ADVERTISEMENT

ಮತಕಳ್ಳತನದ 'ಹೈಡ್ರೋಜನ್ ಬಾಂಬ್' ಶೀಘ್ರ ಬಹಿರಂಗ: ರಾಹುಲ್ ಗಾಂಧಿ ಹೇಳಿದ್ದೇನು?

ಪಿಟಿಐ
Published 1 ಸೆಪ್ಟೆಂಬರ್ 2025, 11:48 IST
Last Updated 1 ಸೆಪ್ಟೆಂಬರ್ 2025, 11:48 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ</p></div>

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ಪಟ್ನಾ: ‘ಮತ ಕಳವಿಗೆ ಸಂಬಂಧಿಸಿದಂತೆ ಹೈಡ್ರೋಜನ್‌ ಬಾಂಬ್‌ನಂತಹ ಮಾಹಿತಿಯು ಶೀಘ್ರದಲ್ಲೇ ಬಹಿರಂಗವಾಗಲಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೋಮವಾರ ಇಲ್ಲಿ ಹೇಳಿದರು.

ADVERTISEMENT

‘ಅಣು ಬಾಂಬ್‌ಗಿಂತ ಹೈಡ್ರೋಜನ್‌ ಬಾಂಬ್‌ ದೊಡ್ಡದು. ಶೀಘ್ರದಲ್ಲೇ ಮತ ಕಳ್ಳತನದ ವಾಸ್ತವವು ಜನರಿಗೆ ಗೊತ್ತಾಗಲಿದ್ದು, ಆಗ ದೇಶಕ್ಕೆ ತಮ್ಮ ಮುಖ ತೋರಿಸಲು ಪ್ರಧಾನಿ ನರೇಂದ್ರ ಮೋದಿಗೆ ಸಾಧ್ಯವಾಗದು’ ಎಂದು ‘ಮತದಾರ ಅಧಿಕಾರ ಯಾತ್ರೆ’ಯ ಸಮಾರೋಪದಲ್ಲಿ ಹೇಳಿದರು.

‘ಮತ ಕಳ್ಳತನ ಎಂದರೆ ಹಕ್ಕುಗಳ ಕಳ್ಳತನ. ಪ್ರಜಾಪ್ರಭುತ್ವದ ಕಳ್ಳತನ. ಉದ್ಯೋಗದ ಕಳ್ಳತನ. ಬಿಜೆಪಿಯವರು ನಿಮ್ಮ ಪಡಿತರ ಚೀಟಿ ಹಾಗೂ ಇತರ ಹಕ್ಕುಗಳನ್ನು ಕಸಿದುಕೊಳ್ಳಲಿದ್ದಾರೆ’ ಎಂದು ರಾಹುಲ್‌ ಹೇಳಿದರು.

‘ಮಹಾತ್ಮ ಗಾಂಧಿ ಅವರ ಹತ್ಯೆಯ ಹಿಂದಿದ್ದ ಶಕ್ತಿಗಳೇ ಇದೀಗ ಸಂವಿಧಾನದ ಹತ್ಯೆಗೂ ಮುಂದಾಗಿವೆ. ನಾವು ಇದಕ್ಕೆ ಅವಕಾಶ ಕೊಡಲ್ಲ. ಅದಕ್ಕಾಗಿಯೇ ಈ ಯಾತ್ರೆ ನಡೆಸಿದ್ದು, ಜನರಿಂದ ಉತ್ತಮ ಸ್ಪಂದನ ಸಿಕ್ಕಿದೆ. ಅಸಂಖ್ಯಾತ ಜನರು ಮತ ಕಳ್ಳತನದ ವಿರುದ್ಧ ತಮ್ಮ ಧ್ವನಿ ಮೊಳಗಿಸಿದ್ದಾರೆ’ ಎಂದರು.

ಮೆರವಣಿಗೆಗೆ ತಡೆ: ‘ಮತದಾರ ಅಧಿಕಾರ ಯಾತ್ರೆ’ಯ ಸಮಾರೋಪದ ಅಂಗವಾಗಿ ಕಾಂಗ್ರೆಸ್‌ ಪಕ್ಷ ನಡೆಸಿದ ‘ಗಾಂಧಿ ಸೆ ಅಂಬೇಡ್ಕರ್‌’ ಮೆರವಣಿಗೆಯನ್ನು ಪೊಲೀಸರು ಮಧ್ಯದಲ್ಲೇ ತಡೆದರು.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಟ್ನಾದ ಗಾಂಧಿ ಮೈದಾನದಿಂದ ಈ ಮೆರವಣಿಗೆ ಹೊರಟಿತು. ಮಹಿಳೆಯರೂ ಸೇರಿದಂತೆ ಅಸಂಖ್ಯಾತ ಬೆಂಬಲಿಗರು ಯಾತ್ರೆಯಲ್ಲಿ ಭಾಗಿಯಾದರು.

ಮೆರವಣಿಗೆಯುದ್ದಕ್ಕೂ ‘ಮತ ಕಳ್ಳರೇ, ಅಧಿಕಾರದ ಕುರ್ಚಿಯನ್ನು ಬಿಡಿ’ ಎಂಬ ಘೋಷಣೆಗಳು ಸೇರಿದಂತೆ ರಾಹುಲ್‌ ಗಾಂಧಿ ಪರ ಜಯ ಘೋಷ ಮೊಳಗಿದವು. ಡಾಕ್ ಬಂಗಲೆ ಚೌಕದಲ್ಲಿ ಜಮಾಯಿಸಿದ್ದ ಜನರನ್ನು ಉದ್ದೇಶಿಸಿ ಪಕ್ಷಗಳ ಮುಖಂಡರು ಮಾತನಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ವಿಕಾಸಶೀಲ ಇನ್ಸಾನ್‌ ಪಕ್ಷದ ಮುಖ್ಯಸ್ಥ ಮುಖೇಶ್‌ ಸಹಾನಿ, ಸಿಪಿಐ (ಎಂಎಲ್‌) ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಸಿಪಿಐನ ಆ್ಯನಿ ರಾಜಾ, ಟಿಎಂಸಿ ಸಂಸದ ಯೂಸುಫ್‌ ಪಠಾಣ್‌, ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಸೇರಿದಂತೆ ‘ಇಂಡಿಯಾ’ ಕೂಟದ ಇನ್ನಿತರ ನಾಯಕರು ಭಾಗಿಯಾಗಿದ್ದರು.

ಕಸ ಎಸೆಯುವಲ್ಲಿ ಬಿಸಾಡಲಿವೆ: ಖರ್ಗೆ

‘ಸಮಾಜವಾದವನ್ನು ಪ್ರತಿಪಾದಿಸುತ್ತಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಇದೀಗ ಕಮಲದ ಮಡಿಲಲ್ಲಿ ಮಲಗಿದ್ದು, ಆರ್‌ಎಸ್‌ಎಸ್‌–ಬಿಜೆಪಿಯು ಅವರನ್ನು ಕಸ ಎಸೆಯುವ ಜಾಗಕ್ಕೆ ಬಿಸಾಕಲಿವೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತ ಕಳ್ಳತನದ ಮೂಲಕ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಮತದಾರರ ಅಧಿಕಾರ ಯಾತ್ರೆಗೆ ಅಡ್ಡಿಪಡಿಸುವ ಪ್ರಯತ್ನ ನಡೆದರೂ ಮಹಾಘಟಬಂಧನ್‌ ಹಾಗೂ ಬಿಹಾರದ ಜನರು ಯಾತ್ರೆಯಿಂದ ಹಿಂದೆ ಸರಿಯಲಿಲ್ಲ’ ಎಂದರು.

‘ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯ ಡಬಲ್ ಎಂಜಿನ್‌ ಸರ್ಕಾರವು ಬದಲಾಗಲಿದ್ದು, ಬಡವರು, ಹಿಂದುಳಿದವರು, ದಲಿತರು ಹಾಗೂ ಮಹಿಳೆಯರ ಪರ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ತಿಳಿಸಿದರು.

ರಾಹುಲ್ ಹೇಳಿಕೆ ಅಸಂಬದ್ಧ: ಬಿಜೆಪಿ

ನವದೆಹಲಿ: ಮತ ಕಳ್ಳತನಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಈ ಹಿಂದೆ ಹೇಳಿದ್ದ ‘ಅಣು ಬಾಂಬ್‌’ ಠುಸ್ಸಾಗಿದ್ದು, ಈಗಿನ ಹೈಡ್ರೋಜನ್‌ ಬಾಂಬ್‌ ಸಹ ಅಸಂಬದ್ಧ ಹೇಳಿಕೆಯಾಗಿದೆ ಎಂದು ಬಿಜೆಪಿ ಟೀಕಿಸಿದೆ.

‘ಕಾಂಗ್ರೆಸ್‌ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಆರೋಪಗಳ ಸುರಿಮಳೆಗೈಯುತ್ತಿದ್ದರೂ ಜನರು ಮಾತ್ರ ಮೋದಿಯವರ ಮೇಲೆ ಅಪಾರ ನಂಬಿಕೆ ಹೊಂದಿದ್ದು, ‘ಕೈ’ ಪಡೆಯನ್ನು ತಿರಸ್ಕರಿಸುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ರವಿಶಂಕರ ಪ್ರಸಾದ್‌ ಹೇಳಿದ್ದಾರೆ.

‘ಬಿಹಾರದಲ್ಲಿ ಕಾಂಗ್ರೆಸ್‌ಗೆ ನೆಲೆಯೇ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಯಾತ್ರೆಯು ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಅವರು ಹೇಳಿದರು.

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಭ್ರಷ್ಟಾಚಾರದ ಪಿತಾಮಹ. ಅವರು ಅಕ್ರಮಗಳ ಬಗ್ಗೆ ಮಾತನಾಡಬಾರದು
-ತೇಜಸ್ವಿ ಯಾದವ್‌, ಆರ್‌ಜೆಡಿ ಮುಖಂಡ
ಬಿಜೆಪಿಗೆ ಅನುಕೂಲ ಮಾಡಿಕೊಡಲಿಕ್ಕಾಗಿಯೇ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುತ್ತಿದೆ.
-ಹೇಮಂತ್‌ ಸೊರೇನ್‌, ಜಾರ್ಖಂಡ್‌ ಮುಖ್ಯಮಂತ್ರಿ
ಚುನಾವಣಾ ಆಯೋಗಕ್ಕೆ 18 ಸಾವಿರ ಪ್ರಮಾಣಪತ್ರ ಸಲ್ಲಿಸಿದರೂ 14 ಅರ್ಜಿಗಳಿಗೆ ಮಾತ್ರ ಸ್ಪಂದಿಸಿದೆ
-ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.