
ಅಫ್ಘಾನಿಸ್ತಾನ–ಶ್ರೀಲಂಕಾ ಕ್ರಿಕೆಟಿಗರು
ಅಬುಧಾಬಿ: ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಗುರುವಾರ (ಸೆ. 18) ನಡೆಯಲಿರುವ ಏಷ್ಯಾ ಕಪ್ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಅದರಲ್ಲೂ ಸೂಪರ್ 4 ಹಂತ ಪ್ರವೇಶಿಸಲು ನಾಳಿನ ಪಂದ್ಯವನ್ನು ಅಫ್ಘಾನಿಸ್ತಾನ ತಂಡ ಗೆಲ್ಲಲೇಬೇಕಾದ ಒತ್ತಡಲ್ಲಿರುವುದರಿಂದ ಈ ಪಂದ್ಯ ಮಹತ್ವದ್ದೆನಿಸಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯ ಸೋತ ಬಳಿಕ ಸೂಪರ್–4 ಹಂತ ತಲುಪಲು ಅಫ್ಘಾನಿಸ್ತಾನ ತಂಡ ಸತತ ಗೆಲುವಿನೊಂದಿಗೆ ಗ್ರೂಪ್ ಬಿ ನಲ್ಲಿ ಅಗ್ರಸ್ಥಾನದಲ್ಲಿರುವ ಶ್ರೀಲಂಕಾ ತಂಡವನ್ನು ಸೋಲಿಸಬೇಕಿದೆ. ಅಫ್ಘಾನಿಸ್ತಾನ ಈ ಪಂದ್ಯ ಗೆದ್ದರೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಜೊತೆಗೆ ತಲಾ 4 ಅಂಕಗಳನ್ನು ಪಡೆಯುತ್ತದೆ. ಮಾತ್ರವಲ್ಲ, ರನ್ ರೇಟ್ ಆಧಾರದಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಅಗ್ರಸ್ಥಾನ ತಲುಪುವ ಅವಕಾಶ ಹೊಂದಿದೆ.
ಸದ್ಯ, ಬಾಂಗ್ಲಾದೇಶ (-0.270) ರನ್ ರೇಟ್ ಹೊಂದಿದ್ದರೆ, ಅಫ್ಘಾನಿಸ್ತಾನ ತಂಡ (2.150) ರನ್ರೇಟ್ ಹೊಂದಿದೆ. ನಾಳಿನ ಪಂದ್ಯ ಗೆದ್ದರೆ ಶ್ರೀಲಂಕಾ ತಂಡವನ್ನು ಹಿಂದಿಕ್ಕಿ ರನ್ರೇಟ್ ಆಧಾರದಲ್ಲಿ ಅಫ್ಘಾನಿಸ್ತಾನ ತಂಡ ಅಗ್ರಸ್ಥಾನ ತಲುಪಲಿದೆ.
2023 ರಲ್ಲಿ ನಡೆದ ಟಿ–20 ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ ನಂತರ ಅಫ್ಘಾನಿಸ್ತಾನ ತಂಡದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಏಷ್ಯಾ ಕಪ್ನಲ್ಲಿ ಇದುವರೆಗೂ ಅಫ್ಘಾನಿಸ್ತಾನ ಬಲಿಷ್ಠ ತಂಡಗಳ ವಿರುದ್ಧ ಹೇಳಿಕೊಳ್ಳುವಂತ ಪ್ರದರ್ಶನ ತೋರಿಲ್ಲ. ವಿಶೇಷವಾಗಿ ಬ್ಯಾಟಿಂಗ್ ವಿಭಾಗದಲ್ಲಿ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 155 ರನ್ಗಳ ಸಾಧಾರಣ ಗುರಿ ತಲುಪದೆ ಎಡವಿತ್ತು. ಹಾಗಾಗಿ ನಾಳಿನ ಪಂದ್ಯದಲ್ಲಿ ಬ್ಯಾಟರ್ಗಳ ಮೇಲೆ ಹೆಚ್ಚಿನ ಒತ್ತಡವಿದೆ.
ಬಾಂಗ್ಲಾದೇಶ ವಿರುದ್ಧ ಪಂದ್ಯ ಸೋತ ಬಳಿಕ ಮಾತನಾಡಿದ ತಂಡದ ನಾಯಕ ರಶೀದ್ ಖಾನ್, ‘ನಾವು ಆಕ್ರಮಣಕಾರಿ ಕ್ರಿಕೆಟ್ಗೆ ಹೆಸರುವಾಸಿಯಾಗಿರುವಂತಹ ಕ್ರಿಕೆಟ್ ಆಡಿಲ್ಲ. ನಾವು ವಿರೋದಿ ತಂಡಕ್ಕೆ ನಮ್ಮ ಮೇಲೆ ಒತ್ತಡ ಹೇರಲು ಅವಕಾಶ ಮಾಡಿಕೊಟ್ಟಿದ್ದೇವೆ. ನಾವು ಬೌಲಿಂಗ್ನಲ್ಲಿ 160 ಕ್ಕಿಂತ ಕಡಿಮೆ ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದೆವು. ಆದರೆ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ಬರಲಿಲ್ಲ ಎಂದರು.
ಇತ್ತ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಶ್ರೀಲಂಕಾ ಆತ್ಮವಿಶ್ವಾಸದಲ್ಲಿ ಬೀಗುತ್ತಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನವನ್ನೇ ಅಫ್ಘಾನಿಸ್ತಾನದ ವಿರುದ್ಧ ನೀಡಿ ಪಂದ್ಯ ಗೆಲ್ಲಲು ಶ್ರೀಲಂಕಾ ಎದುರು ನೋಡುತ್ತಿದೆ. ಸೋಲಿನಿಂದ ಕೆರಳಿರುವ ಅಫ್ಘಾನಿಸ್ತಾನದ ವಿರುದ್ಧ ಹೆಚ್ಚು ವೃತ್ತಿಪರರಾಗಿ ಆಡಬೇಕು ಎಂದು ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ತಮ್ಮ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಶ್ರೀಲಂಕಾ: ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಕುಸಲ್ ಪೆರೆರಾ, ನುವಾನಿಡು ಫೆರ್ನಾಂಡೊ, ಕಮಿಂದು ಮೆಂಡಿಸ್, ಕಮಿಲ್ ಮಿಶ್ರಾ, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಚಾಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ಬಿನುರ ಫೆರ್ನಾಂಡೊ, ನುವಾನ್ ತುಷಾರ, ಮತೀಶ ಪತಿರಾನ ಇದ್ದಾರೆ.
ಅಫ್ಘಾನಿಸ್ತಾನ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಒಮರ್ಜಾಯ್, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಮೊಹಮ್ಮದ್ ಇಶಾಕ್, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಎಎಂ ಘಜಾನ್ಫರ್, ಫರೀದ್ ಅಹಮದ್ ಮಲಿಕ್, ಫಜಲಕ್ ಫರೋಕಿ, ನವೀನ್ ಉಲ್ ಹಕ್ ಇದ್ದಾರೆ.
ಪಂದ್ಯ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.