
ಮುಸ್ತಫಿಝುರ್ ರೆಹಮಾನ್
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಅವಕಾಶ ವಂಚಿತವಾಗಿರುವ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಝುರ್ ರೆಹಮಾನ್, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟೂರ್ನಿಗೆ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಕುರಿತು ತನ್ನ ಅಧಿಕೃತ ಪಿಎಸ್ಎಲ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಮುಂದಿನ ಆವೃತ್ತಿಯಲ್ಲಿ ಮುಸ್ತಫಿಝುರ್ ರೆಹಮಾನ್ ಪಿಎಸ್ಎಲ್ನಲ್ಲಿ ಆಡಲಿದ್ದಾರೆ ಎಂದು ಹೇಳಿದೆ.
ಪಿಎಸ್ಎಲ್ನಲ್ಲಿ ಮುಸ್ತಫಿಝುರ್ ರೆಹಮಾನ್ ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ಹರಾಜಿನ ಬಳಿಕವಷ್ಟೇ ಖಚಿತವಾಗಲಿದೆ.
ಭಾರತ ಹಾಗೂ ಬಾಂಗ್ಲಾದೇಶದ ನಡುವಣ ರಾಜತಾಂತ್ರಿಕ ಬಾಂಧವ್ಯ ಹದಗೆಟ್ಟಿರುವ ನಡುವೆ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ನಿಂದ ತನ್ನ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಡುವಂತೆ ಕೋಲ್ಕತ್ತ ನೈಟ್ ರೈಡರ್ಸ್ (ಕೆಕಆರ್) ಫ್ರಾಂಚೈಸಿಗೆ ಬಿಸಿಸಿಐ ಸೂಚಿಸಿತ್ತು. ಕೆಕೆಆರ್ನಲ್ಲಿ ಮುಸ್ತಾಫಿಜುರ್ ₹9.2 ಕೋಟಿ ಬೆಲೆ ಹೊಂದಿದ್ದರು.
ಇದನ್ನು ಪ್ರತಿಭಟಿಸಿ ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ನಿರಾಕರಿಸಿರುವ ಬಾಂಗ್ಲಾದೇಶ, ಮುಂಬರುವ ಐಪಿಎಲ್ ಪ್ರಸಾರವನ್ನು ನಿಷೇಧಿಸುವುದಾಗಿ ಹೇಳಿತ್ತು. ಭದ್ರತಾ ಕಾರಣದಿಂದ ತನ್ನ ಆಟಗಾರರನ್ನು ಭಾರತಕ್ಕೆ ಕಳುಹಿಸುವುದು ಸೂಕ್ತವಲ್ಲ ಎಂದು ಹೇಳಿತ್ತು.
ಏತನ್ಮಧ್ಯೆ ಭಾರತದಿಂದ ಶ್ರೀಲಂಕಾಕ್ಕೆ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ಚರ್ಚಿಸಲು ಐಸಿಸಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಡುವೆ ಮಂಗಳವಾರ ಯೋಜಿಸಲಾದ ಆನ್ಲೈನ್ ಮಾತುಕತೆಯು ನಡೆದಿಲ್ಲ ಎಂದು ತಿಳಿದು ಬಂದಿದೆ.
ಐಸಿಸಿ ಟ್ವೆಂಟಿ-20 ವಿಶ್ವಕಪ್ ಫ್ರೆಬ್ರುವರಿ 7ರಿಂದ ಆರಂಭವಾಗಿ ಮಾರ್ಚ್ 8ರವರೆಗೆ ನಡೆಯಲಿದೆ. ಬಹುನಿರೀಕ್ಷಿತ ವಿಶ್ವಕಪ್ ಆರಂಭಕ್ಕೆ ಒಂದು ತಿಂಗಳು ಮಾತ್ರ ಬಾಕಿ ಉಳಿದಿರುವಂತೆಯೇ ಈ ಎಲ್ಲ ಬೆಳವಣಿಗೆಗಳು ಕಂಡುಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.