
ಬೆಂಗಳೂರು: ಕರ್ನಾಟಕದಿಂದ ಸಾಫ್ಟ್ವೇರ್ ರಫ್ತನ್ನು 2030 ವೇಳೆಗೆ ₹4.09 ಲಕ್ಷ ಕೋಟಿಯಿಂದ ₹11.5 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ ‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030’ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಬೆಂಗಳೂರಿನಾಚೆಗೆ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಇತರ ನೂತನ ತಂತ್ರಜ್ಞಾನಗಳ ಮೇಲೆ ಹೂಡಿಕೆಗೆ ಆದ್ಯತೆ ನೀಡುವ ಬಗ್ಗೆಯೂ ನೀತಿ ಪ್ರಸ್ತಾಪಿಸಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ರಾಜ್ಯದ ಆದಾಯ ಮೌಲ್ಯವರ್ಧನೆಗೆ ಐಟಿ ವಲಯದ ಕೊಡುಗೆಯನ್ನು ಶೇ 26ರಿಂದ ಶೇ 36ಕ್ಕೆ ಹೆಚ್ಚಿಸಲು ಗುರಿ ನಿಗದಿ ಮಾಡಲಾಗಿದೆ. ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಗಳಲ್ಲಿ ಕರ್ನಾಟಕದ ನಾಯಕತ್ವ ಬಲಪಡಿಸುವುದು ಮತ್ತು ಕರ್ನಾಟಕದ ಬ್ರ್ಯಾಂಡ್ ಅನ್ನು ಕೃತಕ ಬುದ್ದಿಮತ್ತೆಯ ಸ್ಥಳೀಯ ತಾಣವಾಗಿ (ಎಐ–ನೇಟಿವ್) ಉನ್ನತೀಕರಿಸಲು ಅಗತ್ಯ ಯೋಜನೆ ರೂಪಿಸಲಾಗುವುದು ಎಂದು ವಿವರಿಸಿದರು.
ನೀತಿಯ ಮುಖ್ಯಾಂಶಗಳು
ಕೃತಕ ಬುದ್ದಿಮತ್ತೆ, ಬ್ಲಾಕ್ಚೈನ್, ಕ್ವಾಂಟಮ್ ಕಂಪ್ಯೂಟಿಂಗ್, ಹಸಿರು ಐಟಿ ಮತ್ತು ಮುಂದುವರಿದ ಸೈಬರ್ ಭದ್ರತೆಗೆ ತಂತ್ರಜ್ಞಾನಕ್ಕೆ ಉತ್ತೇಜನ
ಡಿಜಿಟಲ್ ಸಂಪರ್ಕ, ಹಸಿರು ಆವರಣಗಳು ಮತ್ತು ಗ್ರಾಮೀಣ–ನಗರ ಏಕೀಕರಣವನ್ನು ಉತ್ತೇಜಿಸಲು ಮೂಲಸೌಕರ್ಯ ಅಭಿವೃದ್ಧಿ
ಸೈಬರ್ ಸುರಕ್ಷತೆ, ವಿಪತ್ತು ನಿರ್ವಹಣೆ ಮತ್ತು ವಿದ್ಯುತ್ ಭದ್ರತೆ ಮೂಲಕ ಬಲಿಷ್ಠ ಐಟಿ ಕಾರ್ಯಾಚರಣೆಗಳನ್ನು ಖಾತ್ರಿಪಡಿಸಲಾಗುವುದು
ನಿಯಮಗಳನ್ನು ಸರಳಗೊಳಿಸಿ, ತಡೆ ರಹಿತ, ಪಾರದರ್ಶಕ ಮತ್ತು ಏಕಗವಾಕ್ಷಿ ಆಡಳಿತ ಸಕ್ರಿಯಗೊಳಿಸಲಾಗುವುದು
ಕ್ನೋವರ್ಸ್ ಅಂದರೆ ಸಂಯೋಜಿತ ತಂತ್ರಜ್ಞಾನ ಆವರಣಗಳ ಸ್ಥಾಪನೆ ಮತ್ತು ಮುಂಬರುವ ಜಾಗತಿಕ ನಾವೀನ್ಯತಾ ಜಿಲ್ಲೆಗಳಲ್ಲಿ (ಜಿಐಡಿಗಳು) ಇವುಗಳ ಸ್ಥಾಪನೆ ಆಗಲಿದೆ.
ರಾಜ್ಯವ್ಯಾಪಿ ಡಿಜಿಟಲ್ ಹಬ್ ಗ್ರಿಡ್ (ಎಸ್ಡಿಎಚ್ಜಿ), ಐಟಿ ಪಾರ್ಕ್ಗಳು, ಶ್ರೇಷ್ಠತೆಯ ಕೇಂದ್ರಗಳು, ನಾವೀನ್ಯತೆ ಕೇಂದ್ರಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಏಕೀಕರಿಸಲಾಗುವುದು.
1,000 ಮಧ್ಯಮ–ವೃತ್ತಿ ಜೀವನದ ಮಹಿಳಾ ತಂತ್ರಜ್ಞಾನ ವೃತ್ತಿಪರರಿಗೆ ತರಬೇತಿ ನೀಡಲು ಮೀಸಲಾದ ಮಹಿಳಾ ಗ್ಲೋಬಲ್ ಟೆಕ್ ಮಿಷನ್ಸ್ ಫೆಲೋಶಿಪ್ ಆರಂಭಿಸಲಾಗುವುದು
ಬೆಂಗಳೂರಿನ ಹೊರಗೆ ಇರುವ ಕಂಪನಿಗಳಿಗೆ 16 ಬಗೆಯ ಪ್ರೋತ್ಸಾಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.