ಶುಭಮನ್ ಗಿಲ್
(ಪಿಟಿಐ ಚಿತ್ರ)
ದುಬೈ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕ ಶುಭಮನ್ ಗಿಲ್ ಅವರಿಗೆ ಇಂಗ್ಲೆಂಡ್ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಕಠಿಣ ಸವಾಲು ಎದುರಾಗಲಿದೆ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಶುಭಮನ್ ಗಿಲ್ ಅವರು ತಾಳ್ಮೆ ಹಾಗೂ ಸಂಯಮವನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
'ದಿ ಐಸಿಸಿ ರಿವ್ಯೂ' ಕಾರ್ಯಕ್ರಮದಲ್ಲಿ 25 ವರ್ಷದ ಗಿಲ್ ಅವರಿಗೆ ಶಾಸ್ತ್ರಿ ಸಲಹೆಗಳನ್ನು ನೀಡಿದ್ದಾರೆ.
'ನಿಮ್ಮ ಸಮಯವನ್ನು ತೆಗೆದುಕೊಳ್ಳಿ. ಏಕೆಂದರೆ ಅಷ್ಟು ಸುಲಭದ ಪರಿಸ್ಥಿತಿ ಇರುವುದಿಲ್ಲ. ಅತ್ಯಂತ ಕಠಿಣ ಕೆಲಸವನ್ನು ನಿಭಾಯಿಸಲು ಗಿಲ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಅದು ಕೂಡ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ನಾಯಕರಾಗಿದ್ದಾರೆ' ಎಂದು ರವಿ ಶಾಸ್ತ್ರಿ ಉಲ್ಲೇಖಿಸಿದ್ದಾರೆ.
2020ರ ಡಿಸೆಂಬರ್ನಲ್ಲಿ ಪದಾರ್ಪಣೆ ಮಾಡಿರುವ ಗಿಲ್ ಈವರೆಗೆ 32 ಪಂದ್ಯಗಳಲ್ಲಿ 35.05ರ ಸರಾಸರಿಯಲ್ಲಿ 1,893 ರನ್ ಗಳಿಸಿದ್ದಾರೆ.
2007ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಭಾರತ ಕೊನೆಯದಾಗಿ ಟೆಸ್ಟ್ ಸರಣಿ ಗೆದ್ದಿತ್ತು. ಅಲ್ಲದೆ ಗಿಲ್ ನಾಯಕತ್ವಕ್ಕೆ ಕಠಿಣ ಸವಾಲು ಎದುರಾಗಲಿದೆ.
ಮತ್ತೊಂದೆಡೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಆರ್. ಅಶ್ವಿನ್ ನಿವೃತ್ತಿಯ ಬಳಿಕ ಟೀಮ್ ಇಂಡಿಯಾ ಭವಿಷ್ಯದ ತಂಡವನ್ನು ರೂಪಿಸುವ ಇರಾದೆಯಲ್ಲಿದೆ.
'ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಿರುವ ಗಿಲ್ ಅವರಿಗೆ ಇಂಗ್ಲೆಂಡ್ನಲ್ಲಿ ಕಲಿಕಾ ಕಾಲಘಟ್ಟವಾಗಿರಲಿದೆ. ಅಲ್ಲಿ ಅವರು ಪಾಠವನ್ನು ಕಲಿಯಲಿದ್ದಾರೆ. ಗುಜರಾತ್ ತಂಡವನ್ನು ಮುನ್ನಡೆಸಿದಾಗ ಶಾಂತಚಿತ್ತರಾಗಿದ್ದರು. ಅದೇ ಸಂಯಮವನ್ನು ಕಾಯ್ದುಕೊಳ್ಳಬೇಕು' ಎಂದು ಶಾಸ್ತ್ರಿ ಸಲಹೆ ನೀಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಶುಕ್ರವಾರದಂದು ಲೀಡ್ಸ್ನಲ್ಲಿ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.