ಬೆಂಗಳೂರು: ‘ನಾನು ಸತ್ಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ’ ಎಂದು ಆಳಂದ ಶಾಸಕ ಬಿ. ಆರ್. ಪಾಟೀಲ ಪ್ರಶ್ನಿಸಿದರು.
‘ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ನೀಡಿದರಷ್ಟೇ ಮನೆ ಮಂಜೂರು ಮಾಡಲಾಗುತ್ತದೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಬಿ. ಆರ್. ಪಾಟೀಲ ಹೇಳಿದ್ದಾರೆ ಎನ್ನಲಾದ ಆಡಿಯೊ ಬಹಿರಂಗವಾಗಿತ್ತು.
ಈ ಬಗ್ಗೆ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಾವು ಜನಪರ ಆಡಳಿತ ಕೊಡ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದು. ಆದರೆ, ಹೀಗಾಗಬಾರದಿತ್ತು’ ಎಂದರು.
‘ಅದು ನಾನೇ ಮಾತನಾಡಿದ ಆಡಿಯೊ. ಎಲ್ಲ ಸರ್ಕಾರಗಳಲ್ಲೂ ಭ್ರಷ್ಟಾಚಾರ ನಡೆದಿತ್ತು. ನಾವೂ ಜನಪರ ಆಡಳಿತ ಕೊಡುತ್ತೇವೆ ಎಂದು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು’ ಎಂದರು.
‘ 5-6 ಪಂಚಾಯಿತಿಗಳಲ್ಲಿ ದುಡ್ಡು ಕೊಟ್ಟು ಮನೆಗಳನ್ನು ತೆಗೆದುಕೊಂಡಿದ್ದಾರೆ. ನಾನು ಕೊಟ್ಟ ಪತ್ರಕ್ಕೆ ಮನೆಗಳು ಹಂಚಿಕೆ ಆಗಿಲ್ಲ. ನಾನು ನಾಲ್ಕು ಪತ್ರಗಳನ್ನು ಕೊಟ್ಟಿದ್ದೆ. ನನ್ನ ಕ್ಷೇತ್ರಕ್ಕೆ ಮನೆಗಳನ್ನು ಕೊಡಿ ಎಂದು ಪತ್ರ ಕೊಟ್ಟರೂ ಮನೆಗಳನ್ನು ಕೊಟ್ಟಿರಲಿಲ್ಲ. ಪಂಚಾಯಿತಿ ಅಧ್ಯಕ್ಷರು ನಾನು ಕೊಟ್ಟ ಪತ್ರಗಳನ್ನೇ ಕೊಟ್ಟು ಮನೆಗಳನ್ನು ತಂದಿದ್ದಾರೆ. ಮುಖ್ಯಮಂತ್ರಿ ಕರೆದು ಮಾಹಿತಿ ಕೇಳಿದರೆ ಹೋಗಿ ಮಾಹಿತಿ ಕೊಡುತ್ತೇನೆ’ ಎಂದರು.
ಎಐಸಿಸಿ ನಾಯಕರು ವರದಿ ಕೇಳಿದ್ದಾರೆಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ ನಾನು ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲ. ನಾನು ಸತ್ಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ’ ಎಂದರು.
ಮುಖ್ಯಮಂತ್ರಿ ಕರೆದರೆ ಅವರ ಬಳಿ ಈ ಬಗ್ಗೆ ವಿವರಣೆ ಕೊಡುತ್ತೇನೆ. ಆದರೆ, ನಾನಾಗಿಯೇ ಅವರ ಬಳಿ ಹೋಗುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
ವಿರೋಧ ಪಕ್ಷ ಬಿಜೆಪಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ ಕಾಲದಲ್ಲೂ ಇಂತಹದ್ದೆಲ್ಲ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.