ADVERTISEMENT

‘ಮೈಸೂರು ಚಲೋ’ ಪಾದಯಾತ್ರೆ: ಸಿ.ಎಂ ರಾಜೀನಾಮೆ ನೀಡದಿದ್ದರೆ ಹೋರಾಟ ತೀವ್ರ

ಎರಡನೇ ದಿನದ ಪಾದಯಾತ್ರೆಗೆ ತಮಟೆ ಬಾರಿಸುವ ಮೂಲಕ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 23:41 IST
Last Updated 4 ಆಗಸ್ಟ್ 2024, 23:41 IST
ರಾಮನಗರ ಜಿಲ್ಲೆಯ ಬಿಡದಿ ಬಳಿ ಸಾಗಿದ 'ಮೈಸೂರು ಚಲೋ' ಪಾದಯಾತ್ರೆಯಲ್ಲಿ ಭಾನುವಾರ ಕಾರ್ಯಕರ್ತರ ಜೊತೆಗೆ ಜೆಡಿಎಸ್ ಯುವ ಘಟಕದ ರಾಜ್ಯ ಘಟಕದ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಇದ್ದರು.
ರಾಮನಗರ ಜಿಲ್ಲೆಯ ಬಿಡದಿ ಬಳಿ ಸಾಗಿದ 'ಮೈಸೂರು ಚಲೋ' ಪಾದಯಾತ್ರೆಯಲ್ಲಿ ಭಾನುವಾರ ಕಾರ್ಯಕರ್ತರ ಜೊತೆಗೆ ಜೆಡಿಎಸ್ ಯುವ ಘಟಕದ ರಾಜ್ಯ ಘಟಕದ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಇದ್ದರು.   

ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ‘ಮುಡಾ’ ಹಗರಣಗಳ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಎರಡನೇ ದಿನದ ‘ಮೈಸೂರು ಚಲೋ’ ಪಾದಯಾತ್ರೆಗೆ ಭಾನುವಾರ ಬಿಡದಿಯಲ್ಲಿ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

 ದಲಿತರು, ಪರಿಶಿಷ್ಟ ಜಾತಿ, ಪಂಗಡದ ಜನರು, ಬಡವರು, ನಿರ್ಗತಿಕರ ಪರವಾಗಿ ಧ್ವನಿ ಎತ್ತಿರುವ ವಿರೋಧ ಪಕ್ಷದ ಪ್ರಶ್ನೆಗಳಿಗೆ ಸದನದಲ್ಲೂ ಉತ್ತರ ಕೊಡದೆ, ಹೊರಗೂ ಉತ್ತರ ನೀಡದೆ ವಿರೋಧ ಪಕ್ಷಗಳನ್ನೇ ಪ್ರಶ್ನಿಸುವ ಮೂಲಕ ಹಗರಣಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

ADVERTISEMENT

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರದ ದರ್ಪ, ಅಧಿಕಾರದ ಅಹಂ ಬದಿಗಿಟ್ಟು ಹಗರಣಗಳ ಬಗ್ಗೆ ಜನರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಪ್ರಮಾಣ ಮಾಡಲು ಆಗ್ರಹ: 

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ‘ಉಪ ಮುಖ್ಯಮಂತ್ರಿ ಕುರಿತು ಬಿಚ್ಚಿಡುವುದು ‍ಪುಟಗಟ್ಟಲೆ ಇದೆ. ದಲಿತರಿಗೆ ಸೇರಬೇಕಾದ 68 ಎಕರೆ ಜಮೀನು ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನು ಹೊಡೆದುಕೊಂಡಿದ್ದಾರೆ. ನಾನು ಮೋಸ ಮಾಡಿ ಕೇತಗಾನಹಳ್ಳಿಯ 45 ಎಕರೆ ಜಮೀನು ವಂಚನೆ ಮಾಡಿ ಖರೀದಿಸಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ’ ಎಂದು ಸವಾಲು ಹಾಕಿದರು.

ಪ್ರಮಾಣ ಮಾಡಲಿ: ‘ಗಾಜಿನ ಮನೆಯಲ್ಲಿ ಕುಳಿತವರು ಬೀದಿಯಲ್ಲಿ ಇರುವವರ ಮೇಲೆ ಕಲ್ಲು ಎಸೆಯುತ್ತಿದ್ದಾರೆ. ಶಿವಕುಮಾರ್‌ಗೆ ಅಜ್ಜಯ್ಯನ ಶಾಪ ಆರಂಭವಾಗಿದೆ. ಸ್ವಚ್ಛವಾಗಿದ್ದೇನೆ ಎಂದು ಅಜ್ಜಯ್ಯನ ಮುಂದೆ ನಿಂತು ಪ್ರಮಾಣ ಮಾಡಲಿ. ನಾನೂ ಮಾಡುತ್ತೇನೆ’ ಎಂದು ಆಹ್ವಾನ ನೀಡಿದರು.

‘ಯಡಿಯೂರಪ್ಪ ಸೇರಿದಂತೆ ನಾನು ಯಾರಿಗೂ ದ್ರೋಹ ಮಾಡಲಿಲ್ಲ ಬಿಜೆಪಿ‌-ಜೆಡಿಎಸ್ ಮೈತ್ರಿ ಕಾಂಗ್ರೆಸ್‌ ನಿದ್ದೆಗೆಡಿಸಿದೆ. ಅದಕ್ಕೆ ಶಿವಕುಮಾರ್‌ ಹೊಟ್ಟೆ ಉರಿ ಅನುಭವಿಸುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಮತ್ತೆ ಅಧಿಕಾರವನ್ನು ಪಡೆಯುವ ಆಸೆ ಇಲ್ಲ’ ಎಂದರು. 

ಪಾದಯಾತ್ರೆಯಲ್ಲೂ ದಲಿತರು ರೈತರ ಅಸ್ಮಿತೆಗೆ ಆದ್ಯತೆ ನೀಡಲಾಗಿದೆ. ಬಿಡದಿಯಲ್ಲಿ ತಮಟೆ ಬಾರಿಸುವ ಮೂಲಕ ಪಾದಯಾತ್ರೆ ಸಾಗಿದರೆ ಮಂಡ್ಯದಲ್ಲಿ ಬಾರುಕೋಲು ಬೀಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ.
ಎನ್. ರವಿಕುಮಾರ್ ವಿಧಾನ ಪರಿಷತ್‌ ಸದಸ್ಯ. 
ಜೆಡಿಎಸ್‌ ನಾಯಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಯಾತ್ರೆಯ ಯಶಸ್ವಿಗೆ ಎರಡೂ ಪಕ್ಷಗಳು ಶ್ರಮಿಸಲಿವೆ.
ಸುರೇಶ್‌ ಬಾಬು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆ.10ರ ಒಳಗೆ ರಾಜೀನಾಮೆ ನೀಡಬೇಕು. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು
ವಿ.ಸುನಿಲ್ ಕುಮಾರ್ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಎರಡನೇ ದಿನ ಕಾಣದ ‘ನಾಯಕರು’
ಮೊದಲ ದಿನದ ಪಾದಯಾತ್ರೆಯಲ್ಲಿ ಎರಡೂ ಪಕ್ಷಗಳ ಘಟಾನುಘಟಿ ನಾಯಕರು ಇದ್ದರು. ಎರಡನೇ ದಿನ ಎರಡೂ ಪಕ್ಷಗಳ ಬಹುತೇಕ ಶಾಸಕರು ನಾಯಕರು ಕಾಣಿಸಲಿಲ್ಲ. ಯಾತ್ರೆ ಆರಂಭದ ವೇಳೆ ಕೆಲವರು ಕಾಣಿಸಿಕೊಂಡರೂ ಪಾದಯಾತ್ರೆಯಲ್ಲಿ ಸಾಗಲಿಲ್ಲ. ಎರಡನೇ ದಿನದ ಪಾದಯಾತ್ರೆ ಬಿಡದಿಯಿಂದ ಆರಂಭವಾಗಿ ಕೆಂಗಲ್‌ವರೆಗೆ 22 ಕಿ.ಮೀ ಸಾಗಿತು. ಎಂದಿಗಿಂತ ತುಸು ಹೆಚ್ಚಾಗಿದ್ದ ಬಿಸಿಲಿಗೆ ಜನರು ಬಸವಳಿದರು. ಧಗೆ ನೀಗಿಸಿಕೊಳ್ಳಲು ರಸ್ತೆ ಬದಿ ಹಂಚುತ್ತಿದ್ದ ಸೌತೆಕಾಯಿ ನೀರಿನ ಬಾಟಲ್‌ ಪಡೆಯಲು ಮುಗಿಬಿದ್ದರು. ಭಾನುವಾರವೂ ಜೆಡಿಎಸ್‌ ಕಾರ್ಯಕರ್ತರ ಸಂಖ್ಯೆ  ಕಡಿಮೆ ಇತ್ತು. ಮೊದಲ ದಿನ ಇರದಿದ್ದ ಜೆಡಿಎಸ್‌ ಬಾವುಟಗಳು ಬಿಜೆಪಿ ಬಾವುಟಗಳ ಮಧ್ಯೆ ರಾರಾಜಿಸುತ್ತಿದ್ದವು.
ಪಾದಯಾತ್ರೆ ಮಧ್ಯೆ ‘ಕಾರು’ಗಳ ದರ್ಬಾರ್ 
ಪಾದಯಾತ್ರೆಯಲ್ಲಿ ನೂರಾರು ಕಾರುಗಳು ಸಾಗಿದವು. ಮುಖಂಡರು ಪಾದಯಾತ್ರೆಯಲ್ಲಿ ನಡೆದರೆ ಅವರು ಬಂದಿದ್ದ ಕಾರುಗಳು ಹಿಂಬಾಲಿಸಿದವು. ಕೆಲವು ಭಾಗಗಳಲ್ಲಿ ಕಾರುಗಳ ಸಂಖ್ಯೆ ಹೆಚ್ಚಿದ್ದರಿಂದ ಪಾದಯಾತ್ರೆ ಮಾಡುತ್ತಿದ್ದವರು ಕಿರಿಕಿರಿ ಅನುಭವಿಸಿದರು.  ದಾರಿಯುದ್ದಕ್ಕೂ ವಿಜಯೇಂದ್ರ ನಿಖಿಲ್‌ ಕುಮಾರಸ್ವಾಮಿಗೆ ಹಾರ ಹಾಕಿ ಸ್ಥಳೀಯರು ಸ್ವಾಗತಿಸಿದರು. ಸೆಲ್ಫಿಗೆ ಮುಗಿಬೀಳುತ್ತಿದ್ದರು.ಇದರಿಂದ ಪಾದಯಾತ್ರೆಯ ವೇಗ ತಗ್ಗಿತು.
ಭೀಮನ ಅಮಾವಾಸ್ಯೆ ಮತ್ತು ಮಹಿಳೆಯರು
ಬಿಜೆಪಿ–ಜೆಡಿಎಸ್‌ ಹಮ್ಮಿಕೊಂಡಿರುವ ಮೈಸೂರು ಚಲೋ ಯಾತ್ರೆಯಲ್ಲಿ ಭಾನುವಾರ ಮಹಿಳೆಯರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇದ್ದರು. ‘ಇಂದು ಭೀಮನ ಅಮವಾಸ್ಯೆ. ಶ್ರಾವಣವೂ ಆರಂಭವಾಗುತ್ತಿದೆ. ಮನೆಯಲ್ಲಿ ಕೆಲಸ ಹೆಚ್ಚಾಗುತ್ತವೆ. ಭಾಗವಹಿಸುವಿಕೆ ಸಹಜವಾಗಿ ಕಡಿಮೆ ಇರುತ್ತದೆ’ ಎಂದು ಶಿವಮೊಗ್ಗ ನಗರ ಪಾಲಿಕೆ ಮಾಜಿ ಸದಸ್ಯೆ ಅನಿತಾ ರವಿಶಂಕರ್ ಹೇಳಿದರು. ಪಾದಯಾತ್ರೆ ಮಾರ್ಗದಲ್ಲಿ ಮಹಿಳೆಯರಿಗೆ ಅಗತ್ಯ ಶೌಚಾಲಯ ಇಲ್ಲದ್ದೂ ಸಮಸ್ಯೆಯಾಗಿದೆ ಎಂದು ರಾಮನಗರದ ಅಶ್ವಿನಿ ಕುಮಾರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.