ADVERTISEMENT

ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಪತನ: ಇಬ್ಬರು ಪೈಲಟ್‌ ಸಾವು

ಪಿಟಿಐ
Published 16 ಮಾರ್ಚ್ 2023, 14:23 IST
Last Updated 16 ಮಾರ್ಚ್ 2023, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಟಾನಗರ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಗುರುವಾರ ಬೆಳಿಗ್ಗೆ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್‌ ಜಿಲ್ಲೆಯ ಮಂಡಲ ಬಳಿ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.

ಮೃತಪಟ್ಟ ಪೈಲಟ್‌ಗಳನ್ನು ಲೆಫ್ಟಿನೆಂಟ್‌ ಕರ್ನಲ್ ವಿ.ವಿ.ಬಿ. ರೆಡ್ಡಿ ಮತ್ತು ಸಹ ಪೈಲಟ್‌ ಮೇಜರ್‌ ಜಯಂತ್‌ ಎ. ಎಂದು ಗುರುತಿಸಲಾಗಿದೆ.

ಹೆಲಿಕಾಪ್ಟರ್‌ ಪತನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ವಕ್ತಾರ ಲೆ. ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ.

ADVERTISEMENT

ಹೆಲಿಕಾಪ್ಟರ್ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಿಂದ ಅರುಣಾಚಲ ಪ್ರದೇಶದ ಮಿಸ್ಸಮಾರಿಗೆ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಬೆಳಿಗ್ಗೆ 9.15ರ ಸುಮಾರಿಗೆ ಹೆಲಿಕಾಪ್ಟರ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಸಂಪರ್ಕ ಕಳೆದುಕೊಂಡಿತು ಎಂದು ಅವರು ತಿಳಿಸಿದರು.

ದಿರಂಗ್ ಪ್ರದೇಶದಲ್ಲಿ ಅಪಘಾತಕ್ಕೀಡಾದ ಹೆಲಿಕಾಪ್ಟರ್‌ ಉರಿಯುತ್ತಿರುವುದನ್ನು ಮಧ್ಯಾಹ್ನ 12.30ರ ಸುಮಾರಿಗೆ ಕಂಡ ಸ್ಥಳೀಯರು ಕೂಡಲೇ ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಮಂಜು ಕವಿದ ವಾತಾವರಣ ಮತ್ತು ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.