ಸಾಯಿ ಸುದರ್ಶನ್ ಹಾಗೂ ಕರುಣ್ ನಾಯರ್ (ಬಲ)
ಕೃಪೆ: ಪಿಟಿಐ
ಬೆಂಗಳೂರು: ಇತ್ತೀಚೆಗೆ ಮುಕ್ತಾಯವಾದ 'ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ' ಟೆಸ್ಟ್ ಕ್ರಿಕೆಟ್ ಸರಣಿಯುದ್ದಕ್ಕೂ ಭಾರತದ ಬ್ಯಾಟರ್ಗಳು ಅಮೋಘ ಪ್ರದರ್ಶನ ತೋರಿದರೂ, ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಹಾಗೂ ಕರುಣ್ ನಾಯರ್ ಮಿಂಚಲಿಲ್ಲ.
ಉತ್ತಮ ಆರಂಭ ದೊರೆತ ನಂತರ ಅದನ್ನು ಮುಂದುವರಿಸಲು ಅಥವಾ ಆರಂಭಿಕ ಆಘಾತ ಎದುರಾದರೆ ಇನಿಂಗ್ಸ್ನಲ್ಲಿ ಸ್ಥಿರತೆ ಕಾಪಾಡಲು ಸುದರ್ಶನ್ ಅಥವಾ ಕರುಣ್ ಅವರಿಗೆ ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ 23.33ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ ಸುದರ್ಶನ್, ಆಡಿದ ಮೂರು ಪಂದ್ಯಗಳ ಆರು ಇನಿಂಗ್ಸ್ಗಳಲ್ಲಿ ಗಳಿಸಿದ್ದು 140 ರನ್ ಮಾತ್ರ. ಉಳಿದೆರಡು ಪಂದ್ಯಗಳಲ್ಲಿ ಅವಕಾಶ ಪಡೆದ ಕರುಣ್, 27.75ರ ಸರಾಸರಿಯಲ್ಲಿ 4 ಇನಿಂಗ್ಸ್ಗಳಿಂದ ಕಲೆಹಾಕಿದ್ದು 111 ರನ್ ಅಷ್ಟೇ.
ದೇಶೀಯ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಯಶಸ್ಸು ಗಳಿಸಿದ್ದ ಸುದರ್ಶನ್, 3ನೇ ಕ್ರಮಾಂಕದಲ್ಲಿ ಅತ್ಯುತ್ತಮ ಆಟದ ಮೂಲಕ ಗಮನ ಸೆಳೆದಿದ್ದ ಕರುಣ್, ಟೀಂ ಇಂಡಿಯಾದ ಮೂರನೇ ಕ್ರಮಾಂಕಕ್ಕೆ ಉತ್ತಮ ಆಯ್ಕೆಯಾಗಬಲ್ಲರು ಎನ್ನಲಾಗಿತ್ತು.
ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಲು, ಸವಾಲುಗಳನ್ನು ಸ್ವೀಕರಿಸಲು ಹಾಗೂ ಅವಕಾಶಗಳನ್ನು ಬಾಚಿಕೊಳ್ಳಲು, ಪ್ರತಿಯೊಂದು ಕ್ರಮಾಂಕಕ್ಕೂ ಇಬ್ಬರು ಅಥವಾ ಮೂವರು ಪ್ರತಿಭಾವಂತ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಇಂತಹ ಹೊತ್ತಲ್ಲಿ, ಈ ಇಬ್ಬರು ಆಟಗಾರರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಸಾಕಷ್ಟು ರನ್ ಗಳಿಸಲು ವಿಫಲರಾಗಿದ್ದಾರೆ.
ಸುದರ್ಶನ್ (23) ವಯಸ್ಸನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಇನ್ನಷ್ಟು ಅವಕಾಶಗಳನ್ನು ನೀಡಲು ತಂಡದ ಆಡಳಿತ ಮನಸ್ಸು ಮಾಡಬಹುದು. ಹಾಗೆಯೇ, ಇಂಗ್ಲೆಂಡ್ ವಿರುದ್ಧದ ಸರಣಿಯ ಮಹತ್ವದ ಐದನೇ ಪಂದ್ಯದ (ಕೆನ್ನಿಂಗ್ಟನ್ ಓವಲ್ ಟೆಸ್ಟ್) ಮೊದಲ ಇನಿಂಗ್ಸ್ನಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ್ದರಿಂದ 33 ವರ್ಷ ಕರುಣ್ ಅವರಿಗೂ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ.
ಭಾರತ ತಂಡದ 3ನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಬಹುದಿನಗಳಿಂದ ಹಾಗೆಯೇ ಇದೆ.
ಈ ಕ್ರಮಾಂಕದಲ್ಲಿ ಆಡುತ್ತಿದ್ದ 'ಟೆಸ್ಟ್ ಪರಿಣತ' ಚೇತೇಶ್ವರ ಪೂಜಾರ ಅವರು ಕೊನೇ ಸಲ ಭಾರತವನ್ನು ಪ್ರತಿನಿಧಿಸಿದ್ದು 2023ರ ಜೂನ್ನಲ್ಲಿ. ಅದಾದ ನಂತರ ಅವರ ಸ್ಥಾನಕ್ಕೆ ಸೂಕ್ತ ಆಟಗಾರ ಸಿಕ್ಕಿಲ್ಲ.
ಭಾರತ ತಂಡವು ಕಳೆದ ಎರಡು ವರ್ಷಗಳಲ್ಲಿ ಐದು–ಆರು ಬ್ಯಾಟರ್ಗಳನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಿದೆ. ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ನಿವೃತ್ತಿಯ ಬಳಿಕ 3ನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪೂಜಾರ ಅವರನ್ನು ಕೈಬಿಟ್ಟ ಬಳಿಕ ಹಾಲಿ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ, ಅವರಿಗೂ ಸಂಪೂರ್ಣ ಯಶಸ್ಸು ಸಿಕ್ಕಿರಲಿಲ್ಲ. ಇದೀಗ ಅವರು, ವಿರಾಟ್ ಕೊಹ್ಲಿ ವಿದಾಯದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಆಡಲಾರಂಭಿಸಿದ್ದಾರೆ.
ಗಿಲ್, ಕರುಣ್, ಸುದರ್ಶನ್ ಅವರಲ್ಲದೆ ದೇವದತ್ತ ಪಡಿಕ್ಕಲ್, ಕೆ.ಎಲ್ ರಾಹುಲ್ ಕೂಡ ಈ ಕ್ರಮಾಂಕದಲ್ಲಿ ಆಡಿದ್ದಾರೆ. ಆದರೆ, ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.
ಟೀಂ ಇಂಡಿಯಾ ಬ್ಯಾಟರ್ಗಳು ಇಂಗ್ಲೆಂಡ್ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರೂ, ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ 3ನೇ ಕ್ರಮಾಂಕದ ತಲೆನೋವು ಕಡಿಮೆಯಾಗಿಲ್ಲ. ಈ ಕ್ರಮಾಂಕದ ಪ್ರಾಮುಖ್ಯತೆ ಮತ್ತು ಬ್ಯಾಟಿಂಗ್ ವಿಭಾಗದ ಮೇಲೆ ಉಂಟಾಗುವ ಪರಿಣಾಮ, ಅದರಲ್ಲೂ ಸೇನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಏನಾಗಬಹುದು ಎಂಬುದರ ಅರಿವು ಅವರಿಗೆ ಇದೆ.
ಆಧುನಿಕ ಕ್ರಿಕೆಟ್ನ ಶ್ರೇಷ್ಠರೆನಿಸಿರುವ ದ್ರಾವಿಡ್, ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರ ಹಾಗೂ ಕೇನ್ ವಿಲಿಯಮ್ಸನ್ ಅವರಂತಹ ದಿಗ್ಗಜರು ಆಡಿರುವ 3ನೇ ಕ್ರಮಾಂಕವು ಅಗ್ರ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದ ನಡುವಣ ಸೇತುವೆ ಇದ್ದಂತೆ. ಆರಂಭಿಕ ಆಘಾತದ ಬಳಿಕ ಇನಿಂಗ್ಸ್ಗೆ ಸ್ಥಿರತೆ ಒದಗಿಸುವ ಹಾಗೂ ಪ್ರಾಥಮಿಕ ಯಶಸ್ಸಿನ ಮೇಲೆ ದೊಡ್ಡ ಇನಿಂಗ್ಸ್ ಕಟ್ಟುವ ಹೊಣೆ ಈ ಕ್ರಮಾಂಕದ ಬ್ಯಾಟರ್ ಮೇಲಿರುತ್ತದೆ. ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ಹಾಗೂ ಎದುರಾಳಿ ಬೌಲರ್ಗಳ ಬೆವರಿಳಿಸುವ ಸಲುವಾಗಿ ದೀರ್ಘಕಾಲ ಬ್ಯಾಟಿಂಗ್ ಆಡುವ ಜವಾಬ್ದಾರಿಯೂ ಇವರ ಮೇಲಿರುತ್ತದೆ. ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಂತಹ ಕೌಶಲ ಹೊಂದಿರಬೇಕು ಎಂಬುದಷ್ಟೇ ಅಲ್ಲದೆ, ಗಟ್ಟಿ ಮನಸ್ಥಿತಿಯನ್ನೂ ಹೊಂದಿರಬೇಕಾಗುತ್ತದೆ.
ದುರ್ಬಲ ಮೂರನೇ ಕ್ರಮಾಂಕವು ಮಧ್ಯಮ ಕ್ರಮಾಂಕ ಶೀಘ್ರವೇ ಕುಸಿಯುವಂತೆ ಮಾಡುತ್ತದೆ. ಆದರೆ, ಅದು ಸದೃಢವಾಗಿದ್ದರೆ, ಇನಿಂಗ್ಸ್ಗೆ ಸ್ಥಿರತೆ ದೊರೆಯುತ್ತದೆ. ಹಾಗಾಗಿ, ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವುದು ತಾಂತ್ರಿಕ ವಿಚಾರ ಎಂಬುದಷ್ಟೇ ಅಲ್ಲದೆ, ಕೆಳಕ್ರಮಾಂಕದ ಬ್ಯಾಟರ್ಗಳ ಮನಸ್ಥಿತಿ ಮೇಲೂ ನಿರ್ಣಾಯಕ ಪರಿಣಾಮ ಬೀರುತ್ತದೆ.
ಇಂಗ್ಲೆಂಡ್ ಎದುರು 3ನೇ ಕ್ರಮಾಂಕದ ಬ್ಯಾಟರ್ಗಳು ಯಶಸ್ಸು ಗಳಿಸದಿದ್ದರೂ, ಅದೃಷ್ಟವಶಾತ್ ಫ್ಲಾಟ್ ಪಿಚ್ಗಳಲ್ಲಿ ಪಂದ್ಯಗಳು ನಡೆದ ಕಾರಣ ಭಾರತ ತಂಡ ವೈಫಲ್ಯಗಳನ್ನು ಮೀರಿ ನಿಲ್ಲಲು ಸಾಧ್ಯವಾಯಿತು. ಆದರೆ, ಎಲ್ಲ ಸಮಯದಲ್ಲಿಯೂ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.