MB ಪಾಟೀಲ, ತಮನ್ನಾ
ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ಗೆ ಪ್ರಚಾರ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.
ತಮನ್ನಾ ಅವರಿಗೆ ₹6.20 ಕೋಟಿ ನೀಡಿ ಪ್ರಚಾರ ರಾಯಭಾರಿಯನ್ನು ಮಾಡಿರುವುದಕ್ಕೆ ಹಲವು ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಎಕ್ಸ್ನಲ್ಲಿ ಸ್ಪಷ್ಟನೆ ನೀಡಿರುವ ಪಾಟೀಲರು, ‘ಕರ್ನಾಟಕದೊಳಗೆ ಈಗಾಗಲೇ ಮೈಸೂರು ಸ್ಯಾಂಡಲ್ ಸೋಪ್ ಬಹಳ ಪ್ರಸಿದ್ಧಿಯಾಗಿದೆ. ಆದರೆ, ಹೊರ ರಾಜ್ಯಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸುವುದಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ.
ಕನ್ನಡ ಚಿತ್ರೋದ್ಯಮದ ಬಗ್ಗೆ KSDL ಅಪಾರವಾದ ಗೌರವ ಹೊಂದಿದೆ. ಈಗಾಗಲೇ ಕನ್ನಡದ ಹಲವು ಚಿತ್ರಗಳು ಬಾಲಿವುಡ್ಗೆ ಸ್ಪರ್ಧೆ ಒಡ್ಡಿರುವುದು ನಮಗೆ ತಿಳಿದಿದೆ ಎಂದಿದ್ದಾರೆ.
ಅದಾಗ್ಯೂ, ’ಕರ್ನಾಟಕದಾಚೆಗೂ ನಮ್ಮ ಉತ್ಪನ್ನ ಬೆಳೆಯಬೇಕಾಗಿರುವುದರಿಂದ ಹಾಗೂ 2028ರೊಳಗೆ KSDLನ ವಾರ್ಷಿಕ ಆದಾಯ ₹5 ಸಾವಿರ ಕೋಟಿ ಮೀರುವ ಗುರಿ ಇರುವುದರಿಂದ ನಮ್ಮ ತೀರ್ಮಾನ ಸರಿಯಾಗಿದೆ‘ ಎಂಬ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
‘ಇದೊಂದು ಸಾರ್ವಜನಿಕ ವಲಯ ಉದ್ಯಮದ ಸ್ವತಂತ್ರ ನಿರ್ಧಾರವಾಗಿದ್ದು ಹಲವು ಮಾರುಕಟ್ಟೆ ಪರಿಣಿತರ ಜೊತೆ ಸಮಾಲೋಚಿಸಿಯೇ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ.
ರಾಜ್ಯದಾಚೆಗೂ ಮಾರುಕಟ್ಟೆ ವಿಸ್ತರಣೆಗೆ ಪ್ರಚಾರ ರಾಯಭಾರಿಯನ್ನಾಗಿಸಲು ಕೆಲವು ಮಾನದಂಡಗಳನ್ನು ನಮ್ಮ ಮಾರುಕಟ್ಟೆ ಪರಿಣಿತರು ಗುರುತಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆಯ್ಕೆ ಮಾಡಿದ ಪ್ರಚಾರ ರಾಯಭಾರಿ ನಿಗದಿತ ಸಮಯದಲ್ಲಿ ಬೇರೆ ಉತ್ಪನ್ನದ ಜೊತೆ ಗುರುತಿಸಿಕೊಳ್ಳದೇ ಇರುವುದು, ನಮ್ಮ ಉತ್ಪನ್ನದ ಬಳಕೆದಾರರು ಆಗುವಂತವರಿಗೆ (ಟಾರ್ಗೆಟ್ ಆಡಿಯನ್ಸ್) ಹೆಚ್ಚು ಇಷ್ಟಪಡುವ ನಟಿಯನ್ನು ಆಯ್ಕೆ ಮಾಡುವುದು, ಅವರು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಫಾಲೋವರ್ಗಳನ್ನು ಹೊಂದಿರುವಂತವರನ್ನು ಹಾಗೂ ವ್ಯಾಪಕವಾದ ಮಾರುಕಟ್ಟೆ ಉತ್ಪನ್ನಕ್ಕೆ ಸೂಕ್ತ ಆಗುವವರನ್ನು ಗುರುತಿಸಿದ್ದಾರೆ ಎಂದು ಎಂ.ಬಿ. ಪಾಟೀಲರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.