‘ಕೋಮುವಾದ ಧಿಕ್ಕರಿಸಿ–ಸಂವಿಧಾನ ರಕ್ಷಿಸಿ ಜನಕ್ರಾಂತಿ ಸಮಾವೇಶ’ದಲ್ಲಿ ಬಿ.ಆರ್.ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಗಳಿಗೆ ಎಂ.ಗುರುಮೂರ್ತಿ, ಎಲ್.ಹನುಮಂತಯ್ಯ, ಸಿ.ಎಸ್.ಷಡಾಕ್ಷರಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಭಾರತವು ಜಾತ್ಯತೀತ ರಾಷ್ಟ್ರವಲ್ಲ. ಇದು ಹಿಂದೂಗಳ ರಾಷ್ಟ್ರ. ಹೀಗಾಗಿ ಜಾತ್ಯತೀತ ಎಂಬುದನ್ನು ಕಿತ್ತೊಗೆದು, ಭಾರತವನ್ನು ಹಿಂದೂರಾಷ್ಟ್ರ ಎಂದು ಘೋಷಿಸಿಬೇಕು ಎಂದು ಕೆಲ ಸ್ವಾಮೀಜಿಗಳು ಈಚೆಗೆ ನಡೆದ ಕುಂಭಮೇಳದಲ್ಲಿ ಒತ್ತಾಯಿಸಿದ್ದರು. ದೇಶದ ಸಂವಿಧಾನಕ್ಕೆ ಇದಕ್ಕಿಂತ ದೊಡ್ಡ ಅಪಾಯ ಬೇಕೆ’ ಎಂದು ಸಾಹಿತಿ ಎಲ್.ಹನುಮಂತಯ್ಯ ಪ್ರಶ್ನಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಕೋಮುವಾದ ಧಿಕ್ಕರಿಸಿ–ಸಂವಿಧಾನ ರಕ್ಷಿಸಿ ಜನಕ್ರಾಂತಿ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
‘ತಮ್ಮದೇ ಸಂವಿಧಾನವನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇವೆ. ಅದನ್ನು ಜಾರಿ ಮಾಡುವುದಷ್ಟೇ ಉಳಿದಿದೆ ಎಂದು ಆ ಸ್ವಾಮೀಜಿಗಳು ಕುಂಭಮೇಳದಲ್ಲಿ ಹೇಳಿದ್ದರು. ದೇಶಕ್ಕೆ ಮತ್ತು ಸಂವಿಧಾನಕ್ಕೆ ನಿಜವಾಗಿಯೂ ಅಪಾಯ ಇರುವುದು ಇಂತಹವರಿಂದ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಿತ್ತು’ ಎಂದರು.
‘ನಿಜವಾಗಿಯೂ ಈಗ ಸಂವಿಧಾನವನ್ನು ರಕ್ಷಿಸಬೇಕಾದ ತುರ್ತು ಪರಿಸ್ಥಿತಿ ಎದುರಾಗಿದೆ. ಅದಕ್ಕೆ ಅಪಾಯ ಎದುರಾಗಿರುವ ಬಗ್ಗೆ ಮತ್ತು ಯಾರಿಂದ ಅಪಾಯವಾಗುತ್ತಿದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ‘ಹಿಂದೂರಾಷ್ಟ್ರ ರಕ್ಷಣೆ ಹೆಸರಿನಲ್ಲಿ ಮನುಧರ್ಮ ಸ್ಥಾಪನೆಗೆ ಹುನ್ನಾರ ನಡೆದಿದೆ. ಅದರ ಭಾಗವಾಗಿ ಕುಂಭಮೇಳದಲ್ಲಿ ಕೆಲ ಮಠಾಧೀಶರು ತಮ್ಮದೇ ಸಂವಿಧಾನದ ಪ್ರಸ್ತಾಪ ಮಾಡಿದ್ದಾರೆ. ಇದು ದೇಶದ್ರೋಹ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.