ADVERTISEMENT

ಸಾವರ್ಕರ್, ಹೆಡಗೇವಾರ್ ಪಠ್ಯಗಳಿಗೆ ಕೊಕ್‌: ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 10:13 IST
Last Updated 15 ಜೂನ್ 2023, 10:13 IST
   

ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್‌ಎಸ್‌ಎಸ್‌ ಮುಖಂಡ ಹೆಡಗೇವಾರ್‌, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್‌ ಹಾಗೂ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಷಯದಲ್ಲಿ ಸಿಎಂ ನಿರಂತರ ಮಾರ್ಗ ದರ್ಶನ ಮಾಡುತ್ತಿದ್ದಾರೆ. ಈಗಾಗಲೇ ಪಠ್ಯ ಶಾಲೆಗಳಿಗೆ ಹೋಗಿದೆ. ಮತ್ತೆ ಪ್ರಿಂಟ್ ಮಾಡಿ ಕಳಿಸುವುದು ಕಷ್ಟ. ಆದರೆ ಸಪ್ಲಿಮೆಂಟರಿ ಪರಿಷ್ಕರಣೆ ಮಾಡಲು ಅವಕಾಶವಿದೆ. ಯಾವುದು ಉಳಿಸಿಕೊಳ್ಳುವುದು ಎಂದು ನಿರ್ಧರಿಸಬಹುದು ಎಂದರು.‌

ರಾಜಪ್ಪ ದಳವಾಯಿ, ಪ್ರೊ.ಚಂದ್ರಶೇಖರ್, ರಾಜೇಶ್, ಅಶ್ವತ್ಥನಾರಾಯಣ ಅವರ ಸಮಿತಿಯು 45 ಬದಲಾವಣೆಗಳನ್ನು ಮಾಡಲು ಸಲಹೆ ನೀಡಿತ್ತು. ಪ್ಯಾರಾಗ್ರಾಫ್‌, ಪದಗಳನ್ನು ಬದಲಿಸಲು ಕೋರಿಕೆ ಇಡಲಾಗಿತ್ತು ಎಂದು ಅವರು ಹೇಳಿದರು.

ADVERTISEMENT
ಆರರಿಂದ ಹತ್ತನೇ ತರಗತಿವರೆಗಿನ ಕನ್ನಡ, ಸಮಾಜ ಪಠ್ಯ ಪುಸ್ತಕದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಸಾವಿತ್ರಿ ಫುಲೆ, ಡಾ. ಬಿ.ಆರ್ ಅಂಬೇಡ್ಕರ್ ಅವರ ‘ನೀ ಹೋದ ಮರುದಿನ‘ ಕವನ, ಮಗಳಿಗೆ ಬರೆದ ಪತ್ರ (ನೆಹರು) ಸೇರಿಸಲಾಗಿದೆ. ಹೆಡಗೇವಾರ್ , ವಿ.ಡಿ ಸಾವರ್ಕರ್ ಮತ್ತು ಸೂಲಿಬೆಲೆ ಚಕ್ರವರ್ತಿ ಪಾಠಗಳನ್ನು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.

ಯಾವುದು ಹೇಳಿಕೊಡಬೇಕು, ಯಾವುದು ಹೇಳಿಕೊಡಬಾರದೆಂದು ಶಿಕ್ಷಕರಿಗೆ ತಿಳಿಸಲಾಗುತ್ತದೆ. ಅಂದಾಜು 15 ಪುಟಗಳ ಪುಸ್ತಕ ಇರಲಿದೆ ಎಂದು ಅವರು ಹೇಳಿದರು.

ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿನ ಬಿಜೆ‍ಪಿ ಸರ್ಕಾರ ದೊಡ್ಡ ಬದಲಾವಣೆ ಹೊರಟಿತ್ತು, ಆಕ್ಷೇಪಕ್ಕೆ ಹೆದರಿ ಕೈ ಬಿಟ್ಟಿತ್ತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.