ರೋಹಿತ್ ಶರ್ಮಾ
(ಎಕ್ಸ್ ಸ್ಕ್ರೀನ್ಶಾಟ್)
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುಲಭ ಕ್ಯಾಚ್ ಕೈಚೆಲ್ಲಿದ ಪರಿಣಾಮ, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ಗೆ 'ಹ್ಯಾಟ್ರಿಕ್' ವಿಕೆಟ್ ಗಳಿಸುವ ಅವಕಾಶ ನಷ್ಟವಾಗಿತ್ತು.
ಒಂದು ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆಯುತ್ತಿದ್ದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎಂದೆನಿಸಿಕೊಳ್ಳುತ್ತಿದ್ದರು.
ಪಂದ್ಯದ ಬಳಿಕ ಈ ಕುರಿತು ಕೇಳಿದಾಗ 'ಬಹುಶಃ ನಾನು ಅವರನ್ನು (ಅಕ್ಷರ್) ಡಿನ್ನರ್ಗೆ ಕರೆದುಕೊಂಡು ಹೋಗುತ್ತೇನೆ' ಎಂದು ರೋಹಿತ್ ಪ್ರತಿಕ್ರಿಯಿಸಿದ್ದಾರೆ.
'ಅದು ಸುಲಭ ಕ್ಯಾಚ್ ಆಗಿತ್ತು. ನನ್ನ ಫೀಲ್ಡಿಂಗ್ ಗುಣಮಟ್ಟಕ್ಕೆ ಅನುಸಾರವಾಗಿ ಆ ಕ್ಯಾಚ್ ಪಡೆಯಬಹುದಿತ್ತು. ಆದರೆ ಕ್ರಿಕೆಟ್ನಲ್ಲಿ ಇಂತಹ ಘಟನೆಗಳು ಸಂಭವಿಸುತ್ತವೆ' ಎಂದು ರೋಹಿತ್ ಪ್ರತಿಕ್ರಿಯಿಸಿದ್ದಾರೆ.
ಕ್ಯಾಚ್ ಕೈಚೆಲ್ಲಿದ ಬೆನ್ನಲ್ಲೇ ಕೈಯನ್ನು ನೆಲಕ್ಕೆ ಬಡಿಯುತ್ತಾ ರೋಹಿತ್ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಅಕ್ಷರ್ ಅವರತ್ತ ಕೈಮುಗಿಯುತ್ತಿರುವ ದೃಶ್ಯವು ಕಂಡುಬಂದಿತ್ತು.
ಮತ್ತೊಂದೆಡೆ ಈ ಘಟನೆಯನ್ನು ಹಗುರವಾಗಿ ಪರಿಗಣಿಸಿರುವ ಅಕ್ಷರ್ ಪಟೇಲ್, 'ಕ್ರಿಕೆಟ್ನಲ್ಲಿ ಇವೆಲ್ಲ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಚೆಂಡು ಬ್ಯಾಟರ್ನ ಬ್ಯಾಟ್ಗೆ ಸವರಿದಾಗ ಹ್ಯಾಟ್ರಿಕ್ ಆಗಲಿದೆ ಅಂದುಕೊಂಡಿದ್ದೆ. ನಾನು ಸಂಭ್ರಮಿಸಲು ಆರಂಭಿಸಿದ್ದೆ. ಆದರೆ ರೋಹಿತ್ ಕ್ಯಾಚ್ ಕೈಚೆಲ್ಲಿದ್ದನ್ನು ಗಮನಿಸಿದಾಗ ಹೆಚ್ಚು ಪ್ರತಿಕ್ರಿಯಿಸಲು ಹೋಗದೇ ಬೌಲಿಂಗ್ ಕಡೆ ಮರಳಿದೆ. ಈ ಕುರಿತು ಹೆಚ್ಚು ಚಿಂತಿಸುವುದಿಲ್ಲ' ಎಂದು ಹೇಳಿದ್ದಾರೆ.
ಇನ್ನಿಂಗ್ಸ್ನ ಎಂಟನೇ ಓವರ್ನಲ್ಲಿ ತನ್ಜೀದ್ ಹಸನ್ ಹಾಗೂ ಮುಷ್ಫೀಕುರ್ ರಹೀಮ್ ಅವರನ್ನು ಹೊರದಬ್ಬಿದ ಅಕ್ಷರ್ ಅವರಿಗೆ ಹ್ಯಾಟ್ರಿಕ್ ವಿಕೆಟ್ ಗಳಿಸುವ ಅವಕಾಶವಿತ್ತು. ಆದರೆ ಮೂರನೇ ಎಸೆತದಲ್ಲಿ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್, ಜಾಕರ್ ಅಲಿ ಅವರ ಕ್ಯಾಚ್ ಪಡೆಯುವಲ್ಲಿ ವಿಫಲರಾಗಿದ್ದರು.
ಈ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.