ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಅರೆಬೈಲ್ ಬಳಿ ನಡೆದ ಭೀಕರ ಲಾರಿ ಅಪಘಾತದಲ್ಲಿ ಹಾವೇರಿ ಜಿಲ್ಲೆಯ ಸವಣೂರಿನ 10 ಜನ ಮೃತಪಟ್ಟು 10 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರಿಗೆ ಹುಬ್ಬಳ್ಳಿ ಕೀಮ್ಸ್ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಬೆಳಿಗ್ಗೆ 6 ಗಂಟೆಗೆ ಘಟನಾ ಸ್ಥಳದಿಂದ ಗಾಯಾಳುಗಳನ್ನು ಕೀಮ್ಸ್ ಅಸ್ಪತ್ರೆಗೆ ಕರೆದುಕೊಂಡು ಬಂದರೂ ಆ ಸಮಯದಲ್ಲಿ ಚಿಕಿತ್ಸೆ ನೀಡಲು ಯಾವೊಬ್ಬ ವೈದ್ಯರೂ ಇರಲಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
'ಬೆಳಿಗ್ಗೆ 6 ಗಂಟೆಗೆ ಗಾಯಾಳುಗಳನ್ನು ಅಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವು. ಆದರೆ ಆ ಸಮಯದಲ್ಲಿ ಚಿಕಿತ್ಸೆ ನೀಡಲು ಯಾವೊಬ್ಬ ವೈದ್ಯರೂ ಇಲ್ಲಿ ಇರಲಿಲ್ಲ. ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಕೊಡುವುದನ್ನು ಬಿಟ್ಟು, ಚೀಟಿ ಮಾಡಿ, ಆಧಾರ್ ಕಾರ್ಡ್ ಕೊಡಿ ಎನ್ನುತ್ತಾರೆ. ಜನಪ್ರತಿನಿಧಿಗಳಿಂದ, ದೊಡ್ಡವರಿಂದ ಹೇಳಿಸಿದರೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ಬಡವರು ಏನು ಮಾಡಬೇಕು. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಇಲ್ಲಿಯೇ ಪ್ರತಿಭಟನೆ ನಡೆಸುತ್ತೇವೆ' ಎಂದು ಸವಣೂರು ನಿವಾಸಿ ಜುಬೇರ್ ಆಕ್ರೋಶ ವ್ಯಕ್ತಪಡಿಸಿದರು.
'ಮಿನಿಲಾರಿಯಲ್ಲಿ ತರಕಾರಿ, ಹಣ್ಣು ತುಂಬಿಕೊಂಡು ಸವಣೂರಿನಿಂದ ಕುಮಟಾಕ್ಕೆ ರಾತ್ರಿ 12ಕ್ಕೆ ತೆರಳಿದ್ದರು. ನಸುಕಿನ ಜಾವ 2.30ರ ವೇಳೆ ಅರಬೈಲ್ ಘಟ್ಟದಲ್ಲಿ ಲಾರಿ ಉರುಳಿದೆ. ಅದರಲ್ಲಿದ್ದ ಎಲ್ಲರೂ ಹಮಾಲಿ ಕಾರ್ಮಿಕರು, ವ್ಯಾಪಾರಸ್ಥರು. ಕುಮಟಾದಲ್ಲಿ ನಡೆಯುವ ಬುಧವಾರ ಸಂತೆ ಮುಗಿಸಿಕೊಂಡು ವಾಪಸ್ಸು ಸವಣೂರಿಗೆ ಬರುವವರಾಗಿದ್ದರು' ಎಂದು ಜುಬೇರ್ ಹೇಳಿದರು.
ಗಾಯಗೊಂಡ 11 ಮಂದಿಯನ್ನು ಬೆಳಿಗ್ಗೆ 6.30ಕ್ಕೆ ಆಂಬುಲೆನ್ಸ್ನಲ್ಲಿ ಕೆಎಂಸಿ-ಆರ್ಐ ಆಸ್ಪತ್ರೆಗೆ ಕರೆತರಲಾಗಿತ್ತು. ಅವರಲ್ಲಿ ಸವಣೂರಿನ ಜಲಾಲ್ ಬಾಷಾ(27) ಆಸ್ಪತ್ರೆಗೆ ದಾಖಲಾಗುವ ಪೂರ್ವವೇ ಮೃತಪಟ್ಟಿದ್ದಾರೆ. ಉಳಿದವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಗಾಯಗೊಂಡವರೆಲ್ಲ ತರಕಾರಿ ವ್ಯಾಪರಸ್ಥರು, ಹಮಾಲಿ ಕಾರ್ಮಿಕರಾಗಿದ್ದಾರೆ.
ಮಲ್ಲಿಕ್ ರಿಹಾನ್(22), ಅಪ್ಸರ್ಖಾನ್(20), ಅಶ್ರಫ್ ಎಲ್(20), ನಿಜಾಮುದ್ದೀನ್ ಸುಧಾಗರ್(28) ಖಾಜಾ ಹುಸೇನ್(30), ಖಾಜಾ ಮೈನ್(21), ಮಹ್ಮದ್ ಸಾದಿಕ್(21) ಮರ್ದಾನ್ ಸಾಬ್(21), ಇರ್ಫಾನ್ ಗುಡಿಗೇರಿ(18), ಜಾಫರ್ ಸವಣೂರು(28) ಗಾಯಗೊಂಡವರು.
ಫಯಾಜ್ ಜಮಖಂಡಿ, ವಸಿಂ ಮುಡಗೇರಿ, ಇಜಾಜ್ ಮುಲ್ಲಾ, ಸಾದಿಕ್ ಫರಾದ್, ಗುಲಾಂ ಜವಳಿ, ಇಮ್ತಿಯಾಜ್ ಮುಳಕೇರಿ, ಅಲ್ಜಾಜ್ ಮಂಡಕ್ಕಿ, ಜಿಲಾನಿ ಜಕಾತಿ, ಅಸ್ಲಾಂ ಬೆಣ್ಣೆ, ಜಲಾಲ್ ಬಾಷಾ ಮೃತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.