ADVERTISEMENT

ಪಾಕಿಸ್ತಾನಕ್ಕೆ ಹೋಗಲ್ಲ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 11:03 IST
Last Updated 20 ಅಕ್ಟೋಬರ್ 2022, 11:03 IST
   

ಮುಂಬೈ:ಮುಂದಿನ ವರ್ಷದ ತಟಸ್ಥ ತಾಣದಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲ ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದರು.

2023ರಲ್ಲಿ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಗೆ ಪಾಕ್ ಆತಿಥ್ಯ ವಹಿಸಲಿದೆ. ಆದರೆ ರಾಜತಾಂತ್ರಿಕ ಕಾರಣಗಳಿಂದಾಗಿ ಭಾರತ ತಂಡವು 2008ರಿಂದ ಇಲ್ಲಿಯವರೆಗೆ ಪಾಕಿಸ್ತಾನಕ್ಕೆ ಕ್ರಿಕೆಟ್ ಆಡಲು ತೆರಳಿಲ್ಲ. 2012ರಲ್ಲಿ ಕೊನೆಯ ಬಾರಿಗೆ ಭಾರತವು ಪಾಕ್ ತಂಡಕ್ಕೆ ದ್ವಿಪಕ್ಷೀಯ ಸರಣಿಗೆ ಆತಿಥ್ಯ ವಹಿಸಿತ್ತು. ಕೇವಲ ಐಸಿಸಿ ಟೂರ್ನಿಗಳಲ್ಲಿ ಮುಖಾಮುಖಿಯಾಗಿವೆ.

ಮಂಗಳವಾರ ನಡೆದ ಮಂಡಳಿಯ ಎಜಿಎಂ ನಂತರ ಸುದ್ದಿಗಾರರಿಗೆಈ ಕುರಿತು ಪ್ರತಿಕ್ರಿಯಿಸಿದ ಜಯ್ ಶಾ, ‘ತಟಸ್ಥ ತಾಣದಲ್ಲಿ ಆಡಲು ನಿರ್ಧರಿಸಲಾಗಿದೆ’ ಎಂದರು.

ADVERTISEMENT

ಜಯ್ ಶಾ ಅವರು ಏಷ್ಯಾ ಕ್ರಿಕೆಟ್ ಕೌನ್ಸಿಲ್‌ ಮುಖ್ಯಸ್ಥರು ಕೂಡ ಆಗಿದ್ದಾರೆ.

ಈಚೆಗೆ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಬೇಕಿದ್ದಾ ಏಷ್ಯಾ ಟಿ20 ಟೂರ್ನಿಯು ಯುಎಇಯಲ್ಲಿ ನಡೆದಿತ್ತು. ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದರಿಂದ ಟೂರ್ನಿಯು ತಟಸ್ಥ ತಾಣದಲ್ಲಿ ಜರುಗಿತ್ತು.

ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಂದಿನ ವರ್ಷದ ಏಷ್ಯಾಕಪ್ ಟೂರ್ನಿಯನ್ನು ತನ್ನ ತವರಿನಲ್ಲಿಯೇ ಆಯೋಜಿಸಲು ಸಿದ್ಧತೆಗಳನ್ನು ಆರಂಭಿಸಿದೆ.

ಪಾಕ್ ಅಸಮಾಧಾನ

ಕರಾಚಿ ವರದಿ: ಪಾಕ್‌ನಲ್ಲಿ ಭಾರತ ತಂಡವು ಆಡಲು ತೆರಳುವುದಿಲ್ಲವೆಂಬ ಬಿಸಿಸಿಐ ನಿಲುವಿಗೆ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕ‍ಪ್ ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಪಿಸಿಬಿಯು ಈಗ ಕಠಿಣ ನಿರ್ಧಾರ ಕೈಗೊಳ್ಳುವ ಕಾಲ ಬಂದಿದೆ. ಭಾರತ–ಪಾಕಿಸ್ತಾನಗಳು ಮುಖಾಮುಖಿಯಾಗದಿದ್ದರೆ ಐಸಿಸಿಗೆ ಆದಾಯ ನಷ್ಟವಾಗುತ್ತದೆ’ ಎಂದು ಪಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.