
ಹೊಸಕೋಟೆ (ಬೆಂಗಳೂರು ಗ್ರಾ): ವಿದ್ಯುತ್ ಕೊರತೆ ತಗ್ಗಿಸಲು ಹಾಗೂ ರೈತರಿಗೆ ಹಗಲಿನ ವೇಳೆ ವಿದ್ಯುತ್ ಪೂರೈಕೆ ಮಾಡಲು ರಾಜ್ಯದ ನೂರು ಕಡೆ ಸೋಲಾರ್ ಘಟಕ ಸ್ಥಾಪಿಸಿ ಎರಡು ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಗುರುವಾರ ಯಲಚಹಳ್ಳಿ ಕೆರೆ ಅಂಗಳದಲ್ಲಿ ಸೌರ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ವಲಯಗಳಿಂದ ಸುಮಾರು ₹10,000 ಕೋಟಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಪಾವಗಡದಲ್ಲಿ ರೈತರ ಭೂಮಿ ಒತ್ತುವರಿ ಮಾಡದೆ ಬಾಡಿಗೆ ಪಡೆದು ಸುಮಾರು ಸೋಲಾರ್ ಘಟಕ ಸ್ಥಾಪಿಸಿ 2,000 ಮೆಗಾ ವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇಷ್ಟಾದರೂ ವಿದ್ಯುತ್ ಕೊರತೆ ಕಾಡುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 8-9 ಸಾವಿರ ಮೆಗಾ ವಾಟ್ನಷ್ಟಿದ್ದ ವಿದ್ಯುತ್ ಬೇಡಿಕೆ ಏಕಾಏಕಿ 18 ಸಾವಿರ ಮೆಗಾ ವಾಟ್ಗೆ ಏರಿಕೆಯಾಯಿತು. ಇದನ್ನು ಸರಿದೂಗಿಸಲು 120 ಹೊಸ ಸಬ್ ಸ್ಟೇಷನ್ ನಿರ್ಮಿಸಲಾಗುವುದು ಎಂದು ಜಾರ್ಜ್ ತಿಳಿಸಿದರು.
ಪರಿಸರಕ್ಕೆ ಹಾನಿಯಾಗದಂತೆ ಶರಾವತಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕಾಮಗಾರಿ ಕೈಗೊಳ್ಳಲಾಗುವುದು. ಇದರಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 3,000 ಮೆಗಾ ವಾಟ್ ವಿದ್ಯುತ್ ಸಿಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.