಿ' ಎಂದು ಕರೆದಿರುವ ಮೊಯಿತ್ರಾ, ಭಾರತದ ಜನಸಂಖ್ಯೆಯ ಪ್ರತಿ ಲಕ್ಷಕ್ಕೆ 138 ರಂತೆ ಪೊಲೀಸರ ಅನುಪಾತ ಹೊಂದಿರುವಾಗ ಆಕೆಗೆ ಏಕೆ ಭದ್ರತೆ ಸಿಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

'ಭಾರತವು ಪ್ರತಿ ಲಕ್ಷಕ್ಕೆ 138ರ ಪೊಲೀಸ್-ಜನಸಂಖ್ಯೆಯ ಅನುಪಾತವನ್ನು ಹೊಂದಿರುವಾಗ ಮತ್ತು ಜಾಗತಿಕವಾಗಿ 71 ದೇಶಗಳ ಪೈಕಿ 5 ನೇ ಸ್ಥಾನದಲ್ಲಿರುವಾಗ ಬಾಲಿವುಡ್ ಟ್ವಿಟರಾತಿ ವೈ+ ಶ್ರೇಣಿ ಭದ್ರತೆಯನ್ನು ಏಕೆ ಪಡೆಯುತ್ತಿದ್ದಾರೆ? ಸಂಪನ್ಮೂಲಗಳ ಉತ್ತಮ ಬಳಕೆಯಾಗುತ್ತಿಲ್ಲ, ಮಿಸ್ಟರ್ ಗೃಹ ಸಚಿವರೇ?' ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ನಟಿ ಕಂಗನಾ ಅವರಿಗೆ ವೈ + ಭದ್ರತೆಯನ್ನು ನೀಡಲಾಗುವುದು ಮತ್ತು 11 ಪೊಲೀಸರ ತಂಡವು ಅವರ ಭದ್ರತೆಯನ್ನು ನೋಡಿಕೊಳ್ಳಲಿದೆ ಎಂದು ಸೋಮವಾರ ಗೃಹ ಸಚಿವಾಲಯ ತಿಳಿಸಿತ್ತು. ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದ್ದರು.

'ಯಾವುದೇ ಫ್ಯಾಸಿಸ್ಟ್ ಶಕ್ತಿಗಳಿಗೆ ರಾಷ್ಟ್ರೀಯವಾದಿ ಧ್ವನಿಗಳನ್ನು ನಿಗ್ರಹಿಸಲು ಸಾಧ್ಯವಾಗುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈಗಿನ ಪರಿಸ್ಥಿತಿಯನ್ನು ಪರಿಗಣಿಸಿದ ಬಳಿಕ ಮುಂಬೈಗೆ ಭೇಟಿ ನೀಡುವಂತೆ ಹೇಳಿದ್ದ ಅಮಿತ್ ಷಾ ಅವರಿಗೆ ನಾನು ಋಣಿಯಾಗಿದ್ದೇನೆ, ಆದರೆ ಈ ದೇಶದ ಮಗಳ ಮಾತುಗಳನ್ನು ಅವರು ಗೌರವಿಸಿದರು. ಜೈ ಹಿಂದ್' ಎಂದು ಕಂಗನಾ ಟ್ವೀಟ್ ಮಾಡಿದ್ದರು.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಮುಂಬೈನಲ್ಲಿ ಅಸುರಕ್ಷಿತ ಭಾವನೆ ಹೊಂದಿದ್ದೇನೆ ಎಂದು ಕಂಗನಾ ಹೇಳಿದ್ದರು. ಇದಕ್ಕೆ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಸಂಜಯ್ ರಾವುತ್, 'ಆಕೆ ದಯಮಾಡಿ ಮುಂಬೈಗೆ ಬರದಂತೆ ವಿನಂತಿಸುತ್ತೇವೆ. ಇದು ಕೇವಲ ಮುಂಬೈ ಪೊಲೀಸರಿಗೆ ಮಾಡಿದ ಅವಮಾನವಲ್ಲ. ಇದರ ಬಗ್ಗೆ ಗೃಹ ಸಚಿವಾಲಯ ಕ್ರಮ ಕೈಗೊಳ್ಳಬೇಕು' ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, 'ಶಿವಸೇನಾ ನಾಯಕ ಸಂಜಯ್‌ ರಾವುತ್ ಮತ್ತು ಇತರೆ ಮುಖಂಡರು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ನಾನು ಮುಂಬೈಗೆ ಹಿಂತಿರುಗಬಾರದೆಂದು ಅವರು ಹೇಳಿದ್ದಾರೆ. ಮುಂಬೈ ನಗರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ? ಎಂದು ಟ್ವೀಟ್ ಮಾಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.