ಬೆಂಗಳೂರು: ತಂತ್ರಜ್ಞಾನ ಸಹಭಾಗಿತ್ವದ ಮೂಲಕ ಭಾರತ ಮತ್ತು ಇಸ್ರೇಲ್ ದೇಶಗಳು ಜಗತ್ತಿನ ಶಕ್ತಿಕೇಂದ್ರಗಳಾಗಿ ಹೊರಹೊಮ್ಮಲಿವೆ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗಾಗಲೇ ವಿಚಾರ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಶೃಂಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆರುಸಲೇಂನಿಂದ ವರ್ಚುಯಲ್ ಆಗಿ ಪಾಲ್ಗೊಂಡು ಮಾತನಾಡಿದ ಅವರು, ‘ಜಗತ್ತಿನ ಬಹುದೊಡ್ಡ ದೇಶಗಳಲ್ಲಿ ಒಂದಾಗಿರುವ ಭಾರತವು ಪ್ರಬಲ ಆರ್ಥಿಕ ಶಕ್ತಿಯಾಗಿದ್ದು, ಇಸ್ರೇಲ್ ನಾವೀನ್ಯತೆಯ ತಾಣವಾಗಿದೆ. ಎರಡೂ ರಾಷ್ಟ್ರಗಳು ಕೈ ಜೋಡಿಸಿದರೆ ಅಸಾಧಾರಣ ಸಂಗತಿಗಳು ಸಂಭವಿಸಲಿವೆ’ ಎಂದು ಹೇಳಿದರು.
ಭಾರತವು ಸಾಧಿಸಿರುವ ಡಿಜಿಟಲ್ ಪರಿಣತಿ ಉತ್ಕೃಷ್ಟವಾದುದು. ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಯೋಗಿಕತೆ ಮತ್ತು ಉತ್ಪಾದಕತೆಯ ಸಂಕಲ್ಪ ಬಲವೇ ನಿರ್ಣಾಯಕ. ನಾವೆಲ್ಲರೂ ಇಂದು ಒಳ್ಳೆಯ ಕನಸು ಕಂಡರೆ ಮುಂದೊಂದು ದಿನ ಅದು ನನಸಾಗಲಿದೆ ಎಂದರು.
ಯಾವುದೇ ಸಂಗತಿ ಸಂಭವಿಸಬೇಕೆಂದರೆ ಮುನ್ನುಗ್ಗುವ ಸ್ವಭಾವವಿರಬೇಕು. ಇದನ್ನು ಬಿಟ್ಟು ಚರ್ಚೆಯಲ್ಲೇ ಕಾಲಹರಣ ಮಾಡಬಾರದು. ಮುಂಬರುವ ದಿನಗಳಲ್ಲಿ ಎರಡೂ ದೇಶಗಳ ಸಂಬಂಧ ಹೊಸ ಎತ್ತರವನ್ನು ತಲುಪಲಿದೆ ಎಂದು ಬೆನೆಟ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ತಂತ್ರಜ್ಞಾನವೆಂದರೆ ಬರೀ ಜನರಿಗೆ ನೆರವಾಗುವುದಲ್ಲ. ಇದರಾಚೆಗೆ ಜನರ ಜೀವಗಳನ್ನು ಉಳಿಸಲುಬಹುದು. ತಂತ್ರಜ್ಞಾನ ಸಹಭಾಗಿತ್ವದ ಮೂಲಕ ಭಾರತ ಮತ್ತು ಇಸ್ರೇಲಿನ ನಾಗರಿಕತೆಗಳು ಮತ್ತಷ್ಟು ದೃಢವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.