ADVERTISEMENT

ಮಂಗಳೂರು: ಕಳ್ಳತನವಾಗಿದ್ದ 233 ಮೊಬೈಲ್‌ ಫೋನ್ ವಶಪಡಿಸಿಕೊಂಡ ಪೊಲೀಸರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 8:13 IST
Last Updated 31 ಅಕ್ಟೋಬರ್ 2025, 8:13 IST
<div class="paragraphs"><p>ಪತ್ರಿಕಾಗೋಷ್ಟಿಯಲ್ಲಿ&nbsp;ಡಿಸಿಪಿ ಮಿಥುನ್ ಎಚ್. ಎನ್ ಮಾಹಿತಿ ನೀಡಿದರು.</p></div>

ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿ ಮಿಥುನ್ ಎಚ್. ಎನ್ ಮಾಹಿತಿ ನೀಡಿದರು.

   

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 30ರ ನಡುವಿನ ಅವಧಿಯಲ್ಲಿ ಕಳ್ಳತನವಾಗಿದ್ದ 233 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡು ಅದರ ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್. ಎನ್ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೊಬೈಲ್ ‌ಫೋನ್ ಕಳ್ಳತನದ ಬಗ್ಗೆ ನಿಗಾ ಇಡಲು ಸೆನ್ ಠಾಣೆಯ ಎಸಿಪಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದರು.

ADVERTISEMENT

ಮೊಬೈಲ್ ಫೋನ್ ಕಳ್ಳತನವಾದಾಗ, ಸಂಶಯಾಸ್ಪದ ಕರೆಗಳು ಬಂದಾಗ ‘ಸಂಚಾರ್ ಸಾಥಿ’ ಪೋರ್ಟಲ್ ಬಳಸಿಕೊಂಡು ನಂಬರ್ ಅನ್ನು ಬ್ಲಾಕ್ ಮಾಡಿಸಬಹುದು. ಸೈಬರ್ ಅಪರಾಧ ಸಹಾಯವಾಣಿ 1930 ಈ ಸಂಖ್ಯೆಗೆ ಕರೆ ಮಾಡಬಹುದು.

ಜನರು ಈ ಬಗ್ಗೆ ತಿಳಿವಳಿಕೆ ಹೊಂದಿರಬೇಕು ಎಂದರು‌.

ಇತ್ತೀಚೆಗೆ ಕಾಲ್ ಮರ್ಜಿಂಗ್ ಹೆಸರಿನಲ್ಲಿ ಸೈಬರ್ ವಂಚನೆ ಪ್ರಕರಣ‌ಗಳು ಅಲ್ಲಲ್ಲಿ ವರದಿಯಾಗಿವೆ. ಕಾನ್ಪರೆನ್ಸ್ ಕಾಲ್ ಮಾಡಿ, ಮೋಸದಿಂದ ಒಟಿಪಿ ಪಡೆದು ಹಣ ವಂಚನೆ ಮಾಡಿರುವ‌ ಪ್ರಕರಣಗಳು ಬೇರೆ ಕಡೆಗಳಲ್ಲಿ ನಡೆದಿವೆ. ಮಂಗಳೂರು ‌ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ವರೆಗೆ ಇಂತಹ ಪ್ರಕರಣ ದಾಖಲಾಗಿಲ್ಲ. ಆದರೆ, ಸಾರ್ವಜನಿಕರು‌ ಎಚ್ಚರದಿಂದ‌ ಇರಬೇಕು ಎಂದರು.

4793 ಪ್ರಕರಣ:

ನಗರದ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಮೂರು ಮೂರು ತಿಂಗಳುಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ನೋ‌ ಪಾರ್ಕಿಂಗ್, ಪಾದಚಾರಿ ಮಾರ್ಗದ ಮೇಲೆ ವಾಹನ ನಿಲುಗಡೆ ಸೇರಿದಂತೆ ಅನಧಿಕೃತವಾಗಿ

ವಾಹನ ನಿಲುಗಡೆ ಮಾಡಿದ್ದ ಮಾಲೀಕ, ಚಾಲಕರ ವಿರುದ್ಧ 4793 ಪ್ರಕರಣಗಳನ್ನು ದಾಖಲಿಸಿ ₹ 23,21,200 ದಂಡ ವಿಧಿಸಲಾಗಿದೆ ಎಂದು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಹೇಳಿದರು.

ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ, ಹೆಚ್ಚು ಅಪಘಾತಗಳಾಗುವ ಬ್ಲ್ಯಾಕ್ ಸ್ಪಾಟ್ ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ವೇಗವಾಗಿ ಚಾಲನೆ ಮಾಡುವ ವಾಹನಗಳ ವಿರುದ್ಧ ಕ್ರಮ ಕೈಗೊಂಡು 562 ಪ್ರಕರಣಗಳನ್ನು ದಾಖಲಿಸಿ ₹5.62 ಲಕ್ಷ ದಂಡ ವಿಧಿಸಲಾಗಿದೆ. ಟಿಂಟೆಡ್ ಗ್ಲಾಸ್ ಉಪಯೋಗಿಸಿದ 5865 ವಾಹನಗಳನ್ನು ಗುರುತಿಸಿ ₹24.85 ಲಕ್ಷ ದಂಡ ವಿಧಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.