ADVERTISEMENT

ಡಿಸೆಂಬರ್‌–ಜನವರಿ ಆಸುಪಾಸಿನಲ್ಲೇ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚು, ಕಾರಣವಿಷ್ಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2025, 7:17 IST
Last Updated 25 ಡಿಸೆಂಬರ್ 2025, 7:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಹೊಸ ವರ್ಷ ಆಸುಪಾಸು... ಮೈಕೊರೆವ ಚಳಿ, ಮುಸುಕಿದ ಮಂಜು, ನಸುಕಿನಲ್ಲಿ ಆವರಿಸುವ ನಿದ್ರೆ. ಇದೇ ಹೊತ್ತಿನಲ್ಲಿ ದುತ್ತನೆ ಎದುರಾಗುವ ಅಪಘಾತವೆಂಬ ಆಘಾತಕ್ಕೆ ಸಿಲುಕಿ ಅಸುನೀಗಿದವರು ಹಲವರು. ಡಿಸೆಂಬರ್ ಹಾಗೂ ಜನವರಿಯಲ್ಲಿ ಅಪಘಾತಗಳ ಸರಣಿ ಕರ್ನಾಟಕವನ್ನೂ ಸೇರಿದಂತೆ ದೇಶದ ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತದೆ.

ಉತ್ತರ ಪ್ರದೇಶ, ದೆಹಲಿಯನ್ನೂ ಒಳಗೊಂಡು ಹೆದ್ದಾರಿಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚು. ಅದರಂತೆಯೇ ರಾಜ್ಯದಲ್ಲೂ ಚಳಿಗಾಲದಲ್ಲಿ ರಸ್ತೆ ಅಪಘಾತಗಳ ಪ್ರಮಾಣವೂ ಅಧಿಕವಾಗಿದೆ ಎಂದು ಅಂಕಿ ಅಂಶಗಳೇ ಹೇಳುತ್ತವೆ. 

ADVERTISEMENT

ಚಿತ್ರದುರ್ಗದ ಹಿರಿಯೂರು ಸಮೀಪ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸೀಬರ್ಡ್‌ ಬಸ್‌ಗೆ ಗುರುವಾರ ನಸುಕಿನಲ್ಲಿ ಎದುರಿನಿಂದ ಬರುತ್ತಿದ್ದ ಟ್ರಕ್‌ ಡಿವೈಡರ್‌ ದಾಟಿ ಬಂದು ಅಪ್ಪಳಿಸಿದ ಪರಿಣಾಮ, ಬಸ್‌ ಬೆಂಕಿಗೆ ಆಹುತಿಯಾಗಿದೆ. ಒಳಗಿದ್ದವರಲ್ಲಿ ಹಲವರು ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದಾರೆ. 

2021ರ ಜ. 15ರಂದು ದಾವಣಗೆರೆಯಿಂದ ಗೋವಾದತ್ತ ಪ್ರವಾಸಕ್ಕೆ ಹೊರಟಿದ್ದ ಮಹಿಳೆಯರಿದ್ದ ಮಿನಿಬಸ್‌ಗೆ ಟಿಪ್ಪರ್ ಡಿಕ್ಕಿಯಾಗಿ 12 ಜನ ಮೃತಪಟ್ಟರು. ಈ ಅಪಘಾತ ನಡೆದಿದ್ದೂ ರಾಷ್ಟ್ರೀಯ ಹೆದ್ದಾರಿ 48ರಲ್ಲೇ (ಆಗ ಇದು ಎನ್‌ಎಚ್‌ 4 ಆಗಿತ್ತು). 

2024ರ ಜ. 29ರಂದು ಜಮಖಂಡಿ ತಾಲ್ಲೂಕಿನ ಅಲಗೂರು ಗ್ರಾಮದಲ್ಲಿ ಟ್ರ್ಯಾಕ್ಟರ್‌ ಹಾಗೂ ಶಾಲಾ ವಾಹನ ನಡುವೆ ಡಿಕ್ಕಿ ಸಂಭವಿಸಿತ್ತು. 2022ರ ಡಿ. 15ರಂದು ಶಿವಮೊಗ್ಗ ಜಿಲ್ಲೆಯಲ್ಲೂ ಶಾಲಾ ವಾಹನ ಅಪಘಾತಕ್ಕೀಡಾಗಿತ್ತು. 2024ರ ಡಿ. 2ರಂದು ಹಾಸನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದರು. 2019ರಲ್ಲಿ ತುಮಕೂರು ಹಾಗೂ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಟ್ರಕ್‌ ಪಲ್ಟಿಯಾಗಿ ಉದ್ಯಮಿಯ ಕುಟುಂಬದ ನಾಲ್ವರು ಮೃತಪಟ್ಟಿದ್ದರು.

ಕೋವಿಡ್ ಅವಧಿಯನ್ನು ಹೊರತುಪಡಿಸಿ ಕಳೆದ ಕೆಲ ವರ್ಷಗಳಲ್ಲಿ ರಸ್ತೆ ಅಪಘಾತಗಳು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿವೆ. 2023ರಲ್ಲಿ ಅತಿ ಹೆಚ್ಚು 43,440 ಅಪಘಾತಗಳು ಸಂಭವಿಸಿವೆ ಎಂದು ಪೊಲೀಸ್ ಇಲಾಖೆಯ ದಾಖಲೆಗಳು ಹೇಳುತ್ತವೆ. 2024ರಲ್ಲಿ 39 ಸಾವಿರ ಅಪಘಾತಗಳು ನಡೆದಿವೆ. 

ರಾಷ್ಟ್ರೀಯ ಹೆದ್ದಾರಿ 48ರ ಚಿತ್ರದುರ್ಗ ಬಳಿ 2023ರ ಡಿ. 25ರಂದು ಸ್ಲೀಪರ್ ಬಸ್‌ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದರು. ಇದೇ 2025ರ ಜ. 22ರಂದು ಕಾರವಾರದಲ್ಲಿ ಕಂದಕಕ್ಕೆ ಟ್ರಕ್‌ ಬಿದ್ದು 10 ಜನ ಮೃತಪಟ್ಟಿದ್ದರು. 2020ರ ಜನವರಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಏಳು ಜನ ಮೃತಪಟ್ಟಿದ್ದರು. 2016ರ ಡಿಸೆಂಬರ್‌ನಲ್ಲಿ ತುಮಕೂರು ಜಿಲ್ಲೆಯಲ್ಲಿ ಬಸ್ ಹಾಗೂ ಕಂಟೇನರ್ ಟ್ರಕ್‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 10 ಜನ ಮೃತಪಟ್ಟಿದ್ದರು. 

ದಾಖಲೆಗಳ ಪ್ರಕಾರ ರಾಷ್ಟ್ರೀಯ ಹೆದ್ದಾರಿ 48 ಹಾಗೂ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಘಾತ ಸಂಭವಿಸಿದ್ದೇ ಹೆಚ್ಚು. ಈ ಮುಖಾಮುಖಿ ಡಿಕ್ಕಿಗೆ ರಾತ್ರಿ ಸಂಚಾರ, ಅತಿಯಾದ ವೇಗವೇ ಕಾರಣ ಎಂದೆನ್ನಲಾಗಿದೆ.  

ಇಂಥ ಬಹಳಷ್ಟು ಭೀಕರ ಅಪಘಾತಗಳು ಡಿಸೆಂಬರ್‌ ಹಾಗೂ ಜನವರಿಯ ಆಸುಪಾಸಿನಲ್ಲೇ ಆಗಿರುವುದು ಕಾಕತಾಳೀಯ. ಚಳಿಗಾಲವಾದ್ದರಿಂದ ದಟ್ಟ ಮಂಜು ಆವರಿಸಿರುವ ಕಾರಣ ಗೋಚರತೆಯ ಪ್ರಮಾಣ ಕಡಿಮೆ ಇರುವುದೂ ಇಂಥ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲೊಂದು. ಇದರೊಂದಿಗೆ ನಸುಕಿನ ಜಾವದಲ್ಲಿ ಆವರಿಸುವ ನಿದ್ರೆ ಪ್ರಮುಖ ಕಾರಣ ಎಂದು ಪೊಲೀಸರು ಹೇಳುತ್ತಾರೆ. ವರ್ಷಾಂತ್ಯದಲ್ಲಿ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚು ಇರುವುದರಿಂದ ವಾಹನ ಚಾಲಕರು ಸಾಕಷ್ಟು ಎಚ್ಚರ ವಹಿಸುವುದು, ನಸುಕಿನಲ್ಲಿ ಪ್ರಯಾಣಿಸುವುದನ್ನು ಆದಷ್ಟು ತಪ್ಪಿಸುವುದು ಒಳಿತು ಎನ್ನುವುದು ಅವರ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.