
ಚಿತ್ರ ಕೃಪೆ: ಆರ್ಸಿಬಿ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 2026ನೇ ಸಾಲಿನ ಹರಾಜು ಪ್ರಕ್ರಿಯೆಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಮತ್ತು ಯುವ ಆಟಗಾರರಿಗೆ ಮಣೆ ಹಾಕಿತು.
18 ವರ್ಷಗಳ ನಂತರ ಕಳೆದ ಬಾರಿ ಪ್ರಶಸ್ತಿ ಗೆದ್ದಿದ್ದ ತಂಡವು ಹೊಸಮುಖಗಳಿಗೆ ಮಣೆ ಹಾಕಿತು. ಅಯ್ಯರ್ ಅವರನ್ನು ₹ 7 ಕೋಟಿಗೆ ಖರೀದಿಸಿದರು. ಮಂಗೇಶ್ ಯಾದವ್ ಅವರಿಗೆ ₹ 5.2 ಕೋಟಿ ಮತ್ತು ಜೇಕಬ್ ಡಫಿ ಅವರನ್ನು ₹ 2 ಕೋಟಿ ನೀಡಿತು. ಜೋರ್ಡಾನ್ ಕಾಕ್ಸ್ ಅವರಿಗೆ ₹ 75 ಲಕ್ಷ, ಸಾತ್ವಿಕ್ ದೇಸ್ವಾಲ್, ವಿಹಾನ್ ಮಲ್ಹೋತ್ರಾ, ವಿಕ್ಕಿ ಓಸ್ವಾಲ್ ಮತ್ತು ಕನಿಷ್ಕ ಚೌಹಾಣ್ ಅವರಿಗೆ ತಲಾ ₹ 30 ಲಕ್ಷ (ಮೂಲಬೆಲೆ) ನೀಡಿ ಖರೀದಿಸಿತು.
‘ಕಳೆದ ಎರಡು ವರ್ಷವೂ ಸತತವಾಗಿ ನಾವು ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಿಸಲು ಪ್ರಯತ್ನಿಸಿದ್ದೆವು. ಆದರೆ ಆಗಿರಲಿಲ್ಲ. ಅವರು ಒಳ್ಳೆಯ ಆಲ್ರೌಂಡರ್. ನಮಗೆ ಅವರ ಮೇಲೆ ಅಪಾರ ಭರವಸೆ ಇದೆ. ವೆಂಕಿಯನ್ನು ಈ ಹಿಂದೆ ಭೇಟಿಯಾಗಿ ದೀರ್ಘ ಚರ್ಚೆ ನಡೆಸಿದ್ದೆವು. ಅವರಲ್ಲಿ ಉತ್ತಮವಾದ ನಾಯಕತ್ವದ ಗುಣಗಳಿವೆ. ಅವರ ಬರುವಿಕೆಯಿಂದ ಡ್ರೆನಮ್ಮ ಸಿಂಗ್ ರೂಮ್ ಮತ್ತಷ್ಟು ಬಲಿಷ್ಠವಾಗಿದೆ’ ಎಂದು ಆರ್ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹೇಳಿದರು.
ಐಪಿಎಲ್ 2026 ಟೂರ್ನಿಗೆ ಆರ್ಸಿಬಿ ತಂಡ ಹೀಗಿದೆ:
ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಕೃಣಾಲ್ ಪಾಂಡ್ಯ, ಜೋಷ್ ಹ್ಯಾಜಲ್ವುಡ್, ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ದೇವದತ್ತ ಪಡಿಕ್ಕಲ್, ನುವಾನ್ ತುಷಾರ, ಭುವನೇಶ್ವರ್ ಕುಮಾರ್, ಜೇಕಬ್ ಬೆತೆಲ್, ರೊಮೆರಿಯೊ ಶೇಫರ್ಡ್, ಸುಯಶ್ ಶರ್ಮಾ, ಸ್ವಪ್ನಿಲ್ ಸಿಂಗ್, ಯಶ್ ದಯಾಳ್, ಅಭಿನಂದನ್ ಸಿಂಗ್, ರಸಿಕ್ ಧಾರ್, ಜೇಬ್ ಡಫಿ, ಜೋಶ್ ಹ್ಯಾಜಲ್ವುಡ್, ಕೌಶಿಕ್ ಜೌಹಾಣ್, ಮಂಗೇಶ್ ಯಾದವ್, ಸಾತ್ವಿಕ್ ದೆಸ್ವಾಲ್, ವೆಂಕಟೇಶ್ ಅಯ್ಯರ್, ವಿಕ್ಕಿ ಓಸ್ವಾಲ್, ವಿಹಾನ್ ಮಲ್ಹೋತ್ರಾ ಮತ್ತು ಯಶ್ ದಯಾಳ್.
ಚಿತ್ರ ಕೃಪೆ: ಐಪಿಎಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.