
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಾಗಲಕೋಟೆ: ‘ಸಚಿವ ಸ್ಥಾನ ಸಿಗುವುದರಿಂದ ಸಮುದಾಯ ಉದ್ಧಾರ ಆಗಲ್ಲ. ಮೀಸಲಾತಿ ಮುಖ್ಯ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಮುದಾಯದವರಿಗೆ ಸಚಿವ ಸ್ಥಾನ ನೀಡಿದ ಬಳಿಕ ಏನೇನೂ ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಸಚಿವ, ಶಾಸಕರಿಂದ ಸಮುದಾಯಕ್ಕೆ ನ್ಯಾಯ ಸಿಗುವುದು ಕಷ್ಟ. ಆದರೆ, ಮೀಸಲಾತಿ ಸೌಲಭ್ಯದಿಂದ ನ್ಯಾಯ ಸಿಗುತ್ತದೆ’ ಎಂದು ಹೇಳಿದರು.
‘ಮೀಸಲಾತಿಗಾಗಿ ಸಚಿವರು, ಶಾಸಕರು ಎಷ್ಟು ಹೋರಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಸಚಿವ ಸ್ಥಾನ ಯಾರಿಗಾದರೂ ಕೊಡಲಿ. ಮೀಸಲಾತಿಗಾಗಿ ಪ್ರಾಮಾಣಿಕ ಹೋರಾಟ ನಡೆಯಲಿದೆ’ ಎಂದರು.
‘ವಚನಾನಂದ ಸ್ವಾಮೀಜಿ ತಮ್ಮದೇ ಆದ ರೀತಿ ಕಾನೂನು ಹೋರಾಟ ಮಾಡುತ್ತಾರೆ. ಮೀಸಲಾತಿ ಚಳವಳಿಯಲ್ಲಿ ಕೆಲ ಭಿನ್ನಾಭಿಪ್ರಾಯಗಳಿವೆ. ಸಮಾಜದ ಹಿರಿಯರು ಬಗೆಹರಿಸುವರು’ ಎಂದರು.
ಕಾನೂನು ಹೋರಾಟ: ವಚನಾನಂದ ಸ್ವಾಮೀಜಿ
ಬಾಗಲಕೋಟೆ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯಕ್ಕಾಗಿ ಬೀದಿ ಹೋರಾಟದ ಬದಲು ಕಾನೂನು ಹೋರಾಟ ಮಾಡುತ್ತೇವೆ’ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು. ಮೀಸಲಾತಿ ಹೋರಾಟದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಬೆಂಬಲಿಸುವಿರಾ ಎಂಬ ಪ್ರಶ್ನೆಗೆ ಅವರು ‘ಆರಂಭಿಕ ಹಂತದಲ್ಲಿ ಜಾಗೃತಿ ಮೂಡಿಸಲು ಬೀದಿ ಹೋರಾಟ ಬೇಕಿತ್ತು. ಯಾರ ವಿರುದ್ಧವೂ ಮಾತನಾಡಲ್ಲ’ ಎಂದರು. ರಾಜಕಾರಣಿಗಳಿಂದ ಸ್ವಾಮೀಜಿಗಳ ಬಳಕೆ ಕುರಿತು ಪ್ರತಿಕ್ರಿಯಿಸಿ ‘ಸ್ವಾಮೀಜಿಗಳು ಜಾಣರಾಗಬೇಕು. ಹಿತ್ತಾಳೆ ಕಿವಿ ಮಾಡಿಕೊಳ್ಳಬಾರದು. ನಮ್ಮನ್ನು ಯಾರೂ ದುರ್ಬಳಕೆ ಮಾಡಿಕೊಂಡಿಲ್ಲ. ಮಾಡಿಕೊಳ್ಳಲು ಆಗುವುದೂ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.