
ಶುಭಮನ್ ಗಿಲ್
(ಪಿಟಿಐ ಚಿತ್ರ)
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಭಾರತ ತಂಡ 0–2 ಅಂತರದಲ್ಲಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋರಾಡುವುದಾಗಿ ದೃಢಸಂಕಲ್ಪ ಮಾಡಿದ್ದಾರೆ. ಅವರು ಕುತ್ತಿಗೆ ನೋವಿನಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆತಿಥೇಯರನ್ನು 408 ರನ್ಗಳಿಂದ ಸೋಲಿಸಿ, ಸರಣಿಯನ್ನು 2–0 ಅಂತರದಲ್ಲಿ ಗೆದ್ದು ಸ್ವೀಪ್ ಸಾಧನೆ ಮಾಡಿತು. ಮಾತ್ರವಲ್ಲ, ದಕ್ಷಿಣ ಆಫ್ರಿಕಾ ತಂಡ ಭಾರತದ ನೆಲದಲ್ಲಿ 25 ವರ್ಷಗಳ ಬಳಿಕ ಸರಣಿ ಗೆದ್ದ ಸಾಧನೆ ಮಾಡಿತು.
ಸರಣಿ ಸೋಲಿನ ಕುರಿತು ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ನಾಯಕ ಶುಭಮನ್ ಗಿಲ್, ‘ಶಾಂತ ಸಮುದ್ರಗಳು ನಿಮಗೆ ಹೇಗೆ ಈಜಬೇಕು ಎಂದು ಕಲಿಸುವುದಿಲ್ಲ. ಆದರೆ, ಬಿರುಗಾಳಿ ಬಂದಾಗ ನೀವು ದಡ ಸೇರಲು ಪ್ರಯತ್ನಿಸುತ್ತೀರಿ. ನಾವು ಪರಸ್ಪರ ನಂಬಿಕೆಯಿಂದ ಮುಂದುವರೆಯುತ್ತೇವೆ, ಜೊತೆಯಾಗಿ ಹೋರಾಡುತ್ತೇವೆ, ಜೊತೆಯಾಗಿ ಮುಂದುವರಿಯುತ್ತೇವೆ ಹಾಗೂ ಬಲವಾಗಿ ಉನ್ನತಿಗೇರುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
ಕೊಲ್ಕತ್ತ ಟೆಸ್ಟ್ನ ಮೊದಲ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಶುಭಮನ್ ಗಿಲ್ ಅವರು ಕುತ್ತಿಗೆ ಸೆಳೆತದ ನೋವಿಗೆ ಒಳಗಾಗಿ ತಂಡದಿಂದ ಹೊರಗುಳಿದಿದ್ದರು. ಭಾರತ ಮೊದಲ ಪಂದ್ಯವನ್ನು 30 ರನ್ಗಳಿಂದ ಸೋತರೆ, ಎರಡನೇ ಪಂದ್ಯವನ್ನು 408 ರನ್ಗಳಿಂದ ಸೋತು ನಿರಾಸೆ ಅನುಭವಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.