ADVERTISEMENT

ಶಿಡ್ಲಘಟ್ಟ: ಮೆಟ್ಟಿಲು ಬಾವಿಯಲ್ಲಿ ತುಂಬಿದ ನೀರು

ಶತಮಾನದ ಇತಿಹಾಸ: ಸಾರುತ್ತಿವೆ ಜಲಸಮೃದ್ಧಿ

ಡಿ.ಜಿ.ಮಲ್ಲಿಕಾರ್ಜುನ
Published 26 ಜುಲೈ 2022, 5:44 IST
Last Updated 26 ಜುಲೈ 2022, 5:44 IST
ಶಿಡ್ಲಘಟ್ಟ ತಾಲ್ಲೂಕಿನ ರಾಜಣ್ಣ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಮೆಟ್ಟಿಲು ಬಾವಿಯಲ್ಲಿ ನೀರು ತುಂಬಿಕೊಂಡಿರುವುದು
ಶಿಡ್ಲಘಟ್ಟ ತಾಲ್ಲೂಕಿನ ರಾಜಣ್ಣ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಮೆಟ್ಟಿಲು ಬಾವಿಯಲ್ಲಿ ನೀರು ತುಂಬಿಕೊಂಡಿರುವುದು   

ಶಿಡ್ಲಘಟ್ಟ: ಕಳೆದ ಎರಡು ವರ್ಷಗಳಿಂದ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಹಲವಾರು ಚೆಕ್ ಡ್ಯಾಂ, ಕೆರೆಗಳು, ಹಳ್ಳ ಹಾಗೂ ನಾಲೆಗಳು ತುಂಬಿ ಹರಿಯುತ್ತಿವೆ. ಅಂತರ್ಜಲ ವೃದ್ಧಿಸಿ, ನೀರಿಲ್ಲದೆ ಒಣಗಿದ್ದ ಕೊಳವೆಬಾವಿಗಳು ನೀರನ್ನು ಹರಿಸುತ್ತಿವೆ. ಇದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿದ್ದ ಹಳೆಯ ಕುಂಟೆಗಳನ್ನು ಸುಂದರ ನೀರಿನ ಹೊಂಡಗಳಾಗಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ನೀರು ತುಂಬಿಕೊಂಡ ನೀರಿನ ಹೊಂಡಗಳು ಬೇಸಿಗೆ ಸೇರಿದಂತೆ ಇಡೀ ವರ್ಷ ಆಯಾ ಗ್ರಾಮಗಳ ಜನ ಜಾನುವಾರುಗಳಿಗೆ ಜಲಮೂಲಗಳಾಗಿ ಅಕ್ಷಯ ನೀರಿನ ಪಾತ್ರೆಗಳಾಗಿವೆ.

ತಾಲ್ಲೂಕಿನ ಬೆಳ್ಳೂಟಿ, ಚೀಮಂಗಲ, ಸದ್ದಹಳ್ಳಿ, ಮಳಮಾಚನಹಳ್ಳಿ, ಈ.ತಿಮ್ಮಸಂದ್ರ, ಸುಂಡ್ರಹಳ್ಳಿ, ಎದ್ದಲತಿಪ್ಪೇನಹಳ್ಳಿ, ಹೊಸಪೇಟೆ, ಹಿರೇಬಲ್ಲ, ಚೌಡಸಂದ್ರ, ಕೊತ್ತನೂರು, ವೀರಾಪುರ, ಬಳುವನಹಳ್ಳಿ, ಭಕ್ತರಹಳ್ಳಿ, ದೊಡ್ಡಚೊಕ್ಕಂಡಹಳ್ಳಿ, ಹಾರಡಿ, ಕಾಳನಾಯಕನಹಳ್ಳಿ, ಮಲ್ಲೇನಹಳ್ಳಿ ಮುಂತಾದೆಡೆ ಈಗಾಗಲೇ ನಿರ್ಮಾಣಗೊಂಡು ಮಳೆನೀರು ತುಂಬಿಕೊಂಡ ನೀರಿನ ಹೊಂಡಗಳು ತಮ್ಮ ಉಪಯುಕ್ತತೆಯನ್ನು ಸಾರುವಂತಿವೆ.

ADVERTISEMENT

ಹಳ್ಳಿಗಳಲ್ಲಿ ಪಾಳುಬಿದ್ದ ಕುಂಟೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿ ಮಳೆ ನೀರು ಸಮರ್ಪಕವಾಗಿ ಶೇಖರಣೆಯಾಗುವಂತೆ ನೀರಿನ ಹೊಂಡಗಳನ್ನು ನಿರ್ಮಿಸಲಾಗಿದೆ. ಇವುಗಳಿಂದ ಒಂದೆಡೆ ಅಂತರ್ಜಲ ವೃದ್ಧಿ, ಮತ್ತೊಂದೆಡೆ ಜನ ಜಾನುವಾರುಗಳಿಗೆ ನಿರಂತರವಾಗಿ ನೀರು ಸಿಗುವಂತಾಗಿದೆ. ಹಿಂದೆಲ್ಲಾ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವಂತಿದ್ದ ಹಲವಾರು ಹಳ್ಳಿಗಳಿಗೆ ಈ ನೀರಿನ ಹೊಂಡಗಳು ವರದಾನವಾಗಿ ಪರಿಣಮಿಸಿವೆ. ಇವುಗಳಿಂದ ಕೊಳವೆ ಬಾವಿಗಳೂ ಸಹ ಮರುಜೀವ ಪಡೆದುಕೊಂಡಿವೆ.

‘ನೀರು ನಮ್ಮೊಬ್ಬರ ಸ್ವತ್ತಲ್ಲ, ಎಲ್ಲರ ಬಳಕೆಗೂ ಇದು ನಿಲುಕುವಂತಿರಬೇಕು’ ಎಂಬುದು ಹಿಂದೆ ಗ್ರಾಮೀಣರ ಆದರ್ಶವಾಗಿತ್ತು. ಹಾಗೆಂದೇ ಜನರು ಓಡಾಡುವ ರಸ್ತೆ ಬದಿಯ ಜಮೀನಿರುವವರು ಬಾವಿ ತೋಡಿಸಿದರೆ ಅದು ಮೆಟ್ಟಿಲು ಬಾವಿಯೇ ಆಗಿರುತ್ತಿತ್ತು. ಈ ಆದರ್ಶವನ್ನು ಹೊತ್ತು ತಾಲ್ಲೂಕಿನ ವಲಸೇನಹಳ್ಳಿಯ ರಾಜಣ್ಣ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಿರ್ಮಿಸಿರುವ ನಾಲ್ಕು ಮೆಟ್ಟಿಲು ಬಾವಿಗಳನ್ನು ನೋಡಬಹುದಾಗಿದೆ. ಇವಕ್ಕೆ ಒಂದು ಶತಮಾನದ ಇತಿಹಾಸವಿದೆ.

ನೀರಿಗಾಗಿ ಜಗಳ, ಕೊಳವೆಬಾವಿಗಳಿಗಾಗಿ ನಡೆಯುವ ವ್ಯಾಜ್ಯ, ನಮ್ಮ ಭೂಮಿಯ ನೀರು ನಮ್ಮದು ಎಂಬ ಸ್ವಾರ್ಥದ ಈಗಿನ ದಿನಗಳಲ್ಲಿ, ಅಪಾರ ಮಾನವ ಶ್ರಮದಿಂದ ಕಲ್ಲನ್ನು ಕೆತ್ತಿ ನಿರ್ಮಿಸಲ್ಪಟ್ಟ ಈ ಮೆಟ್ಟಿಲು ಬಾವಿಗಳು ಸೌಹಾರ್ದ, ಪರೋಪಕಾರ, ಜನೋಪಯೋಗಿ ಆದರ್ಶಗಳ ಪ್ರತೀಕವಾಗಿ ಕಣ್ಣಿಗೆ ಗೋಚರಿಸುತ್ತವೆ.

ರಾಮೇಶ್ವರ ಗ್ರಾಮಕ್ಕೆ ಸೇರುವ ಕೊತ್ತೋಳ್ಳ ನಾರಾಯಣಪ್ಪ ಅವರ ಬಾವಿ, ವಲಸೇನಹಳ್ಳಿಗೆ ಸೇರುವ ಸೀತಪ್ಪನವರ ಬಾವಿ, ಸೊಣ್ಣಪ್ಪನವರ ಬಾವಿ ಮತ್ತು ಮುದ್ದಯ್ಯ ಬಾವಿ ಇವು ಒಂದೊಂದು ಬಾವಿಯೂ ನೂರು ವರ್ಷಗಳನ್ನು ಕಂಡಿವೆ. ಈ ನಾಲ್ಕೂ ಬಾವಿಗಳು ವಲಸೇನಹಳ್ಳಿಯ ರಾಜಣ್ಣ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿವೆ. ಕೆರೆಯಲ್ಲಿ ನೀರು ತುಂಬಿದಾಗ ಇವುಗಳಲ್ಲೂ ನೀರು ಇರುತ್ತದೆ. ಎರಡು ವರ್ಷಗಳ ಮಳೆಯಿಂದ ಕೆರೆ ಬತ್ತಿಲ್ಲ, ಹಾಗಾಗಿ ಬಾವಿಯಲ್ಲಿ ನೀರು ತುಂಬಿದ್ದು ನೋಡಲು ಖುಷಿಯಾಗುತ್ತದೆ.

ಹಿಂದೆ ವ್ಯವಸಾಯಕ್ಕೆ ಮತ್ತು ಮನೆ ಬಳಕೆಗೆ ಇವುಗಳ ನೀರು ಬಳಕೆಯಾಗುತ್ತಿತ್ತು. ಕೊಳವೆ ಬಾವಿಗಳ ಬಳಕೆ ಶುರುವಾದ ಮೇಲೆ ಅದು ನಿಂತಿತು. ಈಜಲು ಸೊಗಸಾದ ಬಾವಿಗಳಿವು. ಬಶೆಟ್ಟಹಳ್ಳಿ, ಕುಂಬಾರಹಳ್ಳಿ, ವಲಸೇನಹಳ್ಳಿ, ರಾಮೇಶ್ವರ, ನಲ್ಲರಾಳ್ಳಹಳ್ಳಿ, ಒಂಟೂರು ಮೊದಲಾದ ಗ್ರಾಮದ ಯುವಕರು ಈ ಬಾವಿಗಳಲ್ಲಿ ಈಜುತ್ತಾರೆ ಎಂದು ರಾಮೇಶ್ವರ ಗ್ರಾಮದ ಸತೀಶ್ ತಿಳಿಸಿದರು.

ನೀರು ಸಂಗ್ರಹಣೆ: ನದಿ ನಾಲೆಗಳಿಲ್ಲದ ನಮ್ಮ ತಾಲ್ಲೂಕಿನ ಜನರು ಮಳೆ ನೀರು ಸಂಗ್ರಹಿಸಲೇಬೇಕು. ಇದಕ್ಕಾಗಿ ನರೇಗಾ ಯೋಜನೆ ವರದಾನವಾಗಿದೆ. ಮಳೆ ನೀರನ್ನು ಸಂಗ್ರಹಿಸಲು ಹಲವೆಡೆ ನಿರ್ಮಿಸಲಾದ ಚೆಕ್ ಡ್ಯಾಂಗಳು ನೀರು ತುಂಬಿಕೊಂಡಿರುವುದು ಕಂಡಾಗ ಮನತುಂಬಿ ಬರುತ್ತದೆ.

ಅಂಜನ್ ಕುಮಾರ್, ಪಿಡಿಒ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ

ಅಂತರ್ಜಲ ವೃದ್ಧಿ: ಚೆಕ್ ಡ್ಯಾಂ, ಹಳ್ಳ, ಕೆರೆಗಳಲ್ಲಿ ನೀರು ಸಂಗ್ರಹ ಮಾಡಿದರೆ ಅಂತರ್ಜಲ ತಾನಾಗಿಯೇ ವೃದ್ಧಿಯಾಗುತ್ತದೆ ಎಂಬುದನ್ನು ನಾವಿಲ್ಲಿ ಪ್ರತ್ಯಕ್ಷವಾಗಿ ನೋಡುವಂತಾಗಿದೆ. ನಮಗೆ ಈ ಬಾರಿ ಬೇಸಿಗೆಯಲ್ಲಿ ನೀರಿನ ಕೊರತೆಯಾಗದು.

ಪ್ರಭಾಕರ್, ರೈತ ಬೈರಗಾನಹಳ್ಳಿ

ಸಾರ್ಥಕ ಭಾವ: ನರೇಗಾ ಯೋಜನೆಯಲ್ಲಿ ಕೈಗೊಂಡ ಉಪಯುಕ್ತ ಕಾಮಗಾರಿಗಳಲ್ಲಿ ನೀರಿನ ಹೊಂಡಗಳು ಪ್ರಮುಖವಾದದ್ದು. ಮಳೆನೀರನ್ನು ಸಮರ್ಪಕವಾಗಿ ಸಂಗ್ರಹಿಸುವುದು, ವರ್ಷ ಪೂರಾ ನೀರಿನ ವ್ಯವಸ್ಥೆ, ಅಂತರ್ಜಲ ವೃದ್ಧಿಸುವುದು, ಗ್ರಾಮದ ಸೌಂದರ್ಯ ಹೆಚ್ಚಿಸುವುದು ಹೀಗೆ ನಾನಾ ಉಪಯೋಗಗಳಿವೆ. ನೀರು ತುಂಬಿರುವ ನೀರಿನ ಹೊಂಡಗಳನ್ನು ಹಾಗೂ ಅವುಗಳಿಂದ ಬತ್ತಿದ್ದ ಕೊಳವೆಬಾವಿಗಳಲ್ಲಿ ನೀರು ಬರುತ್ತಿರುವುದು ಕಂಡಾಗ ಸಾರ್ಥಕ ಭಾವ ಮೂಡುತ್ತದೆ.

ಮುನಿರಾಜು, ತಾಲ್ಲೂಕು ಪಂಚಾಯಿತಿ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.