ADVERTISEMENT

ಭಾರತ ರತ್ನ: ‘ಸಮರ್ಥಿಸಿಕೊಳ್ಳುವವರೇ, ಸ್ವಾಮೀಜಿ ಹೆಚ್ಚು ಅರ್ಹರಲ್ಲವಾ?’ –ಗೃಹ ಸಚಿವ

ಶಿವಕುಮಾರ ಸ್ವಾಮೀಜಿಗೆ ಪುರಸ್ಕಾರ ತಪ್ಪಿದ್ದಕ್ಕೆ ಎಂ.ಬಿ.ಪಾಟೀಲ ಕಿಡಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 11:26 IST
Last Updated 26 ಜನವರಿ 2019, 11:26 IST
   

ಬೆಂಗಳೂರು: ‘ಪರಮ ಪೂಜ್ಯ ಸಿದ್ಧಗಂಗಾ ಶ್ರೀಗಳಿಗೆ 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತ ಕಾರಣ 5 ವರ್ಷಗಳ ಅಂತರದಲ್ಲಿ ದೇಶದ ಇನ್ನೊಂದು ಅತ್ಯುನ್ನತ ಪ್ರಶಸ್ತಿಕೊಡಲು ಸಾಧ್ಯವಿಲ್ಲ ಎಂಬ ನಿಯಮ ಮುಂದಿಟ್ಟು, ಭಾರತ ರತ್ನ ಕೈತಪ್ಪಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದ್ದಾರೆ.

ಗಣ್ಯರೊಬ್ಬರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪುರಸ್ಕಾರ ಪ್ರಕಟಿಸಿದ ಬಳಿಕ ಮತ್ತೊಂದು ಪುರಸ್ಕಾರ ನೀಡಲು ಐದು ವರ್ಷಗಳ ಅಂತರವಿರಬೇಕು ಎಂಬುದನ್ನು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ ಎಂಬ ಪ್ರಕಟಣೆಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಸಚಿವರು, ‘ಮಹಾಶಯರೇ ಉನ್ನತ ಸಾಧನೆ ಮಾಡಿದ ಅರ್ಹ ವ್ಯಕ್ತಿಗಳಿಗೆ, ಅಪರೂಪದ ಪ್ರಕರಣಗಳಲ್ಲಿ ಈ ನಿಯಮದಿಂದ ವಿನಾಯಿತಿ ಕೊಡಬಹುದು ಎಂಬ ನಿಯಮವೂ ಇದೆ ಎಂಬುದು ತಿಳಿದಿರಲಿ’ ಎಂದಿದ್ದಾರೆ.

ಲತಾ ಮಂಗೇಶ್ಕರ್‌ ಅವರಿಗೆ ಕೇವಲ ಎರಡು ವರ್ಷಗಳ ಅಂತರದಲ್ಲಿ ಎರಡು ಅತ್ಯುನ್ನತ ನಾಗರಿಕ ಗೌರವಗಳು ಲಭಿಸಿರುವುದನ್ನು ಉಲ್ಲೇಖಿಸಿರುವಅವರು, ‘ಲತಾ ಮಂಗೇಶ್ಕರ್‌ ಅವರಿಗೆ 1999ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಲಾಗಿತ್ತು. ಅದಾದ ಎರಡೇ ವರ್ಷಕ್ಕೆ(2001ರಲ್ಲಿ) ಭಾರತ ರತ್ನ ಪುರಸ್ಕಾರವನ್ನೂ ನೀಡಲಾಯಿತು. ಹಾಗಾದರೆ ಶಿವಕುಮಾರ ಸ್ವಾಮೀಜಿ ಹೆಚ್ಚು ಅರ್ಹರಲ್ಲವಾ?’ ಎಂದು ಪ್ರಶ್ನಿಸಿದ್ದಾರೆ.

ಶತಶತಮಾನಗಳಿಂದನಮ್ಮನ್ನು ಮೂರ್ಖರನ್ನಾಗಿಸುತ್ತಿರುವ ನಿಮ್ಮ ಬಂಧನದಿಂದ 12ನೇ ಶತಮಾನದಲ್ಲಿಯೇ ಬಸವಣ್ಣ ನಮ್ಮನ್ನು ಜಾಗೃತರನ್ನಾಗಿ ಮಾಡಿದ್ದಾನೆ. ಇಲ್ಲಿನ ಜನತೆ ಜಾಗೃತರಾಗಿದ್ದಾರೆ. ಅವರಿಗೆ ಸತ್ಯ ತಿಳಿದಿದೆ ಎಂದು ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ತ್ರಿವಿಧ ದಾಸೋಹಿ, ಶಿವಕುಮಾರ ಸ್ವಾಮೀಜಿ ಅವರಂತಹ ಮಹಾನ್ ಸತ್ಪುರುಷರು ಶತಮಾನದಲ್ಲಿ ಒಮ್ಮೆ ಮಾತ್ರ ಜನಿಸಬಹುದಷ್ಟೇ. ಪೂಜ್ಯರು ಭಾರತದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ವಷ್ಟೇ ಅಲ್ಲ, ‘ನೊಬೆಲ್ ಪ್ರಶಸ್ತಿ’ಗೂ ಅತ್ಯಂತ ಅರ್ಹರು ಎಂದು ಮತ್ತೊಂದು ಟ್ವೀಟ್‌ನಲ್ಲಿ ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.