ನವದೆಹಲಿ: ಚೀನಾ ಪಡೆಗಳು 1962ರಲ್ಲಿ ಆಕ್ರಮಣ ಮಾಡಿದ್ದ ವೇಳೆ, ಗಡಿಯಲ್ಲಿನ ಪರಿಸ್ಥಿತಿ ಕುರಿತಂತೆ ಆಗ ಸಂಸತ್ನಲ್ಲಿ ಚರ್ಚೆ ನಡೆದಿತ್ತು. ಇದೇ ವಿಚಾರವಾಗಿ ಆಗಿನಂತೆ ಈಗ ಏಕೆ ಚರ್ಚೆ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಮಂಗಳವಾರ ಪ್ರಶ್ನಿಸಿದೆ.
ಮುಂದಿನ ವಾರ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ವಿಚಾರ ಕುರಿತು ಚರ್ಚೆ ನಡೆಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪುವರು ಎಂಬ ಭರವಸೆ ಇದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ದೇಶದ ಭದ್ರತೆ ಹಾಗೂ ಆರ್ಥಿಕತೆಗೆ ಸಂಬಂಧಿಸಿ ಚೀನಾದಿಂದ ಎದುರಾಗಿರುವ ಸವಾಲುಗಳಂತಹ ಮಹತ್ವದ ವಿಚಾರಗಳ ಕುರಿತು ರಾಷ್ಟ್ರೀಯ ಸಹಮತ ರೂಪಿಸುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಪಾಕಿಸ್ತಾನವು ಚೀನಾ ನಿರ್ಮಿತ ಜೆ–35 ಯುದ್ಧವಿಮಾನಗಳನ್ನು ಮುಂಬರುವ ದಿನಗಳಲ್ಲಿ ಖರೀದಿಸುವ ಸಾಧ್ಯತೆ ಇದೆ. ವಿರಳ ಲೋಹಗಳು, ರಸಗೊಬ್ಬರಗಳು, ಸುರಂಗ ಕೊರೆಯುವ ಯಂತ್ರಗಳನ್ನು ಭಾರತಕ್ಕೆ ರಫ್ತು ಮಾಡುವುದರ ಮೇಲೆ ಚೀನಾ ನಿರ್ಬಂಧ ವಿಧಿಸಿದೆ’ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.