ಯಾಂಗೊನ್: ಮ್ಯಾನ್ಮಾರ್ನಲ್ಲಿ ಭೀಕರ ರಕ್ತಪಾತವಾಗಿದ್ದು, ಮಿಲಿಟರಿ ಆಡಳಿತವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ 114 ನಾಗರಿಕರನ್ನು ಶನಿವಾರದಂದುಭದ್ರತಾ ಪಡೆಗಳು ಹತ್ಯೆಗೈದಿವೆ.ಫೆಬ್ರುವರಿ 1ರ ಮಿಲಿಟರಿ ದಂಗೆಯ ಬಳಿಕ ನಡೆದ ಅತಿ ದೊಡ್ಡ ಹಿಂಸಾತ್ಮಕ ಘಟನೆ ಇದಾಗಿದೆ.
ನಾಗರಿಕರು ಶಾಂತಿಯುತವಾಗಿ ನಡೆಸುತ್ತಿರುವ ಪ್ರತಿಭಟನೆ ಮೇಲೆ ಮ್ಯಾನ್ಮಾರ್ ಸೇನೆಯು ಗುಂಡಿನ ದಾಳಿ ನಡೆಸಿದೆ. ಮ್ಯಾನ್ಮಾರ್ ಸಶಸ್ತ್ರ ಪಡೆಯ ದಿನದಂದೇ ಇಂತಹದೊಂದು ಹೀನಾಯ ಕೃತ್ಯ ಎಸಗಿದೆ.
ಮೃತಪಟ್ಟಪಟ್ಟವರಲ್ಲಿ ಮಕ್ಕಳೂ ಸೇರಿದ್ದಾರೆ. ಯಾಂಗೊನ್ನಲ್ಲಿ 27 ಮಂದಿಯನ್ನು ಹತ್ಯೆಗೈಯಲಾಗಿದೆ. 13 ವರ್ಷದ ಬಾಲಕಿಯು ಇದರಲ್ಲಿ ಸೇರಿದ್ದಾಳೆ.
'ಈ ಕ್ರಾಂತಿಯ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರರಿಗೆ ನಮನಗಳನ್ನು ಸಲ್ಲಿಸುತ್ತೇವೆ. ಈ ಹೋರಾಟವನ್ನು ನಾವು ಗೆಲ್ಲುತ್ತೇವೆ' ಎಂದು ಪ್ರತಿಭಟನೆಗೆ ಮುಂದಾಳತ್ವ ವಹಿಸುತ್ತಿರುವ ಜನರಲ್ ಸ್ಟೈಕ್ ಕಮಿಟಿ ಆಫ್ ನ್ಯಾಷನಲಿಟಿಸ್ (ಜಿಎಸ್ಸಿಎನ್) ತಿಳಿಸಿದೆ.
ಇದನ್ನೂ ಓದಿ:ಮ್ಯಾನ್ಮಾರ್ನಲ್ಲಿ ಗುಂಟೇಟು–ಭಾರತಕ್ಕೆ ಬಂದ ಮೂವರು
ಮ್ಯಾನ್ಮಾರ್ ಉತ್ತರದಲ್ಲಿರುವ ಕಾಚಿನ್ ಪ್ರದೇಶದಿಂದ ದಕ್ಷಿಣದ ಅಂಡಮಾನ್ ಸಮುದ್ರದ ವರೆಗೂ ನಾಗರಿಕರನ್ನು ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ. ಇದುವರೆಗೆ ಪ್ರತಿಭಟನೆಯಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ 440ಕ್ಕೆ ಏರಿಕೆಯಾಗಿದೆ.
ಘಟನೆಯನ್ನು ಅಮೆರಿಕ ಬಲವಾಗಿ ಖಂಡಿಸಿದೆ. ಈ ರಕ್ತಪಾತವು ಭಯಾನಕವಾಗಿದ್ದು, ಮಿಲಿಟರಿ ಆಡಳಿತದಲ್ಲಿ ಬದುಕಲು ಜನರು ಬಯಸುತ್ತಿಲ್ಲ ಎಂದು ಅಮೆರಿಕ ವಕ್ತಾರ ಥಾಮಸ್ ವಾಜ್ಡಾ ಹೇಳಿಕೆ ನೀಡಿದ್ದಾರೆ.
ಅಮೆರಿಕದ ಉನ್ನತ ಮಿಲಿಟರಿ ಅಧಿಕಾರಿಗಳು ಹತ್ಯೆಯನ್ನು ಖಂಡಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.