ADVERTISEMENT

ಸಾಲಮನ್ನಾ ಯೋಜನೆ ಕುರಿತ ಸುಮಲತಾ ಹೇಳಿಕೆಗೆ ಮುಖ್ಯಮಂತ್ರಿ ಆಕ್ಷೇಪ 

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 10:18 IST
Last Updated 5 ಏಪ್ರಿಲ್ 2019, 10:18 IST
ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸುಮಲತಾ
ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸುಮಲತಾ   

ಬೆಂಗಳೂರು: ಸಾಲಮನ್ನಾ ಕುರಿತು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ (ಸುಮಲತಾ) ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಣಕಾಸು ಇಲಾಖೆ ಅಧಿಕಾರಿಗಳು ರೈತರ ಸಾಲಮನ್ನಾ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾದ ಅವರ ಹೇಳಿಕೆಯು ಸತ್ಯಕ್ಕೆ ದೂರವಾದುದು.

‘ಈ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂದು ಸ್ವತಃ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ನಾನು ಕೂಡ ಅವರೊಂದಿಗೆ ಚರ್ಚಿಸಿದ್ದು ತಾವು ಅಂಥ ಮಾತುಗಳನ್ನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯು (ಸುಮಲತಾ) ಇಂತಹ ಗೊಂದಲಕಾರಿ ಹೇಳಿಕೆ ನೀಡಿ ನಾಡಿನ ಜನರ ಅದರಲ್ಲೂ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ಮಂಡ್ಯದ ಪಕ್ಷೇತರ ಅಭ್ಯರ್ಥಿ ಯಾವುದೇ ಮಾಹಿತಿ ಇಲ್ಲದೆ ಜನರ ದಿಕ್ಕು ತಪ್ಪಿಸುವ ಮಾತಾಡಿದ್ದಾರೆ ಎಂದು ಕಿಡಿಕಾರಿದರು.

ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳ ₹15.58 ಲಕ್ಷ ರೈತರಿಗೆ ₹6223.48 ಕೋಟಿ ಸಾಲಮನ್ನಾ ಮೊತ್ತ ಮಂಜೂರು ಮಾಡಲಾಗಿದೆ. 2019-20ರ ಆಯವ್ಯಯದಲ್ಲಿ ₹12000 ಕೋಟಿ ಅನುದಾನ ಒದಗಿಸಲಾಗಿದೆ. ಈ ಮಾಹಿತಿ ವೆಬ್ ಸೈಟಿನಲ್ಲಿಯೂ ಲಭ್ಯವಿದೆ.

‘ಕೃಷಿಕರ ಕುರಿತು ನನ್ನ ಬದ್ಧತೆಯ ಕುರಿತು ಅವರು ಮಾತನಾಡುವ ಅಗತ್ಯವಿಲ್ಲ. ಕಳೆದ ಎರಡು ಆಯವ್ಯಯಗಳಲ್ಲಿ ಘೋಷಿಸಿ ಜಾರಿಗೊಳಿಸುತ್ತಿರುವ ದೂರಾದೃಷ್ಟಿಯ ಕಾರ್ಯಕ್ರಮಗಳೇ ನಮ್ಮ ರೈತಪರ ಕಾಳಜಿಗೆ ಸಾಕ್ಷಿ’ ಎಂದರು.

ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ನಮ್ಮ ಮೈತ್ರಿ ಸರ್ಕಾರ ಕೈಗೊಂಡಿರುವ ಕ್ರಮ ಸಾಲ ಮನ್ನಾ ಒಂದೇ ಅಲ್ಲ. ಬಿತ್ತನೆಯಿಂದ ಬೆಳೆ ಸಂಸ್ಕರಣೆ, ಸಂಗ್ರಹಣೆ ವರೆಗೆ ಎಲ್ಲ ಹಂತದಲ್ಲೂ ನೆರವು ನೀಡಲು ನಮ್ಮ ಸರ್ಕಾರ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ₹46 ಸಾವಿರ ಕೋಟಿಗೂ ಅಧಿಕ ಮೊತ್ತ ನಮ್ಮ ಸರ್ಕಾರ ಒದಗಿಸಿದೆ ಎಂದು ತಿಳಿಸಿದ್ದಾರೆ.

ಸುಮ್ಮನೆ ಹುರುಳಿಲ್ಲದ ಗಂಭೀರ ಆರೋಪ ಮಾಡುವ ಮುನ್ನ ವಸ್ತು ಸ್ಥಿತಿ ಅರಿತು ಮಾತನಾಡುವುದು ಸೂಕ್ತ ಎಂದು ಹೇಳಿದರು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.