ADVERTISEMENT

ರಾಜ್ಯದ ಹಲವೆಡೆ ಗಾಂಧಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 6:36 IST
Last Updated 2 ಅಕ್ಟೋಬರ್ 2018, 6:36 IST
ಮಹಾತ್ಮ ಗಾಂಧೀಜಿ‌ ಕುರಿತು ವಾರ್ತಾ ಇಲಾಖೆಯಿಂದ ಸಿದ್ಧಪಡಿಸಿದ್ದ ಸಾಕ್ಷ್ಯ ಚಿತ್ರಗಳನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ವೀಕ್ಷಿಸಿದರು. –ಪ್ರಜಾವಾಣಿ ಚಿತ್ರ
ಮಹಾತ್ಮ ಗಾಂಧೀಜಿ‌ ಕುರಿತು ವಾರ್ತಾ ಇಲಾಖೆಯಿಂದ ಸಿದ್ಧಪಡಿಸಿದ್ದ ಸಾಕ್ಷ್ಯ ಚಿತ್ರಗಳನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ವೀಕ್ಷಿಸಿದರು. –ಪ್ರಜಾವಾಣಿ ಚಿತ್ರ   

ರಾಯಚೂರು: ಮಹಾತ್ಮ ಗಾಂಧೀಜಿ‌ ಅವರ 150ನೇ ಜನ್ಮ ದಿನಾಚರಣೆ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರು ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ವಾರ್ತಾ ಇಲಾಖೆಯಿಂದ ಸಿದ್ಧಪಡಿಸಿದ್ದ ಸಾಕ್ಷ್ಯ ಚಿತ್ರಗಳನ್ನು ವೀಕ್ಷಿಸಿದರು. ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಎಬ್.ಎಸ್. ಬೋಸರಾಜ, ಶಾಸಕ ಡಾ. ಶಿವರಾಜ ಪಾಟೀಲ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಇದ್ದರು.


ಬೆಳಗಾವಿ: ಇಲ್ಲಿನ ತಿಲಕವಾಡಿಯ ವೀರಸೌಧದಲ್ಲಿ ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.

ಸಂಸದ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್ ಮಧುಶ್ರೀ ಪೂಜಾರಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದರು.

*


ಕಸ ಗುಡಿಸಿದ ಕುಲಪತಿ, ಕುಲಸಚಿವ
ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗಾಂಧಿ ಜಯಂತಿ ಹಾಗೂ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಕುಲಪತಿ ಪ್ರೊ.ಎಸ್.ಆರ್.ನಿರಂಜನ, ಕುಲಸಚಿವರಾದ ಪ್ರೊ.ಸಿ.ಸೋಮಶೇಖರ, ಪ್ರೊ.ಡಿ.ಎಂ.ಮದರಿ, ಹಣಕಾಸು ಅಧಿಕಾರಿ ಪ್ರೊ.ರಾಜನಾಳಕರ್ ಲಕ್ಷ್ಮಣ ಅವರು ಪೊರಕೆ ಹಿಡಿದುಕೊಂಡು ಕಸ ಗುಡಿಸಿದರು.

ಬಳಿಕ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗಾಂಧಿ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ವೇಳೆ ಮಾತನಾಡಿದ ಕುಲಪತಿ ನಿರಂಜನ, ‘ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತಮ್ಮ ಸುತ್ತಲಿನ ಪ್ರದೇಶವನ್ನು ತಾವೇ ಸ್ವಚ್ಛ ಮಾಡಬೇಕು. ಅಕ್ಕಪಕ್ಕದ ಮನೆಯವರಿಗೂ ಸ್ವಚ್ಛತೆಯ ಬಗ್ಗೆ ತಿಳಿಹೇಳಬೇಕು’ ಎಂದರು.

ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ಧೂರ್ ಶಾಸ್ತ್ರಿ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

*


ಕಸ ಗುಡಿಸಿದ ಜಿಲ್ಲಾಧಿಕಾರಿ, ನ್ಯಾಯಾಧೀಶ
ಚಿತ್ರದುರ್ಗ: ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ಹಾಗೂ ನ್ಯಾಯಾಧೀಶ ವಸ್ತ್ರಮಠ ಅವರು ಕಸಗುಡಿಸಿದರು.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬೆಳಿಗ್ಗೆ 6.30 ರಿಂದ 8.30ರವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ವಸ್ತ್ರಮಠ ಅವರು ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಸ್ವಚ್ಛತಾ ಕಾರ್ಯ ಆರಂಭವಾಯಿತು.

ನರ್ಸಿಂಗ್ ಕಾಲೇಜು, ಜಿಲ್ಲಾಡಳಿತ ಸಿಬ್ಬಂದಿ ಸೇರಿ ನೂರಕ್ಕೂ ಹೆಚ್ಚು ಜನ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಸಲಕರಣೆ ಹಿಡಿದ ಅಧಿಕಾರಿಗಳು ಕಸ ಗುಡಿಸಿ, ವಾಹನಗಳಿಗೆ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.