ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
   

ಅನುದಾನಿತರಿಗೂ ಸಲ್ಲಲಿ ಆರೋಗ್ಯ ಭಾಗ್ಯ

ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ‘ಆರೋಗ್ಯ ಸಂಜೀವಿನಿ’ ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ದೊರೆಯಲಿದೆ. ಅನುದಾನಿತ ಶಾಲಾ–ಕಾಲೇಜಿನ ನೌಕರರು ಸಹ ಸರ್ಕಾರದ ವೇತನ ಶ್ರೇಣಿಯ ವೇತನ, ಭತ್ಯೆ ಪಡೆಯುತ್ತಾರೆ. ಸರ್ಕಾರಿ ಖಜಾನೆ, ಎಚ್ಆರ್‌ಎಂಎಸ್‌ ದತ್ತಾಂಶದ
ವ್ಯವಸ್ಥೆಯಡಿಯೇ ಅವರಿಗೆ ವೇತನ ಪಾವತಿಸಲಾಗುತ್ತಿದೆ. ಹೀಗಿದ್ದರೂ, ಆರೋಗ್ಯ ಸೌಲಭ್ಯ ಕಲ್ಪಿಸುವಲ್ಲಿ ಈ ನೌಕರರ ಬಗ್ಗೆ ಮಲತಾಯಿ ಧೋರಣೆ ತಳೆಯಲಾಗಿದೆ. ಅನುದಾನಿತ ನೌಕರರಿಗೂ ಈ ಯೋಜನೆಯನ್ನು ವಿಸ್ತರಿಸಬೇಕಿದೆ.

-ಆರ್. ಕುಮಾರ್, ಬೆಂಗಳೂರು

ADVERTISEMENT

**

ಸತ್ವದ ನೆಲೆಯ ಅರ್ಥಪೂರ್ಣ ವಿಶ್ಲೇಷಣೆ

‘ಹಿಂದೂ ನಾವೆಲ್ಲ ಒಂದು! ಎಂದು?’ ಲೇಖನದಲ್ಲಿ (ಲೇ: ರಘುನಾಥ ಚ.ಹ., ಪ್ರ.ವಾ., ಅ. 29) ಜಾತೀಯತೆ ಮತ್ತು ಮತೀಯತೆ ನಾಡಿನ ನರನಾಡಿಗಳನ್ನು ವ್ಯಾಪಿಸಿರುವುದರ ಕುರಿತಾದ ವಾಸ್ತವಿಕ ಚಿತ್ರಣವಿದೆ. ಏನೂ ಹೇಳದೆ ಭ್ರಮೆ ಮೂಡಿಸುವ ‘ಕಾಂತಾರ 1’ ಸಿನಿಮಾ ಎಲ್ಲೆಡೆ ವ್ಯಾಪಿಸಿದರೆ, ನೆಲದ ವಾಸ್ತವವನ್ನು ತೆರೆದು ತೋರುವ ‘ಹೆಬ್ಬುಲಿ ಕಟ್’ ಸಿನಿಮಾ ನೇಪಥ್ಯಕ್ಕೆ ಸರಿದಿರುವುದು ಯೋಜಿತ ಸಾಂಸ್ಕೃತಿಕ ರಾಜಕಾರಣದ ಫಲಶ್ರುತಿಯೇ ಆಗಿದೆ. ಈ ಕುರಿತು ಪ್ರಗತಿಪರ ಮತ್ತು ಎಚ್ಚರಗೊಂಡ ದಲಿತ ಸಮುದಾಯಗಳು ತಮ್ಮ ಮುಂದಿನ ನಡೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಮುಖ್ಯವಾಗಿ ನಾವು ‘ಹೆಬ್ಬುಲಿ ಕಟ್’ ಸಿನಿಮಾ ನೋಡಬೇಕು ಮತ್ತು ಇತರರೂ ನೋಡುವಂತೆ ಪ್ರೇರೇಪಿಸಬೇಕು.

-ಸರ್ಜಾಶಂಕರ ಹರಳಿಮಠ, ಶಿವಮೊಗ್ಗ 

**

ರೋಸ್ಟರ್ ಬಿಂದು: ಪರಾಮರ್ಶೆ ಅಗತ್ಯ

ಅವೈಜ್ಞಾನಿಕವಾಗಿ ರೂಪಿಸಿರುವ ಮೀಸಲಾತಿಯ ರೋಸ್ಟರ್ ಬಿಂದು ಕುರಿತು ಒಕ್ಕಲಿಗರ ಸಂಘ ಮತ್ತು ವೀರಶೈವ ಮಹಾಸಭಾ ಧ್ವನಿ ಎತ್ತಿವೆ. 3ಎ ಮತ್ತು 3ಬಿ ಪ್ರವರ್ಗಕ್ಕೆ ಸರ್ಕಾರ ಪ್ರಕಟಿಸಿರುವ ಈ ರೋಸ್ಟರ್ ಬಿಂದುವಿನಿಂದ ಅನ್ಯಾಯ ಆಗಲಿದೆ. ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವಾಗ ಹುದ್ದೆಗಳು 25ಕ್ಕಿಂತ ಕಡಿಮೆ ಇದ್ದಾಗ ಈ ಅನ್ಯಾಯ ಸರ್ವೇಸಾಮಾನ್ಯ. ಹುದ್ದೆಗಳು 25ಕ್ಕಿಂತ ಕಡಿಮೆ ಇದ್ದಾಗ 3ಎಗೆ ಯಾವುದೇ ಮೀಸಲಾತಿ ಲಭಿಸುವುದಿಲ್ಲ. 20 ಹುದ್ದೆಗಳಿದ್ದಾಗ 3ಬಿಗೆ ಮೀಸಲಾತಿ ಸಿಗುವುದಿಲ್ಲ. ಇದೇ ಹುದ್ದೆಗಳ ಮಾದರಿಯಲ್ಲಿ 10 ಭಾರಿ ಅರ್ಜಿ ಆಹ್ವಾನಿಸಿದರೂ ಇದೇ ರೀತಿ ಆಗುತ್ತದೆ. ಹಾಗಾಗಿ, ರೋಸ್ಟರ್ ಬಿಂದುವನ್ನು ಪರಾಮರ್ಶಿಸಬೇಕಿದೆ.

-ಪ್ರೀತಿ ದೇವೇಂದ್ರಪ್ಪ ಕಲಕುಟ್ರಿ, ಸವದತ್ತಿ 

**

ಆರೋಗ್ಯ ಸಂಜೀವಿನಿ: ಗೊಂದಲ ತಪ್ಪಿಸಿ

ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಅಕ್ಟೋಬರ್‌ನಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ. ಹಾಗಾಗಿ, ‘ಸಿ’ ಮತ್ತು ‘ಡಿ’ ದರ್ಜೆಯ ನೌಕರರಿಗೆ ನೀಡುತ್ತಿದ್ದ ವೈದ್ಯಕೀಯ ಭತ್ಯೆಯನ್ನು ಸ್ಥಗಿತಗೊಳಿಸಲಾಗಿದೆ. ಯೋಜನೆಗೆ ಒಳಪಟ್ಟರೆ ಯೋಜನೆಯ ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯಲಷ್ಟೆ ಅವಕಾಶವಿದೆ. ಹೊರರೋಗಿಯಾಗಿ ಚಿಕಿತ್ಸೆ ಪಡೆದಾಗ ಮಾಡುವ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವ ಕುರಿತಾಗಲೀ ಅಥವಾ ಮುಂದುವರಿದ ಚಿಕಿತ್ಸೆಯ ವೆಚ್ಚ ಮರುಪಾವತಿಸುವ ಕುರಿತಾಗಲೀ ಸ್ಪಷ್ಟತೆಯಿಲ್ಲ. ಇದರಿಂದ ಬಹುಪಾಲು ನೌಕರರು ಯೋಜನೆಗೆ ಒಳಪಡಬೇಕೇ ಬೇಡವೇ ಎನ್ನುವ ಗೊಂದಲದಲ್ಲಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪ‍ಷ್ಟನೆ ನೀಡಬೇಕಿದೆ.

-ಇಸ್ಮಾಯಿಲ್ ಜೋಕಟ್ಟೆ, ಮಂಗಳೂರು

**

ನಿವೃತ್ತರಿಗೆ ಪಿಂಚಣಿ: ತಾರತಮ್ಯ ಬೇಡ

ದೇಶದಾದ್ಯಂತ ಸುಮಾರು 78 ಲಕ್ಷ ಇರುವ ಇಪಿಎಸ್ ಪಿಂಚಣಿದಾರರು ಹೆಚ್ಚಿನ ಪಿಂಚಣಿ ಸಿಗದೆ ನಿರಾಶೆಗೊಂಡಿರುವುದು ವರದಿಯಾಗಿದೆ. ಇತ್ತೀಚೆಗೆ ಇಪಿಎಫ್ ವ್ಯಾಪ್ತಿಗೆ ಒಳಪಡುವ ಕೆಲವು ನಿವೃತ್ತ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರಂತರ ಕಾನೂನು ಹೋರಾಟದ ಫಲವಾಗಿ ಕೆಲವು ಷರತ್ತು ವಿಧಿಸಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೆಚ್ಚಿನ ಪಿಂಚಣಿ ಬರುತ್ತಿದೆ. ಕೆಎಂಎಫ್‌ನಲ್ಲಿ 35 ವರ್ಷ ಸೇವೆ ಸಲ್ಲಿಸಿ 2019ರಲ್ಲಿ ನಿವೃತ್ತನಾದ ನನಗೂ ಹೆಚ್ಚಿನ ಪಿಂಚಣಿಯು ಕಳೆದ ಮೂರು ತಿಂಗಳಿಂದ ಬರುತ್ತಿದೆ. ಕೇಂದ್ರ ಸರ್ಕಾರ ನಿವೃತ್ತರ ನೋವಿಗೆ ಸ್ಪಂದಿಸಲಿ.

-ಡಿ. ಪ್ರಸನ್ನಕುಮಾರ್, ಬೆಂಗಳೂರು 

**

‘ಗಣೇಶನ ಮದುವೆ’ಯ ಸ್ಥಿತಿ ಬಾರದಿರಲಿ!

ಕೊನೆಗೂ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲಾಗಿದೆ. ಆ ಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕಗೊಂಡಿದ್ದಾರೆ. ಸಾಹಿತ್ಯಗಂಗೋತ್ರಿಗೆ ಈ ಅವಸ್ಥೆ ಬರಬಾರದಿತ್ತು. ಆಡಳಿತಾಧಿಕಾರಿಯು ತನ್ನ ಕಾಲಾವಧಿಯಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯದಿರಲಿ. ಅಧಿಕಾರಿ ವರ್ಗದ ಧೋರಣೆ ಪ್ರದರ್ಶಿಸದೆ ಇರಲಿ. ಸಾಹಿತ್ಯ–ಸಂಸ್ಕೃತಿ, ನಾಡು–ನುಡಿ, ಇವುಗಳ ಪರಿಚಾರಿಕೆಯ ವಿನಮ್ರ ಭಾವ ಹೊಂದಿ ಮುನ್ನಡೆಯಲಿ. ಸರ್ಕಾರವು ಬೇಗನೆ ನೂತನ ಅಧ್ಯಕ್ಷರ ಆಯ್ಕೆಗೆ ಅನುವು ಮಾಡಿಕೊಡಲಿ. ಅಧ್ಯಕ್ಷರ ಆಯ್ಕೆಯು ‘ಗಣೇಶನ ಮದುವೆ’ಯಂತೆ; ಬಿಬಿಎಂಪಿ ಚುನಾವಣೆಯಂತೆ ನನೆಗುದಿಗೆ ಬೀಳದಿರಲಿ.

-ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು 

**

ರಸ್ತೆ ಗುಂಡಿ

ನಾಡಿನ ಕೋಟ್ಯಂತರ

ಜನರಿಗೆ ಬೆಳಕು

ನೀಡುತ್ತಿದೆ

ಜೋಗದ ಗುಂಡಿ

ನಿತ್ಯ ಲಕ್ಷಾಂತರ

ಜನರಿಗೆ ಕೊಳಕು

ದರ್ಶನ ಮಾಡಿಸುತ್ತಿವೆ

ರಾಜಧಾನಿಯ

ರಸ್ತೆ ಗುಂಡಿ!

-ವೈ. ಯಮುನೇಶ್, ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.