ಜಮ್ಮು ಮತ್ತು ಕಾಶ್ಮೀರ ತಂಡ
ಚಿತ್ರ: @KashmirAhead
ಕಲ್ಯಾಣಿ: ಇಲ್ಲಿನ ಬಂಗಾಳ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಬಂಗಾಳ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಜಮ್ಮು ಮತ್ತು ಕಾಶ್ಮೀರ ತಂಡವು 67 ವರ್ಷಗಳ ರಣಜಿ ಇತಿಹಾಸದಲ್ಲಿ ಇದೇ ಮೊದಲು ಫೈನಲ್ ತಲುಪಿದೆ ಸಾಧನೆ ಮಾಡಿದೆ.
ಬಂಗಾಳ ತಂಡವು 2ನೇ ಇನಿಂಗ್ಸ್ನಲ್ಲಿ ಜಮ್ಮು ಕಾಶ್ಮೀರದ ಗೆಲುವಿಗೆ 126 ರನ್ಗಳ ಗುರಿ ನೀಡಿತ್ತು. ಈ ಸುಲಭದ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡವು 34.4 ಓವರ್ಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿದೆ. ಸುಲಭ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ನಂತರ ಬಂದ ವಂಶಾಜ್ ಶರ್ಮಾ (ಅಜೇಯ 43) ಹಾಗೂ ಅಅಬ್ದುಲ್ ಸಮದ್ (ಅಜೇಯ 30) ರನ್ಗಳ ನೆರವಿನಿಂದ ಗುರಿ ತಲುಪಿತು.
ಆ ಪಂದ್ಯದಲ್ಲಿ ಬಂಗಾಳ ಬ್ಯಾಟರ್ಗಳ ಮೇಲೆ ಸವಾರಿ ಮಾಡಿದ ವೇಗಿ ನಕಿಬ್ ನಬಿ 9 ವಿಕೆಟ್ಗಳನ್ನು ಪಡೆದುಕೊಂಡರು. ಆ ಮೂಲಕ ಆತಿಥೇಯ ಬ್ಯಾಟರ್ಗಳನ್ನು ಕಾಡಿದ ಅವರು, ಬ್ಯಾಟಿಂಗ್ನಲ್ಲೂ ಸಂಕಷ್ಟದಲ್ಲಿ ಸಂದರ್ಭದಲ್ಲಿ 42 ರನ್ ಗಳಿಸಿ ತಂಡಕ್ಕೆ ನೆರವಾದರು. ಅವರ ಈ ಆಲ್ರೌಂಡರ್ ಆಟದಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಜಮ್ಮು ಮತ್ತು ಕಾಶ್ಮೀರ ತಂಡವು 1959-60ರ ಋತುವಿನಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಸ್ಪರ್ಧಿಸಿತ್ತು. ಆದರೆ, ಇದುವರೆಗೂ ತಂಡವು ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿಲ್ಲ. 2013-14ರ ಋತುವಿನಲ್ಲಿ, ಜಮ್ಮು ಮತ್ತು ಕಾಶ್ಮೀರ ತಂಡವು ಒಂದು ಬಾರಿ ನಾಕೌಟ್ ಪ್ರವೇಶಿಸಿತ್ತು. ಅದು ಇದುವರೆಗಿನ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.
ಈಗಾಗಲೇ ಫೈನಲ್ ತಲುಪಿರುವ ಜಮ್ಮು ಮತ್ತು ಕಾಶ್ಮೀರ ತಂಡವು, ಲಖನೌನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ.
ಶಮಿ ಮಿಂಚಿನ ಬೌಲಿಂಗ್
ಬಂಗಾಳ ತಂಡ ಸೆಮಿಫೈನಲ್ನಲ್ಲಿ ಸೋತಿದೆ. ಆದರೆ, ಭಾರತ ತಂಡದಿಂದ ಹೊರಗುಳಿದಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ, ಶಮಿ ಅವರು ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ಮತ್ತು ಎರಡನೇ ಇನಿಂಗ್ಸ್ನಲ್ಲಿ 1 ವಿಕೆಟ್ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.