ಸಿದ್ದರಾಮಯ್ಯ
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ನಾವು ಯಾರ ಮೇಲೂ ದ್ವೇಷ ಸಾಧಿಸುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ನಮ್ಮನ್ನು ಗುರಿ ಮಾಡುತ್ತಿದ್ದಾರೆ’ ಎಂಬ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ದ್ವೇಷ ಸಾಧಿಸುವ ಪ್ರಶ್ನೆಯೇ ಇಲ್ಲ. ಬೆಂಗಳೂರು ಅರಮನೆ ಮೈದಾನಕ್ಕೆ ಟಿಡಿಆರ್ ಕೊಟ್ಟರೆ ಮುಂದಿನ ಅಭಿವೃದ್ಧಿಗೆ ಸಮಸ್ಯೆ ಆಗುತ್ತದೆ’ ಎಂದರು.
‘15.36 ಎಕರೆ ಭೂಮಿಗೆ ಟಿಡಿಆರ್ ಕೊಟ್ಟರೆ ₹ 3,014 ಕೋಟಿ ಆಗುತ್ತದೆ. ಅದರಂತೆ ಪ್ರತಿ ಎಕರೆಗೆ ₹ 200 ಕೋಟಿ ಕೊಡಬೇಕಾಗುತ್ತದೆ. ಅಷ್ಟು ಹಣ ಕೊಟ್ಟರೆ ಜನರ ಮೇಲೆ, ಅಭಿವೃದ್ಧಿ ಮೇಲೆ ಏನು ಪರಿಣಾಮ ಬೀರುತ್ತದೆ? ಟಿಡಿಆರ್ ಕೊಡಲು ಸಿದ್ಧರಿದ್ದೇವೆ. ನಾವು ರಸ್ತೆ ಅಗಲೀಕರಣ ಮಾಡಲು ಬೆಂಗಳೂರು ಅರಮನೆ ಮೈದಾನದ ಭೂಮಿ ಪಡೆದುಕೊಂಡಿದ್ದೇವೆ. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಟಿಡಿಆರ್ ಕೊಟ್ಟರೆ ಸಾರ್ವಜನಿಕರಿಗೆ ಭಾರ ಆಗುತ್ತದೆ’ ಎಂದರು.
‘ಟಿಡಿಆರ್ ಕೊಡಲು ಆಗದೇ ಇದ್ದರೆ ರಸ್ತೆ ಅಗಲೀಕರಣ ಯೋಜನೆಯನ್ನೇ ಕೈ ಬಿಡುತ್ತೇವೆಂದು ಹೇಳಿದ್ದೇವೆ. ಅಭಿವೃದ್ಧಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಸುಗ್ರೀವಾಜ್ಞೆ ತರುತ್ತಿದ್ದೇವೆ ಅಷ್ಟೆ’ ಎಂದೂ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.