ಬೆಂಗಳೂರು: ಕೆಪಿಜೆಪಿಯನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಲು ಶಾಸಕ ಆರ್.ಶಂಕರ್ ಸಲ್ಲಿಸಿರುವ ಪತ್ರಕ್ಕೆ ಮಾನ್ಯತೆ ನೀಡಬಾರದೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಗೌಡ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ.
ಶಂಕರ್ ಅವರು ಪಕ್ಷದ ಗಮನಕ್ಕೆ ತರದೆ ಕಾಂಗ್ರೆಸ್ ಜತೆ ವಿಲೀನಗೊಳಿಸಲು ಮುಂದಾಗಿದ್ದಾರೆ. ಈ ಸಂಬಂಧ ಸಭಾಧ್ಯಕ್ಷರಿಗೂ ಪತ್ರ ಬರೆದಿದ್ದಾರೆ. ಅವರ ನಡವಳಿಕೆ ಸರಿಯಲ್ಲ. ಆದ್ದರಿಂದ ಪತ್ರಕ್ಕೆ ಮಾನ್ಯತೆ ನೀಡಬಾರದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೇವನೂರು, ದೊರೆಸ್ವಾಮಿ ಮನವಿ: ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಮತ್ತು ಪಕ್ಷಾಂತರಕ್ಕೆ ಮೂರು ರಾಜಕೀಯ ಪಕ್ಷಗಳು ಕಾರಣ. ರಾಜಕೀಯ ಆತ್ಮವೇ ದಾಳಿಗೊಳಗಾಗುತ್ತಿದ್ದು, ಅದನ್ನು ಸರಿಪಡಿಸಲು ಬೇಕಾದ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿ ದೇವನೂರ ಮಹಾದೇವ ಮತ್ತು ಸ್ವಾತಂತ್ರ್ಯ ಹೋರಾಟ ಎಚ್.ಎಸ್.ದೊರೆಸ್ವಾಮಿ ಮಂಗಳವಾರ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.
‘ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ನೀವು, ನಿಮ್ಮ ವ್ಯಕ್ತಿಗತ ನಿಲುವು ಏನೇ ಇದ್ದರೂ ತಪ್ಪಾದ ಮತ್ತು ಆತುರದ ನಿರ್ಧಾರಕ್ಕೆ ಬರಬಾರದು. ಇದನ್ನೇ ನಮ್ಮ ದೂರು ಎಂದು ಪರಿಗಣಿಸಿ’ ಎಂದು ತಿಳಿಸಿದ್ದಾರೆ.
**
ಎಲ್ಲರ ದೂರುಗಳನ್ನೂ ಕೂಲಂಕಷವಾಗಿ ಪರಿಶೀಲಿಸಿ ವಿಚಾರಣೆ ನಡೆಸುತ್ತೇನೆ. ಎಲ್ಲ ದೂರುಗಳಿಗೂ ಮಾನ್ಯತೆ ನೀಡುತ್ತೇನೆ
- ಕೆ.ಆರ್.ರಮೇಶ್ ಕುಮಾರ್, ವಿಧಾನಸಭೆ ಸಭಾಧ್ಯಕ್ಷ
**
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.