ADVERTISEMENT

ಟಿಕೆಟ್‌ಗಾಗಿ ಬಿಎಸ್‌ವೈ ಭೇಟಿಯಾದ ತೇಜಸ್ವಿನಿ, ಎ.ಮಂಜು

ಮುನಿಸು ತೋರಿದ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 19:57 IST
Last Updated 15 ಮಾರ್ಚ್ 2019, 19:57 IST
   

ಬೆಂಗಳೂರು:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ತೇಜಸ್ವಿನಿ ಅನಂತಕುಮಾರ್ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದರು.

ನಂತರ ಮಾತನಾಡಿದ ತೇಜಸ್ವಿನಿ, ‘ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚುನಾವಣಾ ಸಿದ್ಧತೆ ಬಗ್ಗೆ ಚರ್ಚಿಸಿ
ದ್ದೇನೆ. ಚುನಾವಣಾ ವಿಷಯವಾಗಿ ಯಡಿಯೂರಪ್ಪ ಅವರ ಮಾರ್ಗದರ್ಶನ ಪಡೆಯಲು ಬಂದಿದ್ದೆ. ಚುನಾವಣಾ ಕಚೇರಿ ಸ್ಥಾಪನೆ ಮತ್ತು ನಾಮಪತ್ರ ಸಲ್ಲಿಕೆ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ’ ಎಂದರು.

ಮಂಜು ಭೇಟಿ: ಕಾಂಗ್ರೆಸ್‌ ಮುಖಂಡ ಎ. ಮಂಜು ಕೂಡಾ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ADVERTISEMENT

ಯಡಿಯೂರಪ್ಪ ಅವರ ಜತೆಗೆ ಹಾಸನ ಶಾಸಕ ಪ್ರೀತಂ ಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಮಾತುಕತೆ ನಡೆಸುತ್ತಿದ್ದ ವೇಳೆ ಮಂಜು ಅವರು ಬಿಎಸ್‌ವೈ ನಿವಾಸಕ್ಕೆ ಬಂದರು. ‘ಬಿಜೆಪಿ ಸೇರ್ಪಡೆಗೆ ಉತ್ಸುಕನಾಗಿದ್ದು, ಬೆಂಬಲಿಗರ ಜತೆಗೆ ಚರ್ಚಿಸಿ ಶೀಘ್ರ ತೀರ್ಮಾನಕ್ಕೆ ಬರುತ್ತೇನೆ’ ಎಂದರು.

‘ನಿವೃತ್ತ ಐಎಎಸ್‌ ಅಧಿಕಾರಿ ಡಾ. ರಾಮೇಗೌಡ, ನಿವೃತ್ತ ಡಿಸಿಎಫ್‌ ಲಕ್ಷ್ಮಿನಾರಾಯಣ, ಮುಖಂಡ ಜವರೇಗೌಡ ಪೈಕಿ ಒಬ್ಬರಿಗೆ ಟಿಕೆಟ್‌ ನೀಡಬೇಕು ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ವ್ಯಕ್ತವಾಗಿತ್ತು. ಈಗ ಮಂಜು ಅವರು ಪಕ್ಷಕ್ಕೆ ಬರಲು ಒಪ್ಪಿದ್ದಾರೆ. ನಮ್ಮ ಅಭಿಪ್ರಾಯವನ್ನು ರಾಜ್ಯ ನಾಯಕರಿಗೆ ತಿಳಿಸಿದ್ದೇವೆ. ಗೆಲ್ಲುವ ಅಭ್ಯರ್ಥಿಗೆ ವರಿಷ್ಠರು ಮಣೆ ಹಾಕುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.