ಮಂಗಳೂರು: ಸರಕು ಸಾಗಣೆ ಹಡಗು ಮುಳುಗಿ, ಸಮುದ್ರದಲ್ಲಿ ಸಿಲುಕಿದ್ದ 6 ಜನರನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಸಾಫಿನಾ ಅಲ್ ಮಿರ್ಜಾನ್ ಹಡಗು ಮಾ. 19 ರಂದು ನಗರದ ಬಂದರಿನಿಂದ ಮಸಾಲೆ ಪದಾರ್ಥ, ಆಹಾರ ಧಾನ್ಯ, ತರಕಾರಿ, ಮರಳು ಹಾಗೂ ಗ್ರಾನೈಟ್ ತೆಗೆದುಕೊಂಡು ಲಕ್ಷದ್ವೀಪಕ್ಕೆ ತೆರಳುತ್ತಿತ್ತು. ಶನಿವಾರ (ಮಾ.20) ಬೆಳಿಗ್ಗೆ 7 ಗಂಟೆಗೆ ಹಡಗಿನ ಎಂಜಿನ್ ರೂಮ್ಗೆ ನೀರು ನುಗ್ಗಿದ್ದು, ಕಾಸರಗೋಡಿನಿಂದ 40 ನಾಟಿಕಲ್ ಮೈಲಿ ದೂರದಲ್ಲಿ ಹಡಗು ಮುಳುಗಡೆಯಾಗಿತ್ತು. ಬೋಟ್ನಲ್ಲಿದ್ದ 6 ಜನರು ಸಮುದ್ರದ ಮಧ್ಯೆ ಆತಂಕಕ್ಕೆ ಸಿಲುಕಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಅಧಿಕಾರಿಗಳು, ಕೂಡಲೇ ಸಿಜಿ ಡ್ರೋನಿಯರ್ ವಿಮಾನವನ್ನು ಸ್ಥಳಕ್ಕೆ ಕಳುಹಿಸಿದ್ದರು. ಸಮುದ್ರದಲ್ಲಿ ಸಿಲುಕಿದ್ದ ಆರು ಜನರನ್ನು ಪತ್ತೆ ಮಾಡಿದ ವಿಮಾನದ ಸಿಬ್ಬಂದಿ, ಹಗ್ಗವನ್ನು ಬಿಟ್ಟು, ಅವರನ್ನು ರಕ್ಷಿಸಿದರು. ಸಮುದ್ರದಲ್ಲಿ ನಿಗಾ ವಹಿಸಿದ್ದ ಕರಾವಳಿ ಕಾವಲು ಪಡೆಯ ಹಡಗು ಸ್ಥಳಕ್ಕೆ ಬಂದಿದ್ದು, ಬೋಟ್ ಮೂಲಕ 6 ಮಂದಿಯನ್ನು ರಕ್ಷಣೆ ಮಾಡಲಾಯಿತು.
ಮಾಹಿತಿ ಸಿಕ್ಕ ನಂತರ ಕೇವಲ ಒಂದು ಗಂಟೆಯಲ್ಲಿಯೇ ಸ್ಥಳಕ್ಕೆ ತೆರಳಿ, ಗುಜರಾತಿನ ಐವರು ಹಾಗೂ ಮಂಗಳೂರಿನ ಒಬ್ಬ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಎಲ್ಲರಿಗೂ ಆಹಾರ, ಔಷಧಿ ನೀಡಲಾಗಿದ್ದು, ನವ ಮಂಗಳೂರು ಬಂದರಿಗೆ ಕರೆತರಲಾಗಿದೆ ರಂದು ಕರಾವಳಿ ಕಾವಲು ಪಡೆಯ ಕಮಾಂಡೆಂಟ್ ವೆಂಕಟೇಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.