ADVERTISEMENT

ಲಾಕ್‌ಡೌನ್‌ | ಆನ್‌ಲೈನ್‌ನಲ್ಲಿ ಕಿರಿಯ ಕೋಚ್‌ಗಳಿಗೆ ರವಿಶಾಸ್ತ್ರಿ ಪಾಠ

ಪಿಟಿಐ
Published 30 ಏಪ್ರಿಲ್ 2020, 19:45 IST
Last Updated 30 ಏಪ್ರಿಲ್ 2020, 19:45 IST
ರವಿಶಾಸ್ತ್ರಿ
ರವಿಶಾಸ್ತ್ರಿ   

ನವದೆಹಲಿ: ಭಾರತ ತಂಡದ ಕೋಚ್ ರವಿಶಾಸ್ತ್ರಿ ಮತ್ತು ಅವರ ಸಿಬ್ಬಂದಿಯು ಹೋದ ವಾರ ಯುವ ಕ್ರಿಕೆಟ್ ತಂಡಗಳ ಕೋಚ್‌ಗಳ ಜೊತೆ ಆನ್‌ಲೈನ್ ಸಂವಾದ ನಡೆಸಿದ್ದು ಬಹಳ ಉಪಯುಕ್ತವಾಗಿತ್ತು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮೂಲಗಳು ತಿಳಿಸಿವೆ.

ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು ರೂಪಿಸಿದ್ದ ಯೋಜನೆಯಂತೆ ಹೋದ ವಾರ ಭಾರತ ಎ ಮತ್ತು ಜೂನಿಯರ್ ಕ್ರಿಕೆಟ್‌ ತಂಡಗಳೊಂದಿಗೆ ಆನ್‌ಲೈನ್ ಸಂವಾದ ಏರ್ಪಡಿಸಲಾಗಿತ್ತು. ಅದರಲ್ಲಿ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಕೂಡ ಭಾಗವಹಿಸಿದ್ದರು.

‘ಅದು ಆನ್‌ಲೈನ್‌ ಕೋಚಿಂಗ್ ತರಗತಿಯಾಗಿರಲಿಲ್ಲ.ಎಲ್ಲರೂ ತಮ್ಮಲ್ಲಿರುವ ಹೊಸ ಚಿಂತನೆಗಳನ್ನು ಪರಸ್ಪರ ಹಂಚಿಕೊಳ್ಳುವ ಅವಕಾಶವಾಗಿತ್ತು.ರವಿಶಾಸ್ತ್ರಿ ಮತ್ತಿತರ ಹಿರಿಯ ಕೋಚ್‌ಗಳ ಅಮೂಲ್ಯ ಅನುಭವದ ಮಾತುಗಳನ್ನು ಕೇಳಲು ಸಿಕ್ಕ ಸದವಕಾಶವಾಗಿತ್ತು. ಅವರೆಲ್ಲ ಇದ್ದ ಕಾರಣಕ್ಕೆ ಈ ಸಂವಾದದ ಗಾಂಭೀರ್ಯವೂ ಹೆಚ್ಚಿತ್ತು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎನ್‌ಸಿಎ ಕೋಚ್‌ಗಳಾದ ಪರಸ್ ಮಾಂಬ್ರೆ, ನರೇಂದ್ರ ಹಿರ್ವಾನಿ, ಅಭಯ್ ಶರ್ಮಾ ಮತ್ತು ಸಿತಾಂಶು ಕೋಟಕ್ ಕೂಡ ಈ ಸಂದರ್ಭದಲ್ಲಿ ತಮ್ಮ ವಿಚಾರ ವಿನಿಮಯ ಮಾಡಿಕೊಂಡರು.

‘ಲಾಕ್‌ಡೌನ್‌ ಇದ್ದ ಕಾರಣ ಈ ತರಗತಿಆಯೋಜಿಸುವುದು ಸುಲಭವಾಯಿತು. ಎಲ್ಲರೂ ಲಭ್ಯರಾದರು. ಕೊರೊನಾ ನಂತರದ ದಿನಗಳಲ್ಲಿಯೂ ಇದನ್ನು ಮುಂದುವರಿಸಬೇಕು ಎಂಬ ಯೋಚನೆ ಇದೆ. ಹಿರಿಯರು ಸಲಹೆಗಳನ್ನೂ ಕೊಟ್ಟಿದ್ದಾರೆ. ಇದರಿಂದ ಹಿರಿಯ ಮತ್ತು ಕಿರಿಯ ಕೋಚ್‌ಗಳ ನಡುವೆ ವಿಚಾರ ವಿನಿಮಯಕ್ಕೆ ಅನುಕೂಲವಾಗುತ್ತದೆ. ಆದರೆ, ಒಮ್ಮೆ ಎಲ್ಲ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಾಗ ತಂಡಗಳು ಪ್ರಯಾಣ ಮಾಡುತ್ತವೆ. ಆದ್ದರಿಂದ ಆ ಸಂದರ್ಭದಲ್ಲಿ ಎಲ್ಲರನ್ನೂ ಕೂಡಿಸಿ ಈ ರೀತಿ ಮಾಡುವುದು ಸವಾಲಿನದ್ದಾಗಿರಬಹುದು. ಆದರೆ, ಅಸಾಧ್ಯವಲ್ಲ. ಅದಕ್ಕಾಗಿ ವಿಭಿನ್ನ ಯೋಜನೆ ರೂಪಿಸಬೇಕು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.