ADVERTISEMENT

ಬೆಂಗಳೂರಿನ ರಸ್ತೆ ಅವ್ಯವಸ್ಥೆಗೆ ಉದ್ಯಮಿಗಳ ಆಕ್ರೋಶ:ಆಂಧ್ರಕ್ಕೆ ಬನ್ನಿ ಎಂದ ಲೋಕೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2025, 9:13 IST
Last Updated 17 ಸೆಪ್ಟೆಂಬರ್ 2025, 9:13 IST
<div class="paragraphs"><p>ನಾರಾ ಲೋಕೇಶ್</p></div>

ನಾರಾ ಲೋಕೇಶ್

   

ಹೈದರಾಬಾದ್‌: ಆನ್‌ಲೈನ್‌ ಟ್ರಾಕಿಂಗ್‌ ಪ್ಲಾಟ್‌ಫಾರಂ ‘ಬ್ಲ್ಯಾಕ್‌ಬಕ್‌’ ಬೆಂಗಳೂರಿನಿಂದ ತನ್ನ ಕಂಪನಿಯನ್ನು ಸ್ಥಳಾಂತರಿಸುವುದಾದರೆ ವಿಶಾಖಪಟ್ಟಣಕ್ಕೆ ಬರುವಂತೆ ಆಂಧ್ರ ಪ್ರದೇಶದ ಮಾಹಿತಿ ತಂತ್ರಜ್ಞಾನ (ಐಟಿ) ಸಚಿವ ನಾರಾ ಲೋಕೇಶ್‌ ಬುಧವಾರ ಆಹ್ವಾನಿಸಿದ್ದಾರೆ.

ಬೆಂಗಳೂರಿನಲ್ಲಿ ಹದಗೆಡುತ್ತಿರುವ ಮೂಲಸೌಕರ್ಯ ಮತ್ತು ಪ್ರಯಾಣ ಸಮಸ್ಯೆಗಳ ಕುರಿತು ಬ್ಲ್ಯಾಕ್‌ಬಕ್ ಕಂಪನಿಯು ಸಹ ಸ್ಥಾಪಕ ಮತ್ತು ಸಿಇಒ ರಾಜೇಶ್‌ ಯಾಬಾಜಿ ಅವರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಸಚಿವ ಲೋಕೇಶ್‌ ಅವರು ಕಂಪನಿಯನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದಾರೆ. 

ADVERTISEMENT

‘ಬೆಂಗಳೂರಿನ ಹೊರ ವರ್ತುಲ ರಸ್ತೆ (ಒಆರ್‌ಆರ್‌) ಬಳಿಯ ಬೆಳ್ಳಂದೂರಿನಲ್ಲಿ ನಮ್ಮ ಕಚೇರಿಯಿದೆ. ಗುಂಡಿ ಬಿದ್ದ ರಸ್ತೆಗಳು, ವಿಪರೀತ ದೂಳಿನಿಂದಾಗಿ ಕಚೇರಿಗೆ ಬರಲು ಸಹೋದ್ಯೋಗಿಗಳು ನಿತ್ಯ ಒಂದೂವರೆ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಮನೆಗೆ ಹೋಗುವಾಗಲೂ ಇಷ್ಟೇ ಸಮಯ ಆಗುತ್ತಿದೆ. ಹೀಗಾಗಿ ಕಂಪನಿಯನ್ನು ಇಲ್ಲಿಂದ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ’ ಎಂದು ಯಾಬಾಜಿ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಲೋಕೇಶ್‌, ‘ನೀವು ವಿಶಾಖಪಟ್ಟಣದಲ್ಲಿ ಕಂಪನಿಯನ್ನು ಸ್ಥಾಪಿಸಲು ಬಯಸುತ್ತೀರಾ? ಇದು ಸ್ವಚ್ಛತೆಯಲ್ಲಿ ದೇಶದಲ್ಲಿಯೇ 5ನೇ ಸ್ಥಾನದಲ್ಲಿರುವ ನಗರ. ಅಲ್ಲದೆ ಅತ್ಯುತ್ತಮ ಮೂಲಸೌಕರ್ಯ ಹೊಂದಿದ್ದು, ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರವೂ ಆಗಿದೆ. ಈ ಸಂಬಂಧ ನೀವು ನೇರವಾಗಿ ನನಗೆ ಸಂದೇಶ ಕಳುಹಿಸಬಹುದು’ ಎಂದು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಸಚಿವ ನಾರಾ ಲೋಕೇಶ್‌ ಅವರು ಬೆಂಗಳೂರಿನ ಕಂಪನಿಗಳನ್ನು ಆಂಧ್ರಕ್ಕೆ ಆಹ್ವಾನಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಅವರು, ಬೆಂಗಳೂರಿನ ವೈಮಾನಿಕ ಉದ್ಯಮದಲ್ಲಿರುವವರಿಗೆ ಆಂಧ್ರಕ್ಕೆ ಬರುವಂತೆ ಸ್ವಾಗತಿಸಿದ್ದರು.  

ಕಳೆದ ವರ್ಷ ಕರ್ನಾಟಕ ಸರ್ಕಾರವು ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಪ್ರಸ್ತಾಪ ಮಾಡಿದಾಗ, ‘ನಾಸ್‌ಕಾಮ್‌’ ಮತ್ತು ಕೆಲ ಐಟಿ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಆಗಲೂ ಲೋಕೇಶ್‌ ಅವರು, ಅವರೆಲ್ಲರಿಗೂ ವಿಶಾಖಪಟ್ಟಣಕ್ಕೆ ಬರುವಂತೆ ಆಹ್ವಾನ ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.