ADVERTISEMENT

ಮೀ ಟೂಅಂದ್ರೆ ಏನು?

ಬಿ.ಎನ್.ಮಲ್ಲೇಶ್
Published 2 ಡಿಸೆಂಬರ್ 2018, 20:00 IST
Last Updated 2 ಡಿಸೆಂಬರ್ 2018, 20:00 IST
   

ಅಂಬರೀಷ್ ಆತ್ಮ ಭೂಲೋಕ ಬಿಟ್ಟು ಪರಲೋಕ ತಲುಪುತ್ತಿದ್ದಂತೆ ದೇವದೂತರು ಬಂದು ಪಟಕ್ಕನೆ ಹಿಡಿದುಕೊಂಡರು. ‘ಏಯ್ ಎತ್ರಯ್ಯ ಕೈಯಿ, ಯಾರಯ್ಯ ನೀವೆಲ್ಲ? ನನ್ಯಾಕೆ ಹಿಡ್ಕೊಂಡಿದೀರಿ?’ ಎಂದು ಅಂಬಿ ಸಿಟ್ಟಿಗೆದ್ದರು.

‘ನಾವು ದೇವದೂತರು, ನಿಮ್ಮನ್ನು ಸ್ವರ್ಗಕ್ಕೆ ಕರೆ ತರಲು ಅಪ್ಪಣೆಯಾಗಿದೆ’.

‘ಯ್ಯೋ... ಯಾವ ಸೀಮೆ ಸ್ವರ್ಗನಯ್ಯ ನಿಮ್ದು? ನಾನು ಈ ಜಗತ್ತಿನಾಗಿರೋ ಎಲ್ಲ ಸ್ವರ್ಗನೂ ನೋಡಾಯ್ತು. ಈಗ ಸ್ವರ್ಗ ಗಿರ್ಗ ನೀವೇ ಇಟ್ಕಳಿ, ನಮ್ ಪಾಡಿಗೆ ನಮ್ಮನ್ನ ಬುಟ್‍ಬುಡಿ ಅಷ್ಟೆ’.

ADVERTISEMENT

‘ಅದು ಹಂಗಲ್ಲ ಇವರೇ... ರಾಜಣ್ಣೋರು, ವಿಷ್ಣುವರ್ಧನ್ನು ನಿಮ್ಮನ್ನ ಕರ್ಕಂಡ್ ಬರೋಕೆ ಹೇಳಿದ್ರು’.

‘ಥತ್ ಬಡ್ಡೆತ್ತವ, ಅದ್ನ ಮೊದ್ಲೇ ಹೇಳೋಕೇನಾಗಿತ್ತಯ್ಯ ದಾಡಿ? ನಡೀರಿ ಮತ್ತೆ ಅಲ್ಲಿಗೆ ಹೋಗೋಣ’.

ಅಂಬರೀಷ್‍ರನ್ನ ಕಂಡ ತಕ್ಷಣ ರಾಜಣ್ಣ, ವಿಷ್ಣು ಬಾಚಿ ತಬ್ಬಿಕೊಂಡರು. ರಾಜಣ್ಣೋರು ಅಂಬರೀಷ್ ಮೈದಡವುತ್ತ ‘ಯಾಕಪ್ಪ ಅಂಬರೀಷು ಇಷ್ಟು ಬೇಗ ಬಂದುಬಿಟ್ಟೆ? ನೀನೂ ಇಲ್ಲ ಅಂದ್ರೆ ಅಲ್ಲಿ ಚಿತ್ರರಂಗದ ಸಮಸ್ಯೆಗಳನ್ನ ಯಾರು ಬಗೆಹರಿಸ್ತಾರೆ?’

ಅಂಬರೀಷ್‍ಗೆ ನಗು ಬಂತು. ‘ಅಣ್ಣಾ, ಈಗ ಚಿತ್ರರಂಗದ ಸಮಸ್ಯೆಗಳು ಅಂದ್ರೆ ಏನ್ ಗೊತ್ತಾ? ಥೇಟರ್ ಸಿಗ್ಲಿಲ್ಲ, ಪ್ರಚಾರಕ್ಕೆ ಬರ್ಲಿಲ್ಲ, ಚೆಕ್ ಬೌನ್ಸು, ಮೀಟೂ... ಬರೀ ಇವೇ. ಯಾರ ಮಾತು ಯಾರೂ ಕೇಳಲ್ಲ ಅಲ್ಲಿ...’

ರಾಜಣ್ಣ ತಲೆ ಕೆರೆದುಕೊಂಡು ಕೇಳಿದರು ‘ಅಂಬರೀಷು, ಈ ಮೀಟೂ ಅಂದ್ರೆ ಏನು?’

‘ಅಣ್ಣ, ಅದನ್ನ ಒಂದ್ ಲೈನಲ್ಲಿ ಹೇಳೋಕಾಗಲ್ಲ. ಫ್ರೆಶ್ ಆಗಿ ಬಂದು ಹೇಳ್ತೀನಿ ಇರಿ... ಏಯ್ ವಿಷ್ಣು, ನಾಟಿಕೋಳಿ ಸಾರು ರೆಡಿ ಮಾಡ್ಸಿದೀಯೇನೋ...’ ಎನ್ನುತ್ತ ಒಳ ನಡೆದರು ಅಂಬರೀಷ್...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.