ADVERTISEMENT

IPL 2022 ಟ್ರೋಫಿ ಗೆದ್ದು ಶೇನ್ ವಾರ್ನ್‌ಗೆ ಗೌರವ ಸಲ್ಲಿಸುವ ತವಕದಲ್ಲಿ ರಾಜಸ್ಥಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2022, 10:39 IST
Last Updated 29 ಮೇ 2022, 10:39 IST
ಸಂಜು ಸ್ಯಾಮ್ಸನ್ ಹಾಗೂ ಜೋಸ್ ಬಟ್ಲರ್
ಸಂಜು ಸ್ಯಾಮ್ಸನ್ ಹಾಗೂ ಜೋಸ್ ಬಟ್ಲರ್   

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 14 ವರ್ಷಗಳ ಬಳಿಕ ರಾಜಸ್ಥಾನ್ ರಾಯಲ್ಸ್ ಫೈನಲ್‌ಗೆ ಪ್ರವೇಶಿಸಿದೆ.

ಎರಡು ತಿಂಗಳ ಹಿಂದೆ ಸಾವಿಗೀಡಾದ ಶೇನ್ ವಾರ್ನ್ ಅವರಿಗೆ ಪ್ರಶಸ್ತಿ ಗೆದ್ದು ಗೌರವ ಸಲ್ಲಿಸುವ ಇರಾದೆಯನ್ನು ರಾಜಸ್ಥಾನ್ ರಾಯಲ್ಸ್ ತಂಡವು ಹೊಂದಿದೆ.

'ನಿಸ್ಸಂಶವಾಗಿಯೂ ಈ ಟೂರ್ನಿ ಆರಂಭದಿಂದಲೂ ಇದು ವಾರ್ನ್ ಅವರಿಗಾಗಿ ಅರ್ಪಿಸಲಾಗಿತ್ತು. ವಾರ್ನ್‌ಗಾಗಿ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಪ್ರಶಸ್ತಿ ಗೆಲ್ಲಬೇಕು ಎಂದು ಭಾವಿಸುತ್ತೇನೆ' ಎಂದು ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.

'ಐಪಿಎಲ್ ಫೈನಲ್ ವಿಶೇಷವಾಗಿದ್ದು, ಆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಆದರೆ ದಿವಂಗತ ವಾರ್ನ್ ಅವರಿಗಾಗಿ ವಿಶೇಷವಾದದ್ದನ್ನು ಮಾಡಲು ನಾವು ಹತ್ತಿರವಾಗಿದ್ದೇವೆ' ಎಂದು ಹೇಳಿದ್ದಾರೆ.

ಜೋಸ್ ಬಟ್ಲರ್ ಕೂಡ ಇದನ್ನೇ ಉಲ್ಲೇಖಿಸಿದ್ದು, 'ಶೇನ್ ವಾರ್ನ್ ಮೊದಲ ಬಾರಿಗೆ ನಮಗೆ ಟ್ರೋಫಿ ಗೆಲ್ಲಲು ಸಾಧ್ಯ ಎಂಬ ನಂಬಿಕೆಯನ್ನು ಹುಟ್ಟಿಸಿದ್ದರು. ಅವರೀಗ ನಮ್ಮ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಾರೆ. ರಾಯಲ್ಸ್‌ಗೆ ಅಷ್ಟೊಂದು ಪ್ರಭಾವ ಬೀರಿದ ವ್ಯಕ್ತಿಯಾಗಿದ್ದಾರೆ' ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಾಯಕತ್ವದಲ್ಲೇ ರಾಜಸ್ಥಾನ್, 2008ರ ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಜಸ್ಥಾನ್ ತಂಡವು ಮತ್ತೆ ಫೈನಲ್ ಪ್ರವೇಶಿಸಿದೆ.

'ಫಸ್ಟ್ ರಾಯಲ್' ಶೇನ್ ವಾರ್ನ್ ಅವರಿಗೀಗ ಟ್ರೋಫಿ ಗೆದ್ದು ಗೌರವ ಸಲ್ಲಿಸುವ ಇರಾದೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.