ADVERTISEMENT

ಧೋನಿ, ಶಾಸ್ತ್ರಿ, ಕೊಹ್ಲಿ, ರೋಹಿತ್ ಅವರಿಂದ ಅತ್ಯಂತ ಬಲಿಷ್ಠ ನಾಯಕತ್ವ: ಚೌಧರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2021, 6:24 IST
Last Updated 9 ಸೆಪ್ಟೆಂಬರ್ 2021, 6:24 IST
ಭಾರತ ಕ್ರಿಕೆಟ್‌ ತಂಡ (ಸಂಗ್ರಹ ಚಿತ್ರ)
ಭಾರತ ಕ್ರಿಕೆಟ್‌ ತಂಡ (ಸಂಗ್ರಹ ಚಿತ್ರ)   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಮಾರ್ಗದರ್ಶಿಯನ್ನಾಗಿ ನೇಮಿಸುವ ಮೂಲಕಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಚ್ಚರಿಯ ನಿರ್ಧಾರ ಪ್ರಕಟಿಸಿದೆ. ಇದರಿಂದ ಭಾರತವು ಪ್ರಶಸ್ತಿ ಜಯಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಬಿಸಿಸಿಐನ ಮಾಜಿ ಖಜಾಂಚಿ ಅನಿರುದ್ಧ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

2009‌ರ ಟಿ20 ವಿಶ್ವಕಪ್‌ ಮತ್ತು ಭಾರತ ತಂಡವು 2011ರಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದಾಗ ನಾಯಕರಾಗಿದ್ದ ಧೋನಿಯೊಂದಿಗೆ ಹತ್ತಿರದಿಂದ ಕೆಲಸ ಮಾಡಿರುವ ಚೌಧರಿ, ಧೋನಿಯವರನ್ನು ತಂಡದ ಮಾರ್ಗದರ್ಶಿಯನ್ನಾಗಿ ಆಯ್ಕೆ ಮಾಡಿರುವುದು ಅತ್ಯುತ್ತಮವಾದ ನಡೆಯಾಗಿದೆ ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಚೌಧರಿ, ʼಎಂ.ಎಸ್‌. ಧೋನಿ ಅವರನ್ನು ತಂಡದ ಮಾರ್ಗದರ್ಶಕರನ್ನಾಗಿ ನೇಮಿಸಿರುವ ನಿರ್ಧಾರ ಅತ್ಯುತ್ತಮವಾದುದು. ಧೋನಿ, ರವಿಶಾಸ್ತ್ರಿ, ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರು ಅತ್ಯಂತ ಬಲಿಷ್ಠ ನಾಯಕತ್ವದ ಗುಂಪನ್ನು ರೂಪಿಸಿದ್ದಾರೆ. ಈ ನಿರ್ಧಾರ ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್‌ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಿದೆ. ಬಿಸಿಸಿಐ ಕಾರ್ಯದರ್ಶಿಯ ಈ ನಿರ್ಧಾರವನ್ನು ಶ್ಲಾಘಿಸಲೇಬೇಕುʼ ಎಂದು ಹೇಳಿದ್ದಾರೆ.

ADVERTISEMENT

ಮುಂಬರುವ ಚುಟುಕು ವಿಶ್ವಕಪ್ ಟೂರ್ನಿವೇಳೆ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸುವಂತೆ ಧೋನಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ತಂಡದ ನಾಯಕ ವಿರಾಟ್‌ ಕೊಹ್ಲಿ, ಉಪನಾಯಕ ರೋಹಿತ್‌ ಶರ್ಮಾ, ಕೋಚ್ ರವಿಶಾಸ್ತ್ರಿಮತ್ತು ಸದ್ಯದ ವ್ಯವಸ್ಥಾಪಕ ಮಂಡಳಿಯೂ ಈ ನಿರ್ಧಾರಕ್ಕೆ ಸಹಮತ ಸೂಚಿಸಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಬುಧವಾರ ತಿಳಿಸಿದ್ದರು.

ಅಕ್ಟೋಬರ್‌17 ರಿಂದ ನವೆಂಬರ್14 ರವರೆಗೆ ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿರುವವಿಶ್ವಕಪ್‌ ಟೂರ್ನಿಗೆ 15 ಆಟಗಾರರಿರುವ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಅಚ್ಚರಿ ಎಂಬಂತೆ ಆರ್‌.ಅಶ್ವಿನ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅವರು2017ರ ಜುಲೈನಲ್ಲಿ ಕೊನೆಯ ಸಲ ಭಾರತ ಪರ ಅಂತರರಾಷ್ಟ್ರೀಯಟಿ20 ಪಂದ್ಯದಲ್ಲಿ ಆಡಿದ್ದರು.

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ
01. ವಿರಾಟ್‌ ಕೊಹ್ಲಿ (ನಾಯಕ)
02. ರೋಹಿತ್‌ ಶರ್ಮಾ (ಉಪ ನಾಯಕ)
03. ಕೆ.ಎಲ್.ರಾಹುಲ್‌
04. ಸೂರ್ಯಕುಮಾರ್‌ ಯಾದವ್‌
05. ರಿಷಬ್‌ ಪಂತ್‌ (ವಿಕೆಟ್‌ ಕೀಪರ್‌)
06. ಈಶಾನ್‌ ಕಿಶನ್‌ (ವಿಕೆಟ್‌ ಕೀಪರ್‌)
07. ಹಾರ್ದಿಕ್‌ ಪಾಂಡೆ
08. ರವೀಂದ್ರ ಜಡೇಜಾ
09. ರಾಹುಲ್‌ ಚಾಹರ್‌
10. ರವಿಚಂದ್ರನ್‌ ಅಶ್ವಿನ್‌
11. ಅಕ್ಷರ್‌ ಪಟೇಲ್‌
12. ವರುಣ್‌ ಚಕ್ರವರ್ತಿ
13. ಜಸ್‌ಪ್ರಿತ್‌ ಬುಮ್ರಾ
14. ಭುವನೇಶ್ವರ್‌ ಕುಮಾರ್‌
15. ಮೊಹಮ್ಮದ್‌ ಶಮಿ

ಕಾಯ್ದಿರಿಸಿದಆಟಗಾರರು
01. ಶ್ರೇಯಸ್‌ ಐಯ್ಯರ್‌
02. ಶಾರ್ದೂಲ್ ಠಾಕೂರ್
03. ದೀಪಕ್‌ ಚಾಹರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.