ADVERTISEMENT

ಬೆಂಗಳೂರಿನಲ್ಲಿಯೇ ಹೆಚ್ಚು ಆತ್ಮಹತ್ಯೆ ಪ್ರವೃತ್ತಿ: ಪುರುಷರಲ್ಲೇ ಅಧಿಕ

* ಸಾಲಬಾಧೆ ಸೇರಿ ಹಲವು ಬಗೆಯ ಒತ್ತಡಗಳೇ ಕಾರಣ: ಒಡನಾಡಿ ಸಂಸ್ಥೆ

ಕೆ.ಎನ್‌.ನರಸಿಂಹಮೂರ್ತಿ
Published 3 ಜನವರಿ 2025, 0:30 IST
Last Updated 3 ಜನವರಿ 2025, 0:30 IST
ಆತ್ಮಹತ್ಯೆ–ಪ್ರಾತಿನಿಧಿಕ ಚಿತ್ರ
ಆತ್ಮಹತ್ಯೆ–ಪ್ರಾತಿನಿಧಿಕ ಚಿತ್ರ   

ಮೈಸೂರು: ರಾಜ್ಯದಲ್ಲಿ 2021ರಿಂದ 2023ರವರೆಗೆ ಮೂರು ವರ್ಷಗಳಲ್ಲಿ 28,324 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು, ಮಹಿಳೆಯರ ಆತ್ಮಹತ್ಯೆ ಪ್ರಕರಣಗಳಿಗಿಂತ ಮೂರು ಪಟ್ಟಿಗೂ ಹೆಚ್ಚಿದೆ. ಈ ಅವಧಿಯಲ್ಲಿ 8,159 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುರುಷ–ಮಹಿಳೆಯರ ಆತ್ಮಹತ್ಯೆಯಲ್ಲಿ ರಾಜಧಾನಿ ಬೆಂಗಳೂರೇ ಮುಂದಿದೆ.

ಬೆಂಗಳೂರು ನಗರದ ನಂತರ, ಕ್ರಮವಾಗಿ ಬೆಳಗಾವಿ, ಬೆಂಗಳೂರು ಜಿಲ್ಲೆ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಆತ್ಮಹತ್ಯೆಗಳು ನಡೆದಿವೆ. ಈ ನಾಲ್ಕೂ ಜಿಲ್ಲೆಗಳಲ್ಲಿ ತಲಾ ಸಾವಿರಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು, ಹಾವೇರಿ, ಉಡುಪಿ, ವಿಜಯಪುರ, ದಾವಣಗೆರೆ, ಮೈಸೂರಿನಲ್ಲೂ ಹೆಚ್ಚಿವೆ.

ನಗರದ ‘ಒಡನಾಡಿ’ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ, ರಾಜ್ಯ ಅಪರಾಧ ದಾಖಲಾತಿ ವಿಭಾಗವು ಎಲ್ಲ ಜಿಲ್ಲೆಗಳು, ಪ್ರಮುಖ ನಗರಗಳು, ಕರ್ನಾಟಕ ರೈಲ್ವೆ ಮತ್ತು ಕೆಜಿಎಫ್‌ ಪೊಲೀಸ್‌ ಜಿಲ್ಲೆ ಸೇರಿ 38 ವಿಭಾಗಗಳ ಅಡಿ ನೀಡಿರುವ ಅಂಕಿ ಅಂಶದಲ್ಲಿ ಈ ಮಾಹಿತಿ ಇದೆ.

ADVERTISEMENT

ಮೂರು ವರ್ಷದಲ್ಲಿ, ವರ್ಷದಿಂದ ವರ್ಷಕ್ಕೆ ಪುರುಷರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದರೆ, ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ ಎಂಬುದೂ ಅಂಕಿ ಅಂಶದಿಂದ ಗೊತ್ತಾಗುತ್ತದೆ.‌

ಒತ್ತಡವೇ ಕಾರಣ: ಪುರುಷರ ಆತ್ಮಹತ್ಯೆ ಪ್ರಕರಣಗಳೇ ಹೆಚ್ಚಿರುವುದರ ಬಗ್ಗೆ ’ಪ್ರಜಾವಾಣಿ’ಯೊಂದಿಗೆ ಆತಂಕ ವ್ಯಕ್ತಪಡಿಸಿದ ‘ಒಡನಾಡಿ’ ಸಂಸ್ಥೆಯ ನಿರ್ದೇಶಕ ಎಂ.ಎಲ್‌.ಪರಶುರಾಮ್‌, ‘ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದ ಅಸಹಾಯಕತೆ, ಮಕ್ಕಳ ಶಿಕ್ಷಣ, ಮದುವೆಗಾಗಿ ಮಾಡಿದ ಸಾಲ, ಒಂಟಿತನ, ಕುಡಿತ, ಅನಾರೋಗ್ಯದಿಂದ ಮೂಡಿದ ಜಿಗುಪ್ಸೆ, ಲೈಂಗಿಕ ಅಶಕ್ತತೆ, ಪತ್ನಿ ಹಾಗೂ ಸಂಬಂಧಿಕರಿಂದ, ಮೇಲಧಿಕಾರಿಗಳಿಂದ ಕಿರುಕುಳ, ಅಕ್ರಮ ಸಂಬಂಧಗಳು ಸೇರಿ ಸಾಮಾಜಿಕ ಒತ್ತಡಗಳೂ ಹಲವು ಪುರುಷರ ಆತ್ಮಹತ್ಯೆಗೆ ಕಾರಣ’ ಎಂದು ಪ್ರತಿಪಾದಿಸಿದರು.

‘ಕೌಟುಂಬಿಕ ಮತ್ತು ಔದ್ಯೋಗಿಕ ಒತ್ತಡಗಳ ನಿರ್ವಹಣೆಯಲ್ಲಿ ಸೋಲು, ಜೀವನಪ್ರೀತಿಯನ್ನು ಮೂಡಿಸುವಲ್ಲಿ ಸಮೂಹ ಮಾಧ್ಯಮಗಳ ವೈಫಲ್ಯವೂ ಪುರುಷರನ್ನು ಆತ್ಮಹತ್ಯೆಗೆ ಪ್ರಚೋದಿಸಿರಬಹುದು’ ಎಂದು ಅಭಿ‍ಪ್ರಾಯಪಟ್ಟರು.

ಅಧ್ಯಯನ ಅಗತ್ಯ: ‘ಇಷ್ಟೊಂದು ಸಂಖ್ಯೆಯಲ್ಲಿ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಖಚಿತ ಹಿನ್ನೆಲೆ, ಕಾರಣ, ಪ್ರೇರಣೆ ಹಾಗೂ ಪರಿಹಾರಗಳ ಅಧ್ಯಯನ ತುರ್ತಾಗಿ ನಡೆಯಬೇಕು. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಈ ನಿಟ್ಟಿನಲ್ಲಿ ಪ್ರಯತ್ನಿಸುವುದು ಅತ್ಯವಶ್ಯ’ ಎಂದೂ ಹೇಳಿದರು.

ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ ಬೇಕು. ಆತ್ಮಹತ್ಯೆಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತಿಸಬೇಕು.
-ಎಂ.ಎಲ್‌.ಪರಶುರಾಮ್‌, ‘ಒಡನಾಡಿ’ ನಿರ್ದೇಶಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.