
ಹಿಂದೂ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ದೇವಸ್ಥಾನದಲ್ಲಿ ದೇವರ ಪೂಜೆಯ ನಂತರ ತೀರ್ಥದಲ್ಲಿ ತುಳಸಿ ಎಲೆಯನ್ನು ಹಾಕಲಾಗುತ್ತದೆ. ತುಳಸಿ ತೀರ್ಥದ ಮಹತ್ವವೇನು ಎಂಬುದನ್ನು ತಿಳಿಯೋಣ.
ವಿಷ್ಣುವಿಗೆ ಅತ್ಯಂತ ಪ್ರಿಯವಾದ ಎಲೆ ಎಂದರೆ ತುಳಸಿ ಎಂದು ಹೇಳಲಾಗುತ್ತದೆ. ತುಳಸಿ ಗಿಡದಲ್ಲಿ ಸಕಲ ದೇವತೆಗಳು ವಾಸಿಸುತ್ತಾರೆ. ಹೀಗಾಗಿ ಪ್ರತಿ ದಿನ ಬೆಳಿಗ್ಗೆ ಸ್ನಾನವಾದ ನಂತರ ತುಳಸಿ ಪೂಜೆ ಮಾಡಿ ತದನಂತರ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಪ್ರಾರಂಭಿಸುತ್ತಾರೆ.
ನಿತ್ಯ ತುಳಸಿ ಗಿಡವನ್ನು ಪೂಜಿಸುವುರಿಂದ ಪುಣ್ಯಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ. ತುಳಸಿ ದೈವ ಶಕ್ತಿಯನ್ನು ಹೊಂದಿರುವ ಗಿಡ. ತುಳಸಿ ಎಲೆ ಹಾಕಿದ ತೀರ್ಥ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ತುಳಸಿಯಲ್ಲಿ ಶಾಮ ತುಳಸಿ ಮತ್ತು ರಾಮ ತುಳಸಿ ಎಂಬ ಎರಡು ಪ್ರಕಾರಗಳಿವೆ.
ಯಾರ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಅವರ ಮನೆಯಲ್ಲಿ ನಡೆಯುವ ಶುಭಕಾರ್ಯಗಳು ಅಪೂರ್ಣ ಎನ್ನಲಾಗುತ್ತದೆ.
ಸ್ಕಂದ ಪುರಾಣದ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ಸಿಕ್ಕ ಅಮೃತದ ಒಂದು ಬಿಂದು ಭೂಮಿಯ ಮೇಲೆ ಬೀಳುತ್ತದೆ. ಅದು ತುಳಸಿ ಗಿಡವಾಗಿ ಪರಿವರ್ತನೆಯಾಯಿತು ಎಂದು ಹೇಳಲಾಗುತ್ತದೆ. ಈ ಕಾರಣದಿಂದ ತುಳಸಿಯನ್ನು ದೇವಸ್ಥಾನದಲ್ಲಿ ದೇವರಿಗೆ ಪೂಜೆ ಅರ್ಪಿಸಿದ ನಂತರ ತೀರ್ಥದಲ್ಲಿ ತುಳಸಿ ಎಲೆ ಹಾಕಿ ಭಕ್ತರಿಗೆ ನೀಡಲಾಗುತ್ತದೆ.
ಪುರಾಣ ಕಥೆಗಳ ಪ್ರಕಾರ ತೀರ್ಥ ಸ್ವೀಕರಿಸುವುದರಿಂದ ಮೋಕ್ಷ ದೊರೆಯಲಿದೆ ಎಂಬ ನಂಬಿಕೆ ಇದೆ.
ತುಳಸಿ ತೀರ್ಥವನ್ನು ಮೂರು ಬಾರಿ ಸ್ವೀಕರಿಸುವುದರಿಂದ ಆರೋಗ್ಯ, ಜ್ಞಾನ ಹಾಗೂ ಶಾಂತಿ ಲಭಿಸುತ್ತದೆ.
ಎಡಗೈ ಮೇಲೆ ಬಲಗೈಯನ್ನು ಇಟ್ಟು ತೋರು ಬೆರಳನ್ನು ಗೋಮುಖವಾಗಿ ಮಡಿಚಿ ತೀರ್ಥವನ್ನು ಸ್ವೀಕರಿಸಬೇಕು.
ಯಾವುದೇ ಕಾರಣಕ್ಕೂ ತೀರ್ಥವನ್ನು ಸ್ವೀಕರಿಸಿದ ನಂತರ ತಲೆಗೆ ಒರೆಸಿಕೊಳ್ಳಬಾರದು. ಈ ರೀತಿ ಮಾಡುವುದರಿಂದ ತೀರ್ಥದ ಪವಿತ್ರತೆ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಕಾರಣ ನಾವು ಸ್ವೀಕರಿಸಿದ ತೀರ್ಥ ಎಂಜಲು ಆಗುವುದರಿಂದ ಆ ಎಂಜಲನ್ನು ತನ್ನ ತಲೆಯ ಮೇಲೆ ಒರೆಸಿಕೊಳ್ಳಬಾರದು.
ತುಳಸಿ ತೀರ್ಥವನ್ನು ಕಣ್ಣಿಗೆ ಹೊತ್ತಿಕೊಂಡು ಸ್ವೀಕರಿಸಬೇಕು ಎಂದು ಶಾಸ್ತ್ರಾನುಸಾರ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.