ADVERTISEMENT

ಹಾಸನ|ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ: ಸಿಹಿ ಹಂಚಿ ಸಂಭ್ರಮಿಸಿದ ಕುಟುಂಬಸ್ಥರು

​ಪ್ರಜಾವಾಣಿ ವಾರ್ತೆ
Published 21 ಮೇ 2025, 7:46 IST
Last Updated 21 ಮೇ 2025, 7:46 IST
<div class="paragraphs"><p>ಸಾಹಿತಿ ಬಾನು ಮುಷ್ತಾಕ್‌&nbsp;ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದರು.</p></div>

ಸಾಹಿತಿ ಬಾನು ಮುಷ್ತಾಕ್‌ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದರು.

   

ಹಾಸನ: ನಗರದ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದ್ದರಿಂದ ತವರಿನಲ್ಲಿ ಸಂಭ್ರಮ ಮನೆ ಮಾಡಿದೆ. ಲೇಖಕಿ ಬಾನು ಮುಷ್ತಾಕ್‌ ಅವರ ನಗರದ ಪೆನ್ಷನ್ ಮೊಹಲ್ಲಾದ ಮನೆಯಲ್ಲಿ ಕುಟುಂಬದ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.

ಬಾನು ಅವರ ಪುತ್ರ ತಾಹೀರ್, ಸೊಸೆ ಯಾಸಿನ್ ಹಾಗೂ ಮೊಮ್ಮಗಳಿಗೆ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡ ಅವರ ಪತಿ ಮುಷ್ತಾಕ್, ‘ಈ ಗೌರವ ಕರ್ನಾಟಕಕ್ಕೆ, ವಿಶೇಷವಾಗಿ ಹಾಸನ ಜಿಲ್ಲೆಗೆ ಸಿಕ್ಕಿರುವುದು ಅತೀವ ಸಂತೋಷದ ವಿಷಯ. ಇಂಗ್ಲೆಂಡ್‌ನಲ್ಲಿ ಪ್ರಶಸ್ತಿ ಘೋಷಣೆಯವರೆಗೂ ಕುತೂಹಲದಿಂದ ಕಾದಿದ್ದೆವು. ಘೋಷಣೆಯಾದಾಗ ನಂಬಲಾಗಲಿಲ್ಲ’ ಎಂದು ಹೇಳಿದರು.

ADVERTISEMENT

ಅವರ ಪುತ್ರ ತಾಹೀರ್‌ ಮಾತನಾಡಿ, ‘ಪ್ರಶಸ್ತಿ ಬರುವವರೆಗೂ ಕುತೂಹಲವಿತ್ತು. ಇನ್ನೂ ಆ ಗುಂಗಿನಿಂದ ಹೊರಬರಲು ಆಗಿಲ್ಲ. ಈ ಹಿಂದೆ ಎಲ್ಲ ಬೂಕರ್ ಪ್ರಶಸ್ತಿಗಳು ಕಾದಂಬರಿಗೆ ಸಿಕ್ಕಿದ್ದವು. ಆದರೆ ಈ ಬಾರಿ ಆಯ್ದ ಕತೆಗಳಿಗೆ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನ ಇತ್ತು. ಆ ಅನುಮಾನ ಮೀರಿ ನನ್ನ ತಾಯಿಯ ಕೃತಿಗೆ ಪ್ರಶಸ್ತಿ ಸಿಕ್ಕಿದೆ. ಇದು ನಮ್ಮ ನಾಡಿಗೆ ಹೆಮ್ಮೆಯ ವಿಚಾರ. ಅವರು ಮೊದಲಿನಿಂದಲೂ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ಪ್ರಶಸ್ತಿ ಸಿಕ್ಕಿರುವುದು ನಮಗೆ ಸಂತಸ ತಂದಿದೆ’ ಎಂದು ತಿಳಿಸಿದರು.

‘ಕೊನೆಯ ಹಂತದವರಗೆ ಕುತೂಹಲ‌ ಇತ್ತು. ಇದೀಗ ಬೂಕರ್‌ ಪ್ರಶಸ್ತಿಗೆ ಭಾಜನರಾಗಿರುವುದು ಎಲ್ಲರೂ ಹೆಮ್ಮೆ ಪಡುವಂತಾಗಿದೆ. ಅದರಲ್ಲೂ ಹಾಸನದ ಜನತೆಗೆ ಸಂಭ್ರಮದ ಕ್ಣಣವಾಗಿದೆ. ಪ್ರತಿ ಭಾರತೀಯರು, ಅದರಲ್ಲೂ ಮಹಿಳೆಗೆ‌ ಸಂದ ಗೌರವ ಇದಾಗಿದೆ. ‌ರಾಜ್ಯವೇ ಸಂಭ್ರಮಸುವ ದಿನವಾಗಿದೆ’ ಎಂದು ಅನನ್ಯ ಟ್ರಸ್ಟ್‌ ಅಧ್ಯಕ್ಷೆ ಕೆ.ಟಿ.ಜಯಶ್ರೀ ಹೇಳಿದರು.

‘ಹಾಸನ ಜಿಲ್ಲಾ ವಕೀಲರ ಸಂಘದ ಹಿರಿಯ ಸದಸ್ಯೆಯಾಗಿರುವ ಬಾನು ಮುಸ್ತಾಕ್ ಅವರ ಸಣ್ಣ ಕಥೆಯಾದ ಹಾರ್ಟ್ ಆಫ್ ಲ್ಯಾಂಪ್ ಕೃತಿಗೆ ಬೂಕರ್ ಪ್ರಶಸ್ತಿ ಬಂದಿರುವುದು ಕನ್ನಡ ಭಾಷೆಗೆ ಜಿಲ್ಲೆಗೆ ಸಂದ ಗೌರವ. ಬಾನು ಮುಸ್ತಾಕ್ ಅವರು ಮಲೆನಾಡಿನ ಸಣ್ಣ ಸಣ್ಣ ಕಥೆಗಳನ್ನ ಬರೆದು ಇವತ್ತು ವಿಶ್ವದಲ್ಲಿ ಜನ ಮನ್ನಣೆ ಗಳಿಸಿರುವುದು ಹೆಮ್ಮೆಯ ವಿಷಯ’ ಎಂದು ವಕೀಲರ ಸಂಘದ ಸದಸ್ಯ ಚೆನ್ನಂಗಿಹಳ್ಳಿ ಶ್ರೀಕಾಂತ ಸಂತಸ ಹಂಚಿಕೊಂಡರು.

‘ನಮ್ಮ ಕನ್ನಡ ಭಾಷೆಗೆ ಪ್ರಶಸ್ತಿ ಸಿಕ್ಕಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ. ಬಾನು ಮುಷ್ತಾಕ್ ಅವರಿಂದ ಕನ್ನಡ ಭಾಷೆಗೆ ಮತ್ತಷ್ಟು ಕೃತಿಗಳು ಬರಲಿ. ಸಾಹಿತ್ಯದಲ್ಲಿ ಇನ್ನೂ ಮೇಲಕ್ಕೆ ಏರಲಿ’ ಎಂದು ಆಶಿಸಿದ್ದಾರೆ.

‘ಸಾಹಿತ್ಯ ಕ್ಷೇತ್ರದಲ್ಲಿ ಭಾರತಕ್ಕೆ ಒಂದು ಸ್ಥಾನಮಾನ ನೀಡುವ, ಕನ್ನಡಿಗರೆಲ್ಲ ಹೆಮ್ಮೆ ಪಡುವ, ಅದರಲ್ಲೂ ಹಾಸನದವರಾದ ನಮ್ಮ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಸಾಹಿತಿಗಳಾದ ಬಾನು ಮುಷ್ತಾಕ್ ಅವರ ಕೃತಿಗೆ ಈ ಬಾರಿಯ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಿಕ್ಕಿದ್ದು, ಕನ್ನಡ ಸಾಹಿತ್ಯಕ್ಕೆ ಸಿಕ್ಕ ಮೊದಲ ಗರಿಮೆ. ಕನ್ನಡಿಗರಾದ, ಅದರಲ್ಲೂ ಹಾಸನದವರಾದ ಬಾನು ಮುಷ್ತಾಕ್ ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು. ಜೊತೆಗೆ ಕನ್ನಡ ಕೃತಿಯನ್ನ ಇಂಗ್ಲಿಷ್‌ಗೆ ಅನುವಾದಿಸಿ ಜಗದೆಲ್ಲೆಡೆ ಪಸರಿಸುವಂತೆ ಮಾಡಿದ ದೀಪಾ ಭಸ್ತಿ ವರಿಗೂ ಅಭಿನಂದನೆಗಳು’ ಎಂದು ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ನವೀನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

‘ಕನ್ನಡ ನಾಡಿನ ಹೆಮ್ಮೆಯ ಪುತ್ರಿ, ಹಲ್ಮಿಡಿ ಶಾಸನ ದೊರೆತ ಹೊಯ್ಸಳ ನಾಡಿನ ಹೆಣ್ಣು ಮಗಳು ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆತಿರುವುದು ಕನ್ನಡ ನಾಡಿನ ಹಿರಿಮೆಗೆ ಹೆಮ್ಮೆ ಎನಿಸುತ್ತದೆ. ಅವರ ಸಣ್ಣ ಕತೆಗಳ ಅನುವಾದಿತ ‘ಹಾರ್ಟ್ ಲ್ಯಾಂಪ್’ ಕೃತಿಗೆ ಲಭಿಸಿದ ಬೂಕರ್‌ ಪ್ರಶಸ್ತಿ ಸಿಕ್ಕಿರುವುದು ಕನ್ನಡಕ್ಕೆ ಸಿಕ್ಕ ಮೊದಲ ಗೌರವ ಇದಾಗಿದೆ. ಈ ಸಂಭ್ರಮದ ಕ್ಷಣವು ಕನ್ನಡ ನಾಡಿನ ಏಳು ಕೋಟಿ ಕನ್ನಡಿಗರಿಗೆ ಸಂತಸ ತಂದಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ನಾಯಕರಹಳ್ಳಿ ಮಂಜೇಗೌಡ ಹಾಗೂ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ನಾಯಕರಹಳ್ಳಿ ಹೇಳಿದ್ದಾರೆ.

‘ಬಾನು ಮುಷ್ತಾಕ್ ಅವರು ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿದ್ದು, ಕನ್ನಡಿಗರು, ಅದರಲ್ಲೂ ಹಾಸನದವರಾದ ನಾವೆಲ್ಲಾ ಬಾನು ಮುಷ್ತಾಕ್‌ ಅವರಿಂದಾಗಿ ಹೆಮ್ಮೆಯ ಶಿಖರವೇರಿದ್ದೇವೆ. ಅವರಿಗೆ ಪ್ರೀತಿ ಪೂರ್ವಕ ಅಭಿನಂದನೆಗಳು. ಜೊತೆಗೆ ದೀಪಾ ಭಸ್ತಿ ಅವರಿಗೂ ಅಭಿನಂದನೆಗಳು’ ಎಂದು ಎಂ.ಜಿ. ಪೃಥ್ವಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.