ಆನೇಕಲ್: ಕೆ.ಆರ್. ಮಾರುಕಟ್ಟೆಯಲ್ಲಿರುವ ಹೂ ಮಾರುಕಟ್ಟೆಯನ್ನು ಹೆಬ್ಬಾಳದ ಜಿಕೆವಿಕೆಗೆ ಆವರಣಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಬಿಡುವಂತೆ ಪುಷ್ಪ ಕೃಷಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೆಬ್ಬಾಳದ ಜಿಕೆವಿಕೆ ಆವರಣಕ್ಕಿಂತ ಕೆ.ಆರ್. ಮಾರುಕಟ್ಟೆ ಆನೇಕಲ್ ರೈತರಿಗೆ ಹೆಚ್ಚು ಅನುಕೂಲ ಮತ್ತು ಸಮೀಪದಲ್ಲಿದೆ. ಜಿಕೆವಿಕೆ ಹೂವು ಮಾರುಕಟ್ಟೆಗೆ ಹೂ ತರುವುದರಿಂದ ಪ್ರಯಾಣ ಮತ್ತು ಸಾಗಾಟ ವೆಚ್ಚ ಏರಿಕೆಯಾಗಲಿದೆ ಎಂದು ರೈತರು ಆಕ್ಷೇಪ ಎತ್ತಿದ್ದಾರೆ.
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಆರ್ಟಿಓ ಕಚೇರಿ ಬಳಿಯಿರುವ ಸರ್ಕಾರಿ ಜಾಗದಲ್ಲಿ ಹೂವು ಮಾರುಕಟ್ಟೆ ಆರಂಭಿಸಬೇಕು ಎಂದು ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೂನಮಡಿವಾಳ ವೈ.ಸೋಮಣ್ಣ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಬ್ಯಾಗಡದೇನಹಳ್ಳಿಯಲ್ಲಿ ಸಂಘ ಶನಿವಾರ ಪುಷ್ಪೋದ್ಯಮ ರೈತರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತ್ತಿಬೆಲೆಯಲ್ಲಿ ಹೂವು ಮಾರುಕಟ್ಟೆ ಆರಂಭಿಸುವುದರಿಂದ ಆನೇಕಲ್, ಮಾಲೂರು, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ತಾಲ್ಲೂಕುಗಳ ಹೂ ಬೆಳೆಗಾರರಿಗೆ ಅನುಕೂಲವಾಗಲಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರ ಪ್ರಯಾಣ ಮತ್ತು ಸಾಗಾಟ ವೆಚ್ಚವೂ ಕಡಿಮೆಯಾಗಲಿದೆ. ಹಾಗಾಗಿ ಸರ್ಕಾರ ಜಿಕೆವಿಕೆಯಲ್ಲಿ ಕಾಯ್ದಿರಿಸಿರುವ ಜಾಗದ ಬದಲಿಗೆ ಅತ್ತಿಬೆಲೆಯಲ್ಲಿರುವ ಸರ್ಕಾರಿ ಜಾಗದಲ್ಲಿ ಅವಕಾಶ ಕಲ್ಪಿಸಬೇಕೆಂದು
ಕೋರಿದರು.
ಈ ಬಗ್ಗೆ ಹಲವಾರು ಸಭೆಗಳಲ್ಲಿ, ಗ್ರಾಮಸಭೆಗಳಲ್ಲಿ ತಿಳಿಸಲಾಗಿದೆ. ಸಂಸದರ ಜನಸ್ಪಂದನಾ ಕಾರ್ಯಕ್ರಮದಲ್ಲಿಯೂ ರೈತರ ಸಮಸ್ಯೆಯ ಬಗ್ಗೆ ವಿವರಿಸಲಾಗಿದೆ. ಮುಂದಿನ ದಿನಗಳಲ್ಲಿ ತೋಟಗಾರಿಕೆ ಸಚಿವರು ಮತ್ತು ಆನೇಕಲ್ ತಾಲ್ಲೂಕಿನವರೇ ಆದ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹೂವು ಮಾರುಕಟ್ಟೆಯನ್ನು ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಆರ್ಟಿಓ ಕಚೇರಿ ಸಮೀಪದ ಸರ್ಕಾರಿ ಜಾಗದಲ್ಲಿ ಆರಂಭಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಲೋಕೇಶ್ ಮಾತನಾಡಿ, ಈ ಭಾಗದಲ್ಲಿ ನೈಸ್ ರಸ್ತೆ, ಎಸ್ಟಿಆರ್ಆರ್ ರಸ್ತೆ, ಮೆಟ್ರೊ ಸೇವೆ, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೆ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಇರುವುದರಿಂದ ಅತ್ತಿಬೆಲೆಯಲ್ಲಿ ಹೂವಿನ ಮಾರುಕಟ್ಟೆಯನ್ನು ಆರಂಭಿಸಬೇಕು. ಹೆಬ್ಬಾಳದಲ್ಲಿ ಹೂವು ಮಾರುಕಟ್ಟೆ ಆರಂಭಿಸುವುದರಿಂದ ರೈತರು ಬೆಳೆ ಬೆಳೆಯುವುದಕ್ಕಿಂತ ಸಾಗಾಟಕ್ಕೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ವಾಹನ ದಟ್ಟಣೆ ಹೆಚ್ಚಿರುವುದರಿಂದ ಹೂವು ವ್ಯಾಪಾರಕ್ಕೆ ತೊಂದರೆಯಾಗಲಿದೆ
ಎಂದರು.
ಹಸಿರು ಮನೆ ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಮೋಹನ್, ನಿರ್ದೇಶಕರಾದ ಇಂಡ್ಲವಾಡಿ ಬಾಬುರೆಡ್ಡಿ, ಮಂಜುನಾಥ್ ರೆಡ್ಡಿ, ಅಶೋಕ್ ಕುಮಾರ್, ರಮೇಶ್ ರೆಡ್ಡಿ, ಮಧು ಗೌಡ, ಕೀರ್ತನ, ಗೋಪಾಲ್ ರೆಡ್ಡಿ, ರಾಜಗೋಪಾಲ್ ರೆಡ್ಡಿ, ಮಂಜುನಾಥ್, ವೆಂಕಟೇಶ್ ಇದ್ದರು.
ಸಾಗಾಟ ಖರ್ಚು ಜಾಸ್ತಿ
ಬೆಂಗಳೂರು ನಗರ ಗ್ರಾಮಾಂತರ ಪ್ರದೇಶಗಳಲ್ಲಿ 1500ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ ರೈತರು ಪುಷ್ಪ ಕೃಷಿ ಮಾಡುತ್ತಾರೆ. ಕಳೆದ 20 ವರ್ಷಗಳಿಂದ ಹೂವುಗಳನ್ನು ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೀಗ ಹೆಬ್ಬಾಳದ ಜಿಕೆವಿಕೆಯಲ್ಲಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗಲಿದೆ. ಓಡಾಟ ಖರ್ಚು ಹೆಚ್ಚಾಗಿದೆ. ದಲ್ಲಾಳಿಗಳ ಕಾಟ ಹೆಚ್ಚಾಗಲಿದೆ. ಹಾಗಾಗಿ ಈ ಬಗ್ಗೆ ಮರುಪರಿಶೀಲನೆ ನಡೆಸಿ ಅತ್ತಿಬೆಯಲ್ಲಿಯೇ ಹೂವು ಮಾರುಕಟ್ಟೆಯನ್ನು ಸ್ಥಾಪಿಸಬೇಕು ಎಂದು ರೈತರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.