ADVERTISEMENT

ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡುವುದಿಲ್ಲ ಎಂದ ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 22 ಮೇ 2019, 10:53 IST
Last Updated 22 ಮೇ 2019, 10:53 IST
   

ನವದೆಹಲಿ: ಮತ ಎಣಿಕೆಯ ದಿನ ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿದ ನಂತರವೇ ಮತಯಂತ್ರದಲ್ಲಿ ದಾಖಲಾಗಿರುವ ಮತಗಳನ್ನು ಬಹಿರಂಗ ಪಡಿಸಬೇಕು ಎಂದು ವಿರೋಧ ಪಕ್ಷಗಳ ನಾಯಕರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು.ಆದರೆ ಈ ಒತ್ತಾಯವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚುನಾವಣಾ ಆಯೋಗದ ಆಯುಕ್ತರಾದ ಅಶೋಕ್ ಲವಾಸಾ ಮತ್ತು ಸುಶೀಲ್ ಚಂದ್ರ ಅವರ ಜತೆ ಸಮಾಲೋಚನೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರಾ ಅವರು,ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿದ ನಂತರವೇ ಮತಯಂತ್ರದಲ್ಲಿ ದಾಖಲಾಗಿರುವ ಮತಗಳನ್ನು ಬಹಿರಂಗ ಪಡಿಸಬೇಕು ಎಂಬ ವಿಪಕ್ಷ ನಾಯಕರ ಒತ್ತಾಯವನ್ನು ನಿರಾಕರಿಸಲಾಗಿದೆ ಎಂದಿದ್ದಾರೆ.

ಈ ಬಾರಿ ‘ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ಮತಗಟ್ಟೆಗಳನ್ನು ಆಯ್ಕೆ ಮಾಡಿ, ಅಲ್ಲಿಯ ವಿವಿಪ್ಯಾಟ್‌ ಮತಗಳನ್ನು ಇವಿಎಂಗಳಿಗೆ ತಾಳೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದು ಅದಕ್ಕೆ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮಂಗಳವಾರ ಆಯೋಗವನ್ನು ಭೇಟಿ ಮಾಡಿರುವ 22 ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ‘ಮೊದಲು ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿ ಆನಂತರ ಅದನ್ನು ಇವಿಎಂಗಳಿಗೆ ತಾಳೆ ಮಾಡಬೇಕು. ಒಂದುಕಡೆ ವ್ಯತ್ಯಾಸ ಕಂಡುಬಂದರೂ ಆ ವಿಧಾನಸಭಾ ಕ್ಷೇತ್ರದ ಎಲ್ಲ ವಿವಿಪ್ಯಾಟ್‌ಗಳನ್ನೂ ತಾಳೆ ಮಾಡಬೇಕು’ ಎಂದು ಒತ್ತಾಯಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.