
ಚೇರ್ಗಳನ್ನು ಕ್ರೀಡಾಂಗಣದತ್ತ ಎಸೆದಿರುವ ಅಭಿಮಾನಿಗಳು
ಕೃಪೆ: ಪಿಟಿಐ
ಕೋಲ್ಕತ್ತ: ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರು ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದ ಸಂಘಟಕ ಸತದ್ರು ದತ್ತಾ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕ್ರೀಡಾಂಗಣದಲ್ಲಿ ಭಾರಿ ಅವ್ಯವಸ್ಥೆ ಉಂಟಾದ ಕಾರಣ ಮೆಸ್ಸಿ ಅವರು ಸ್ವಲ್ಪ ಹೊತ್ತಿನಲ್ಲೇ ಕ್ರೀಡಾಂಗಣದಿಂದ ಹೊರನಡೆಯಬೇಕಾಯಿತು. ಹೀಗಾಗಿ, ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಹೈದರಾಬಾದ್ನತ್ತ ಪ್ರಯಾಣ ಆರಂಭಿಸಿದ ಮೆಸ್ಸಿ ಮತ್ತು ತಂಡವನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಹೋಗಿದ್ದ ದತ್ತಾ ಅವರನ್ನು ಅಲ್ಲಿಯೇ ಬಂಧಿಸಲಾಗಿದೆ.
'ಕ್ರೀಡಾಂಗಣದಲ್ಲಿ ಉಂಟಾದ ಗದ್ದಲಕ್ಕೆ ಸಂಬಂಧಿಸಿದಂತೆ, ಸಂಘಟಕರ ಕಡೆಯಿಂದ ಏನಾದರೂ ತಪ್ಪಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ದತ್ತಾ ಅವರನ್ನು ಬಂಧಿಸಿದ್ದೇವೆ. ಪೊಲೀಸರು ಕ್ರೀಡಾಂಗಣದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ' ಎಂದು ಪಶ್ಚಿಮ ಬಂಗಾಳ ಪೊಲೀಸ್ ಮಹಾ ನಿರ್ದೇಶಕ ರಾಜೀವ್ ಕುಮಾರ್ ಹೇಳಿದ್ದಾರೆ.
2011ರ ನಂತರ ಇದೇ ಮೊದಲ ಬಾರಿಗೆ ಕೋಲ್ಕತ್ತಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸೌಹಾರ್ದ ಪಂದ್ಯದಲ್ಲಿ ಆಡಬೇಕಿತ್ತು. ಆದರೆ, ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಗದ್ದಲ ಉಂಟಾಗಿ, ಅವ್ಯವಸ್ಥೆ ಸೃಷ್ಟಿಯಾಯಿತು. ಹೀಗಾಗಿ, ಮೆಸ್ಸಿ ಕೂಡಲೇ ತೆರಳಬೇಕಾಯಿತು.
ಭಾರಿ ಮೊತ್ತ ಪಾವತಿಸಿ ಕ್ರೀಡಾಂಗಣಕ್ಕೆ ಬಂದರೂ, ನೆಚ್ಚಿನ ತಾರೆಯನ್ನು ಕಣ್ತುಂಬಿಕೊಳ್ಳಲು ಆಗದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಬಾಟಲಿ, ಚೇರ್ಗಳನ್ನು ಕ್ರೀಡಾಂಗಣದತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ರಾಜಕೀಯ ನಾಯಕರು, ಚಿತ್ರ ನಟರೇ ಮೆಸ್ಸಿ ಅವರನ್ನು ಸುತ್ತುವರಿದಿದ್ದರು. ಪರಿಸ್ಥಿತಿ ಹೀಗಿರುವಾಗ, ದುಬಾರಿ ಮೊತ್ತ ಪಾವತಿಸಿ ನಾವು ಬರುವ ಅಗತ್ಯವಾದರೂ ಏನಿತ್ತು?' ಎಂದು ಪ್ರಶ್ನಿಸಿದ್ದಾರೆ.
'ಮೆಸ್ಸಿ ಅವರು ಶೀಘ್ರವೇ ನಿರ್ಗಮಿಸಿದ್ದರಿಂದ ನಿರಾಶೆಗೊಂಡಿರುವ ಅಭಿಮಾನಿಗಳಿಗೆ ಟಿಕೆಟ್ ಮೊತ್ತವನ್ನು ಮರುಪಾವತಿಸುವುದಾಗಿ ಆಯೋಜಕರು ಲಿಖಿತವಾಗಿ ಬರೆದುಕೊಟ್ಟಿದ್ದಾರೆ' ಎಂದು ಕುಮಾರ್ ತಿಳಿಸಿದ್ದಾರೆ.
'ಗೋಟ್' ಟೂರ್
ಮೆಸ್ಸಿ ಅವರ 'GOAT Tour of India' ಪ್ರವಾಸ ಇಂದಿನಿಂದ ಆರಂಭವಾಗಿದೆ.
ಮೂರು ದಿನ ಭಾರತದಲ್ಲಿ ಉಳಿಯುವ ಅವರು, ಇಂದು ಸಂಜೆ ಹೈದರಾಬಾದ್ಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 14, 15ರಂದು ಕ್ರಮವಾಗಿ ಮುಂಬೈ ಹಾಗೂ ನವದೆಹಲಿಗೆ ತೆರಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.