
ಬೆಂಗಳೂರು: ‘ಲೋಕ್ ಅದಾಲತ್ನಲ್ಲಿ ಗಾಂಜಾ ಆರೋಪದ ಕೇಸುಗಳನ್ನೂ ಸೆಟಲ್ ಮಾಡಲಾಗುತ್ತದೆಯೇ’ ಎಂದು ಹೈಕೋರ್ಟ್ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದೆ.
‘ಗಾಂಜಾ ಮಾರಾಟದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ರದ್ದುಪಡಿಸುವಂತೆ ಕೋರಿ ನ್ಯಾಯಾಂಗ ಬಂಧನದಲ್ಲಿರುವ ಮೈಸೂರಿನ ಸಮೀರ್ ಖಾನ್ ಅಲಿಯಾಸ್ ದಾದು (51) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಆರ್.ಕೆ.ಮಹದೇವ, ‘ಅರ್ಜಿದಾರರನ್ನು ಮೈಸೂರಿನ ಬಿಇಒ ಕಚೇರಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ. ಅವರಿಂದ 53 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿರುವ ಕಲಂಗಳು ಜಾಮೀನು ಪಡೆಯಲು ಅರ್ಹವಾಗಿವೆ. ಆದರೆ, ವಿಚಾರಣಾ ಕೋರ್ಟ್ ಜಾಮೀನು ತಿರಸ್ಕರಿಸಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಯಾಗಿ ರಾಜ್ಯದ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಈಗಾಗಲೇ ಇದೇ ಅರ್ಜಿದಾರರನ್ನು ಮಾದಕ ದ್ರವ್ಯ ಮಾರಾಟದ ಇಂತಹುದೇ ಆರೋಪದಡಿ ಮತ್ತೊಂದು ಕೇಸಿನಲ್ಲಿ ವಿಚಾರಣಾ ಕೋರ್ಟ್ ಅಪರಾಧಿ ಎಂದು ತೀರ್ಪು ನೀಡಿದೆ’ ಎಂದರು.
ಇದಕ್ಕೆ ಮಹದೇವ, ‘ಸ್ವಾಮಿ, ಆ ಕೇಸಿನಲ್ಲಿ ಅರ್ಜಿದಾರರು ಅಪರಾಧ ಒಪ್ಪಿಕೊಂಡ (ಪ್ಲೀಡ್ ಗಿಲ್ಟಿ) ಕಾರಣ ಲೋಕ್ ಅದಾಲತ್ನಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ’ ಎಂದರು.
ಈ ಮಾತಿಗೆ ನ್ಯಾಯಮೂರ್ತಿಗಳು, ‘ಏನ್ರೀ ಇದು ಲೋಕ್ ಅದಾಲತ್ನಲ್ಲಿ ಗಾಂಜಾ ಆರೋಪದ ಕೇಸುಗಳನ್ನೆಲ್ಲಾ ಸೆಟಲ್ ಮಾಡಲಾಗುತ್ತದೆಯೇ? ಹೀಗಾದರೆ ಹೇಗೆ? ನಾಳೆ ಎಂಡಿಎಂಎ (ಮಾದಕ ದ್ರವ್ಯ) ಕೇಸುಗಳನ್ನೂ ರಾಜಿ ಸಂಧಾನದ ಮೂಲಕ ಲೋಕ್ ಅದಾಲತ್ನಲ್ಲಿ ವಿಲೇವಾರಿ ಮಾಡಬಹುದಲ್ಲವೇ? ಇಂತಹ ಗಾಂಜಾ ಅಪರಾಧಿಗಳು ಅಪರಾಧ ಒಪ್ಪಿಕೊಂಡು ಕನಿಷ್ಠ ದಂಡ ಕಟ್ಟಿ ಜೈಲಿನಲ್ಲಿರಲು ಸಿದ್ಧರಾದರೆ ಗತಿಯೇನು’ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ, ‘ಮೈಸೂರಿನಲ್ಲೇ ಗಾಂಜಾ ಕೇಸುಗಳು ಯಾಕೆ ಜಾಸ್ತಿ’ ಎಂದು ಅರ್ಜಿದಾರರ ಪರ ವಕೀಲರನ್ನು ಕೌತುಕದಿಂದ ಪ್ರಶ್ನಿಸಿದ ನ್ಯಾಯಮೂರ್ತಿಗಳು, ‘ಮುಂದೆ ಏನಾದರೂ ಈ ಆರೋಪಿಯ ಕೈಯಿಂದ ವಾಣಿಜ್ಯ ಉದ್ದೇಶದ ಹೊರತಾದ 3 ಗ್ರಾಂ ಗಾಂಜಾ ಸಿಕ್ಕರೂ ಬಿಡುವುದಿಲ್ಲ. ಜೈಲಿಗೆ ಕಳುಹಿಸುತ್ತೇನೆ’ ಎಂದು ಎಚ್ಚರಿಸಿ, ಮಧ್ಯಂತರ ಮನವಿಯ ಅನುಸಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.
₹10 ಲಕ್ಷ ದಂಡ ಎಚ್ಚರಿಕೆ: ಸಿ.ಎಂ ವಿರುದ್ಧದ ಕೇಸು ವಜಾ
‘ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಒಟ್ಟು 51 ಜನರನ್ನು ಅವರ ಹುದ್ದೆಗಳಿಂದ ವಜಾಗೊಳಿಸಿ ತನಿಖೆಗೆ ಆದೇಶಿಸಬೇಕು’ ಎಂದು ಕೋರಲಾಗಿದ್ದ ಅರ್ಜಿದಾರರೊಬ್ಬರಿಗೆ ₹10 ಲಕ್ಷ ದಂಡ ಹಾಕುವುದಾಗಿ ಎಚ್ಚರಿಸಿದ ಹೈಕೋರ್ಟ್ ಅವರ ಅರ್ಜಿ ವಜಾಗೊಳಿಸಿದೆ. ನೇಲೋಗಿಯ ‘ಭ್ರಷ್ಟಾಚಾರ ವಿರೋಧ ಪಕ್ಷ’ದ ರಾಷ್ಟ್ರೀಯ ಅಧ್ಯಕ್ಷ ಕಲ್ಲಾಲಿಂಗ ಈ. ಹೂಗಾರ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ‘ಈ ಅರ್ಜಿಯಲ್ಲಿ ಹುರುಳಿಲ್ಲ. ಅರ್ಜಿದಾರರು ವಜಾಗೊಂಡ ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ನೌಕರ ಎಂಬ ಕಾರಣಕ್ಕೆ ಸುಮ್ಮನೇ ಬಿಡುತ್ತಿದ್ದೇನೆ. ಇಲ್ಲವಾದಲ್ಲಿ ₹10 ಲಕ್ಷ ದಂಡ ವಿಧಿಸುತ್ತಿದ್ದೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.