ಬೆಂಗಳೂರು: ಆಸ್ತಿ ಖರೀದಿ, ಕರಾರು ಪತ್ರ, ಭೋಗ್ಯ ಪತ್ರಗಳನ್ನು ನೋಂದಣಿ ಮಾಡಿಸುವಾಗ ಪಾವತಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಅನುಕೂಲ ಆಗುವಂತೆ ಮಾರ್ಗಸೂಚಿ ದರವನ್ನು ಮೂರು ತಿಂಗಳ ಅವಧಿಗೆ (ಮಾರ್ಚ್ 31ರವರೆಗೆ) ಶೇ 10ರಷ್ಟು ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಸ್ಥಿರಾಸ್ತಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಮಾಡುವಾಗ ಗ್ರಾಮೀಣ ಪ್ರದೇಶದಲ್ಲಿ ಆಸ್ತಿಯ ಮಾರ್ಗಸೂಚಿ ದರದ (ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗದಿಪಡಿಸುವ ಮಾರುಕಟ್ಟೆ ದರ) ಶೇ 6.65ರಷ್ಟು(ಮುದ್ರಾಂಕ ಮತ್ತು ನೋಂದಣಿ ಸೇರಿ) ಶುಲ್ಕ ಪಾವತಿಸಬೇಕಾಗಿದೆ. ನಗರ ಪ್ರದೇಶಕ್ಕೆ ಸರ್ ಚಾರ್ಜ್ ಇರುವುದಿಲ್ಲ. ಹೀಗಾಗಿ, ಶೇ 6.6ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಮಾರ್ಗಸೂಚಿ ದರವನ್ನು ಶೇ 10ರಷ್ಟು ಕಡಿತಗೊಳಿಸಿದ್ದರಿಂದ ಖರೀದಿದಾರರಿಗೆ ಲಾಭ ಸಿಗಲಿದೆ. ಹೇಗೆಂದರೆ, 30/40 ಅಳತೆ (1,200 ಚದರಡಿ) ನಿವೇಶನದ ಮಾರ್ಗಸೂಚಿ ದರ ನಗರಪ್ರದೇಶದಲ್ಲಿ ₹ 30 ಲಕ್ಷ ಎಂದಿಟ್ಟುಕೊಳ್ಳೋಣ. ಮಾರ್ಗಸೂಚಿ ದರ ಶೇ 10ರಷ್ಟು ಇಳಿಕೆ ಆಗಿದ್ದರಿಂದ ಪರಿಷ್ಕೃತ ಮಾರ್ಗಸೂಚಿ ದರ ₹ 27 ಲಕ್ಷ ಆಗುತ್ತದೆ. ಈ ಮೊದಲಿನಂತೆ ₹ 30 ಲಕ್ಷ ಮೌಲ್ಯದ ಆಸ್ತಿ ಖರೀದಿಸುವವರು ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಅನ್ವಯ ₹ 1.98 ಲಕ್ಷ ಕಟ್ಟಬೇಕಾಗುತ್ತಿತ್ತು. ಮಾರ್ಗಸೂಚಿ ದರದಲ್ಲಿ ಕಡಿತ ಆಗಿರುವುದರಿಂದ ಈಗ ₹ 1,78,200 ಕಟ್ಟಿದರೆ ಸಾಕು. ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದ ಲೆಕ್ಕಾಚಾರ
ತಪ್ಪಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.