ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಮತ್ತು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್
–ಪಿಟಿಐ ಚಿತ್ರ
ಲಾಹೋರ್: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರು ಟೂರ್ನಿಯ ವೇಳಾಪಟ್ಟಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಕಿವೀಸ್ ಬಳಗದ ಎದುರು ಸೋತಿತು. ಅದರ ನಂತರ ಮಿಲ್ಲರ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯುತ್ತಿದೆ. ಆದ್ದರಿಂದ ಭಾರತ ತಂಡವು ಆಡುವ ಸೆಮಿಫೈನಲ್ ದುಬೈನಲ್ಲಿ ನಿಗದಿಯಾಗಿತ್ತು. ಎ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಆಡಿದ್ದವರು. ಅದರಲ್ಲಿ ಗೆದ್ದವರು ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಬೇಕಿತ್ತು. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿದ್ದವು.
ಎ ಗುಂಪಿನ ಅಗ್ರಸ್ಥಾನ ಪಡೆದ ತಂಡವು ಆಸ್ಟ್ರೇಲಿಯಾ ಮತ್ತು ಎರಡನೇ ಸ್ಥಾನ ಪಡೆದವರು ದಕ್ಷಿಣ ಆಫ್ರಿಕಾವನ್ನು ಎದುರಿಸಬೇಕಿತ್ತು. ಅದರಿಂದಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳೆರಡನ್ನೂ ಭಾರತ –ನ್ಯೂಜಿಲೆಂಡ್ ಪಂದ್ಯದ ದಿನವೇ ದುಬೈಗೆ ಕರೆತರಲಾಗಿತ್ತು. ಎ ಗುಂಪಿನಲ್ಲಿ ಭಾರತ ಅಗ್ರಸ್ಥಾನ ಪಡೆದಿದ್ದರಿಂದ ಆಸ್ಟ್ರೇಲಿಯಾ ಅಲ್ಲಿಯೇ ಉಳಿದಿತ್ತು. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಲಾಹೋರ್ನಲ್ಲಿ ಸೆಮಿಫೈನಲ್ ಆಡಲು ತೆರಳಿದವು. ಅದೇ ರಾತ್ರಿ ಮರಳಿ ಲಾಹೋರ್ಗೆ ಪ್ರಯಾಣಿಸಿದವು.
‘1 ಗಂಟೆ 40 ನಿಮಿಷಗಳ ಪ್ರಯಾಣವಷ್ಟೇ. ಆದರೆ ಅದನ್ನು ನಿರ್ವಹಿಸಬೇಕಲ್ಲವೇ? ಪಂದ್ಯ ಮುಗಿದ ಮರುದಿನ ಬೆಳಗಿನ ಜಾವ ಪ್ರಯಾಣಿಸಬೇಕು. ಪಂದ್ಯ ಮುಗಿದ ನಂತರ ಮರಳಿ ಪ್ರಯಾಣ. ಒಟ್ಟಾರೆ ಐದುತಾಸು ಪ್ರಯಾಣದ ನಂತರ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಇರಬೇಕಿತ್ತು. ಆದರೆ ಪರಿಸ್ಥಿತಿ ಹಾಗಿರಲಿಲ್ಲ’ ಎಂದು ಮಿಲ್ಲರ್ ಇಎಸ್ಪಿಎನ್ಕ್ರಿಕ್ಇನ್ಫೋ ವೆಬ್ಸೈಟ್ಗೆ ಹೇಳಿಕೆ ನೀಡಿದ್ದಾರೆ.
ಭಾರತವು ದುಬೈನಲ್ಲಿ ಮಾತ್ರ ಎಲ್ಲ ಪಂದ್ಯಗಳನ್ನು ಆಡುತ್ತಿದೆ. ಇದರಿಂದಾಗಿ ಭಾರತ ತಂಡಕ್ಕೆ ಹೆಚ್ಚು ಅನುಕೂಲವಾಗಿದೆ ಎಂದು ದಕ್ಷಿಣ ಆಫ್ರಿಕಾದ ಆಟಗಾರ ವ್ಯಾನ್ ಡೆರ್ ಡಸೆ ಈಚೆಗೆ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಮಿಲ್ಲರ್, ‘ಭಾರತ ಮತ್ತು ನ್ಯೂಜಿಲೆಂಡ್ ಎರಡೂ ಉತ್ತಮ ತಂಡಗಳು. ಹಲವು ವರ್ಷಗಳಿಂದ ಭಾರತ ತಂಡವು ತನ್ನ ಸಾಮರ್ಥ್ಯ ಏನು ಎಂಬುದನ್ನು ಜಗತ್ತಿಗೆ ತೋರಿಸಿದೆ. ನ್ಯೂಜಿಲೆಂಡ್ ತಂಡದ ಆಟಗಾರರು ಕೂಡ ಉತ್ತಮವಾಗಿದ್ದಾರೆ. ಒಂದು ರೋಚಕ ಪಂದ್ಯ ಜರುಗುವುದು ಖಚಿತ’ ಎಂದರು.
ನ್ಯೂಜಿಲೆಂಡ್ ತಂಡವು ಟ್ರೋಫಿ ಜಯಿಸಬೇಕೆಂಬ ಇಂಗಿತವನ್ನೂ ಅವರು ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.