ಬೆಂಗಳೂರು: ಕಲಬೆರಕೆಯನ್ನು ತಪ್ಪಿಸಲು ಶುದ್ಧ ಎಣ್ಣೆಯನ್ನು ಕಣ್ಣಮುಂದೆಯೇ ಮರದ ಗಾಣದ ಮಾದರಿಯಲ್ಲಿ ಯಂತ್ರದಿಂದ ತೆಗೆಯುವ ವಿಧಾನ ರಾಜಧಾನಿಯಲ್ಲಿ ಪ್ರಾರಂಭವಾಗಿದೆ.
ಮರದ ಗಾಣಗಳಿಂದ ತೆಗೆಯುವ ಎಣ್ಣೆಗಳು ರಾಸಾಯನಿಕಗಳಿಂದ ಹೊರತಾಗಿರುವುದು ಮಾತ್ರವಲ್ಲದೇ ನೈಸರ್ಗಿಕತೆಯ ಪ್ರತೀಕವೂ ಆಗಿದೆ. ಸುವಾಸನೆ ಹೊಂದಿರುವ ಈ ಎಣ್ಣೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿ ಇರುತ್ತವೆ. ಹೀಗಾಗಿ ಬೆಂಗಳೂರಿನಲ್ಲಿ ಗಾಣದ ಎಣ್ಣೆಗೆ ಬೇಡಿಕೆ ಹೆಚ್ಚಿದ್ದು, ಗಾಣದ ಯಂತ್ರದ ಮೂಲಕ ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ, ಕುಸುಬೆ ಎಣ್ಣೆ, ಬೇವಿನ ಎಣ್ಣೆ ಸೇರಿದಂತೆ 16 ವಿಧಗಳ ಎಣ್ಣೆಗಳನ್ನು ಉತ್ಪಾದಿಸಲಾಗುತ್ತಿದೆ.
ಗಾಣದಲ್ಲಿ ಒಂದು ಕೆ.ಜಿ. ಕಡಲೆಕಾಯಿ ಎಣ್ಣೆ ತೆಗೆಯಲು 3 ಕೆ.ಜಿ.ಯಿಂದ 3.5 ಕೆ.ಜಿ. ಕಡಲೆಕಾಯಿಗಳನ್ನು ಬಳಕೆ ಮಾಡಲಾಗುತ್ತದೆ. ಒಂದು ಕೆ.ಜಿ ಕಡಲೆಕಾಯಿಗೆ ₹ 120 ಇದೆ. ಇದರಿಂದಾಗಿ ತಯಾರಿಕೆ ವೆಚ್ಚವನ್ನು ಒಳಗೊಂಡು ಒಂದು ಕೆ.ಜಿ. ಕಡಲೆಕಾಯಿ ಎಣ್ಣೆಯನ್ನು ₹ 415ಕ್ಕೆ ಮಾರಾಟ ಮಾಡ ಲಾಗುತ್ತಿದೆ. ಮಾರುಕಟ್ಟೆಯಲ್ಲಿ ಕೆಲ ಕಂಪನಿಗಳು ಒಂದು ಕೆ.ಜಿ ಕಡಲೆಕಾಯಿ ಎಣ್ಣೆಯನ್ನು ₹ 120ಕ್ಕೆ ಮಾರಾಟ ಮಾಡುತ್ತಿವೆ. ಈ ದರದ ವ್ಯತ್ಯಾಸವೇ ನಾವು ಸೇವಿಸುತ್ತಿರುವ ಎಣ್ಣೆ ಎಷ್ಟು ಕಲಬೆರಿಕೆ ಆಗಿದೆ ಎನ್ನುವುದನ್ನು ತಿಳಿಸುತ್ತದೆ. ಗಾಣದಲ್ಲಿ ತೆಗೆಯುವಕೊಬ್ಬರಿ ಸೇರಿದಂತೆ ವಿವಿಧ ಎಣ್ಣೆಗಳು ತುಸು ದುಬಾರಿಯಾದರೂ ಪರಿಶುದ್ಧವಾಗಿರುತ್ತವೆ.
ಹೆಚ್ಚು ಬಾಳಿಕೆ: ‘ಕಳಪೆ ಬೀಜಗಳ ಬಳಕೆ ಹಾಗೂ ಕಲಬೆರಿಕೆ ಮಾಡಿದಲ್ಲಿ ಅಗ್ಗದ ದರಕ್ಕೆ ಎಣ್ಣೆಯನ್ನು ನೀಡಬಹುದು. ನಾವು ಎಣ್ಣೆ ಉತ್ಪಾದನೆಗೆ ದೇಶದ ವಿವಿಧೆಡೆಯಿಂದ ಆಯ್ದ ಬೀಜಗಳನ್ನು ತಂದು, ಸ್ವಚ್ಛಗೊಳಿಸಿ ಬಳಸುತ್ತೇವೆ. ಶುದ್ಧ ಎಣ್ಣೆಯನ್ನು ನೀರಿನ ದರಕ್ಕೆ ನೀಡಲು ಸಾಧ್ಯವಿಲ್ಲ’ ಎನ್ನುತ್ತಾರೆ ‘ಸಪ್ತಮ್’ ಕಂಪನಿಯು ಸಂಸ್ಥಾಪಕ ಮನೋಹರ್ ಅಯ್ಯರ್.
ಇದನ್ನೂ ಓದಿ:
ಒಳನೋಟ| ಕಾಯ್ದೆ ಇದ್ದರೂ ಇಲ್ಲ ಕಡಿವಾಣ! ದೂರುಗಳು ಬೆಟ್ಟದಷ್ಟು, ಕ್ರಮ ಇಷ್ಟೇ ಇಷ್ಟು
ಒಳನೋಟ | ಕಲಬೆರಕೆ ಮಾಫಿಯಾ, ಖಾದ್ಯ ತೈಲದಲ್ಲೂ ವಿಷ
ಒಳನೋಟ | ರಾಜ್ಯದಲ್ಲಿ ಇನ್ನೂ ಉಸಿರಾಡುತ್ತಿದೆ ಗಾಣದೆಣ್ಣೆ ಉದ್ಯಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.